.ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು .
***
- 31-12-16. ಕುಟುಂಬ ಪಿಂಚಣಿ ಸೌಲಭ್ಯವನ್ನು ನಿಲ್ಲಿಸಲಾಗುವುದಿಲ್ಲ…
ನನ್ನ ಪತಿ ಉಪನ್ಯಾಸಕರಾಗಿದ್ದು ಅವರ ನಿಧನದ ನಂತರ ನಾನು ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಳಾಗಿ ಅನುಕಂಪದ ಮೇರೆಗೆ ನೇಮಕ ಹೊಂದಿದ್ದೇನೆ. ನಾನು ಕುಟುಂಬ ಪಿಂಚಣಿಯನ್ನು ಪಡೆಯುತ್ತಿದ್ದು ಕೆಲಸಕ್ಕೆ ರಾಜೀನಾಮೆ ನೀಡಿದರೆ ಈ ಸೌಲಭ್ಯವನ್ನು ನಿಲ್ಲಿಸುತ್ತಾರೆಯೇ? ಜಿ.ಹೆಚ್. ವೀಣಾ ಚಿಕ್ಕಮಗಳೂರು ಕರ್ನಾಟಕ ಸಿವಿಲ್ ಸೇವಾ (ಕುಟುಂಬ ಪಿಂಚಣಿ ) ನಿಯಮಾವಳಿ 2002ರಂತೆ ನೀವು ನಿಮ್ಮ ಪತಿಯವರ ಕೆಲಸಕ್ಕೆ ರಾಜೀನಾಮೆ ನೀಡಿದರೆ ಈ ಕುಟುಂಬ ಪಿಂಚಣಿ ಸೌಲಭ್ಯವನ್ನು ನಿಲ್ಲಿಸಲಾಗುವುದಿಲ್ಲ. ಆದರೆ ನೀವು ಮರು ಮದುವೆಯಾದರೆ ಈ ಕುಟುಂಬ ಪಿಂಚಣಿಯನ್ನು ಸರ್ಕಾರವು ನಿಲ್ಲಿಸುತ್ತದೆ.***
- 28-12-16.
ಕರ್ನಾಟಕ ಸರ್ಕಾರಿ ಸೇವಾ (ಪದೋನ್ನತಿ, ವೇತನ ಮತ್ತು ನಿವೃತ್ತಿ ವೇತನ ವಿನಿಮಯನ ) ಅಧಿನಿಯಮ 1973ರ ಪ್ರಕರಣ 3ರಲ್ಲಿ ತಿಳಿಸಿದಂತೆ ಸರ್ಕಾರಿ ನೌಕರನನ್ನು ನಿಗದಿಪಡಿಸಿದ ಸೇವಾ ಅರ್ಹತೆ, ಇಲಾಖಾ ಪರೀಕ್ಷೆಗಳು, ಜ್ಯೇಷ್ಠತೆ ಮತ್ತು ಅವನ ಕಾರ್ಯ ನಿರ್ವಹಣಾ ವರದಿ ಆಧಾರದ ಮೇಲೆ ಪದೋನ್ನತಿ ಪರಿಗಣಿಸಲಾಗುತ್ತದೆ. ಪದವಿಯನ್ನು ಪಡೆದಿದ್ದರೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ರೀತ್ಯ ಅವಕಾಶವಿದ್ದರೆ ಪರಿಗಣಿಸಬಹುದೇ ಹೊರತು ಉಳಿದ ಸಂದರ್ಭಗಳಲ್ಲಿ ಮೇಲಿನ ಅಧಿನಿಯಮದಂತೆ ಪದೋನ್ನತಿ ನೀಡಲಾಗುತ್ತದೆ. ಆದ ಕಾರಣ ನಿಮಗೆ ಇಲಾಖೆಯಲ್ಲಿ ನಿಮ್ಮ ಪದವಿಯ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಸಹಾಯಕರ ಪದೋನ್ನತಿ ನೀಡಲು ಅವಕಾಶವಿರುವುದಿಲ್ಲ.
- 27-12-16.
ಚಂದ್ರಶೇಖರ್ ಕೊಡಗು.
ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಶಳಿ 1957ರ ನಿಯಮ 10ಎ ಅಡಿಯಲ್ಲಿ ರಾಜ್ಯಪಾಲರು ಅಥವಾ ಅವರಿಂದ ಅಧಿಕಾರ ಪಡೆದ ಇತರೆ ಯಾರೇ ಪ್ರಾಧಿಕಾರಿಯು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಯಾರೇ ಸರ್ಕಾರಿ ನೌಕರನ ವಿರುದ್ಧ ಶಿಸ್ತು ವ್ಯವಹರಣೆಗಳನ್ನು ಹೂಡಬಹುದು. ಆದರೆ ನೀವು ತಿಳಿಸಿದಂತೆ ಶಿಸ್ತುಪ್ರಾಧಿಕಾರವಲ್ಲದ ಬೇರೆ ಇಲಾಖೆಯ ಅಧಿಕಾರಿಯು ಆರೋಪ ಪಟ್ಟಿಯನ್ನು ತಯಾರಿಸಿ ಜಾರಿ ಮಾಡಿರುವುದು ಸಹ ಸಿಂಧುವಾಗುವುದಿಲ್ಲ. ಹೀಗಿರುವುದರಿಂದ ಸಮಾನ ಅಧಿಕಾರಿಯವರು ಹೊರಡಿಸುವ ಆರೋಪವು ಕ್ರಮಬದ್ಧವಾಗಿರದೆ ಅವರ ವಿರುದ್ಧ ಮೇಲಿನ ಅಧಿಕಾರಿಗಳಿಗೆ ನಿಯಮಾವಳಿ ರೀತ್ಯ ಸೂಕ್ತ ಕ್ರಮ ಕೈಗೊಳ್ಳಲು ನೀವು ಕೋರಬಹುದು. ನಿಮಗುಂಟಾದ ನಷ್ಟವನ್ನು ಸಹ ಭರಿಸಲು ಶಿಸ್ತು ಪ್ರಾಕಾರಿಗೆ ವಿನಂತಿಸಬಹುದು.***
- 25-12-16.
ನಾನು ಖಾಸಗಿ ಶಾಲಾ ಶಿಕ್ಷಕ. ನನ್ನ ಪತ್ನಿ ಸುಮಾರು 6 ವರ್ಷಗಳ ಹಿಂದೆ ನಿಧನರಾಗಿರುತ್ತಾರೆ. ನಾನು ಕುಟುಂಬ ಪಿಂಚಣಿ ಪಡೆಯುತ್ತಿದ್ದೇನೆ. ನನಗೆ 2 ಮಕ್ಕಳಿದ್ದಾರೆ. ಅವರು 11 ಮತ್ತು 9 ವರ್ಷದವರು. ಈ ಮಧ್ಯೆ ನಮ್ಮ ಹಿರಿಯರು ನನಗೆ ಮರು ಮದುವೆ ಮಾಡಿದ್ದಾರೆ. ನಾನು ಸರ್ಕಾರಕ್ಕೆ ವರದಿ ಮಾಡಬೇಕೇ? ನನ್ನ ಮೊದಲ ಪತ್ನಿ ಮಕ್ಕಳು ಚಿಕ್ಕವರಾಗಿರುವುದರಿಂದ ಕುಟುಂಬ ಪಿಂಚಣಿ ನಾನು ಪಡೆಯಲು ಸಾಧ್ಯವಿಲ್ಲವೇ? ನನ್ನ ಮಕ್ಕಳಿಗೆ ಈ ಪಿಂಚಣಿಯನ್ನು ವರ್ಗಾಯಿಸಬಹುದೇ? ಪರಿಹಾರ ತಿಳಿಸಿ.
| ಬಸವರಾಜ ದೇವಗಿರಿ.
ನೀವು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿಮ್ಮ ಹಿರಿಯರ ಒತ್ತಾಸೆಯ ಮೇರೆಗೆ ಮದುವೆ ಮಾಡಿಕೊಂಡಿದ್ದೀರಿ. ಈ ರೀತಿ ಮದುವೆ ಮಾಡಿಕೊಳ್ಳುವ ಮೊದಲು ನಿಯಮಾವಳಿ ರೀತ್ಯ ಪೂರ್ವಾನುಮತಿ ಪಡೆಯಬೇಕು. ಸರ್ಕಾರಕ್ಕೆ ಸಕಾಲದಲ್ಲಿ ವರದಿ ಮಾಡಬೇಕು. ನೀವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು 2002ರಂತೆ ಮರು ಮದುವೆಯಾಗುವವರೆಗೂ ಕುಟುಂಬ ನಿವೃತ್ತಿ ವೇತನವನ್ನು ಪಡೆಯಬಹುದು. ಆದರೆ ನೀವು ಈಗಾಗಲೇ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ನಿಮ್ಮ ಮಕ್ಕಳಿಗೆ ಈ ಕುಟುಂಬ ನಿವೃತ್ತಿ ವೇತನವನ್ನು ವರ್ಗಾವಣೆ ಮಾಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ***
- 24-12-16.
ಬಿ.ಇಡಿ ಪರೀಕ್ಷೆಯನ್ನು ತೇರ್ಗಡೆಹೊಂದುವುದು ಕಡ್ಡಾಯ.
ಮಾಜಿ ಸೈನಿಕನಾದ ನಾನು 2013ರಲ್ಲಿ 48ನೇ ವಯಸ್ಸಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕನಾಗಿ ಆಯ್ಕೆಯಾಗಿದ್ದು, ಪ್ರಸ್ತುತ 52 ವರ್ಷ ವಯಸ್ಸಾಗಿರುತ್ತದೆ. ನಾನೀಗ ಕಡ್ಡಾಯವಾಗಿ ಬಿ.ಇಡಿ ಪದವಿ ಹೊಂದಬೇಕೆಂದು ಆದೇಶಿಸಲಾಗಿದೆ. ವಯಸ್ಸಿನ ಆಧಾರದಲ್ಲಿ ಏನಾದರೂ ಕಾನೂನಿನನ್ವಯ ರಿಯಾಯಿತಿ ಸಿಗುತ್ತದೆಯೇ?
-ನಾರಾಯಣಪ್ಪ ಕೊಡಗು.
ಈಗಾಗಲೇ ನಿಮಗೆ ನಿಮ್ಮ ನೇಮಕಾತಿ ಆದೇಶದಲ್ಲಿ 4 ವರ್ಷದೊಳಗೆ ಬಿ.ಇಡಿ ಪದವಿ ಪೂರೈಸಬೇಕೆಂದು ಇಲ್ಲದೆ ಹೋದಲ್ಲಿ ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಾವಳಿ 1977ರ ನಿಯಮ 5 (ಬಿ)ರಂತೆ ಪ್ರೊಬೇಷನ್ ಅವಧಿಯಲ್ಲಿ ವಿಶೇಷ ಪರೀಕ್ಷೆಗಳು ಅಥವಾ ಉಪಪರೀಕ್ಷೆಗಳು ಯಾವುದಾದರೂ ಇದ್ದರೆ ಅವುಗಳಲ್ಲಿ ಆತನು ಉತ್ತೀರ್ಣನಾಗಿಲ್ಲದಿದ್ದರೆ 4ನೇ ನಿಯಮದಡಿಯಲ್ಲಿ ಪ್ರೊಬೇಷನ್ ಅವಧಿ ವಿಸ್ತರಿಸದೆ ಸೇವೆಯಿಂದ ವಿಮುಕ್ತಿಗೊಳಿಸಬಹುದು ಎಂದು ತಿಳಿಸಲಾಗಿದೆ. ನೀವು ಬಿ.ಇಡಿ ಪರೀಕ್ಷೆಯನ್ನು ತೇರ್ಗಡೆಹೊಂದುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ.***
- 23-12-16.
ಪ್ರಭಾರ ಭತ್ಯೆ ಲಭ್ಯವಾದಲ್ಲಿ ಯಾವ ವೇತನ ಶ್ರೇಣಿಯಲ್ಲಿ ಪಡೆಯಬಹುದು?
ನಾನು ಬೆರಳಚ್ಚುಗಾರನ ಹುದ್ದೆಯಿಂದ ವೃಂದ ಬದಲಾವಣೆಗೊಂಡು 1997ರಿಂದ ದ್ವಿತೀಯದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರಸ್ತುತ 1997ರ ಆಗಸ್ಟ್ನಿಂದಲೂ ಖಾಲಿ ಇದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲೂ ಪ್ರಭಾರದಲ್ಲಿರುತ್ತೇನೆ. ನನಗೆ ಪ್ರಭಾರ ಭತ್ಯೆ ಲಭ್ಯವಾದಲ್ಲಿ ಯಾವ ವೇತನ ಶ್ರೇಣಿಯಲ್ಲಿ ಪಡೆಯಬಹುದು.
| ವಿಜಯಶಂಕರ ಶೆಟ್ಟಿ ದೇವದುರ್ಗ, ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 68ರಂತೆ ಒಬ್ಬ ಸರ್ಕಾರಿ ನೌಕರನು ತನ್ನ ಕರ್ತವ್ಯಗಳ ಜೊತೆಗೆ ಮತ್ತೊಂದು ಹುದ್ದೆಯ ಕರ್ತವ್ಯಗಳ ಪ್ರಭಾರವನ್ನು ಹೊಂದಿರಲು ನೇಮಕವಾದಾಗ ಹಾಗೆ ಅವನನ್ನು ನೇಮಿಸುವ ಸಕ್ಷಮ ಪ್ರಾಧಿಕಾರಿಯವರು ಯಾವ ಹುದ್ದೆಯಲ್ಲಿ ಪ್ರಭಾರ ಅಥವಾ ಸ್ವತಂತ್ರ ಪ್ರಭಾರ ನೀಡಲಾಗಿದೆಯೋ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದ ಶೇ. 7.5ಕ್ಕೆ ಹೆಚ್ಚಾಗದಂತೆ ಹೆಚ್ಚಿನ ವೇತನಕ್ಕೆ (ಪ್ರಭಾರ ಭತ್ಯೆಗೆ) ಅರ್ಹನಾಗಿರುತ್ತಾನೆ. ಆದುದರಿಂದ ನೀವು ಪ್ರಥಮ ದರ್ಜೆ ಸಹಾಯಕರ ವೇತನಶ್ರೇಣಿ ರೂ. 14,550-26,700 ರಲ್ಲಿನ ಕನಿಷ್ಠ ವೇತನ 145,550ಕ್ಕೆ ಶೇ. 7.5ಕ್ಕೆ ಪ್ರಭಾರ ಭತ್ಯೆಗೆ ಅರ್ಹರಾಗುತ್ತೀರಿ. ***
- 22-12-16.
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಉಪನಿರ್ದೇಶಕರ ಅನುಮತಿ ಪಡೆದು ಪ್ರತಿಷ್ಠಿತ ಅನುದಾನಿತ ಪದವಿ ಕಾಲೇಜಿಗೆ ಅರ್ಜಿ ಸಲ್ಲಿಸಿದ್ದೆ. ಅಲ್ಲಿ ನನಗೆ ಉಪನ್ಯಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಹೋದರೆ ನನ್ನ ಸೇವೆ, ಸೇವಾ ಹಿರಿತನ ಲೆಕ್ಕಕ್ಕೆ ಬರುತ್ತದೆಯೇ? ಎನ್ಪಿಎಸ್., ಕೆಜೆಡಿ, ಎಲ್ಐಸಿ, ಗಳಿಕೆ ರಜೆ ಮುಂತಾದವುಗಳನ್ನು ಯಾವ ರೀತಿ ಮುಂದುವರಿಸಬೇಕು? ಹೋಗಬೇಕಾದರೆ ನಾನು ಇಲಾಖೆಯಲ್ಲಿ ಯಾವ ರೀತಿ ಕರ್ತವ್ಯದಿಂದ ಬಿಡುಗಡೆಯಾಗಬೇಕು?
|ಸಿ. ಮುನಿನಾರಾಯಣ ಸ್ವಾಮಿ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿರಂತೆ ಮತ್ತೊಂದು ಸರ್ಕಾರಿ ಹುದ್ದೆಗೆ ಸೇರಲು ಕರ್ತವ್ಯದಿಂದ ಬಿಡುಗಡೆಗೊಳ್ಳಲು ಅವಕಾಶವಿದೆ. ಆದರೆ ನೀವು ಸರ್ಕಾರಿ ಹುದ್ದೆಯಿಂದ ಅನುದಾನಿತ ಹುದ್ದೆಗೆ ಹೋಗುತ್ತಿರುವುದರಿಂದ ನೀವು ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊಸ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಬೇಕು. ಆದರೆ ನಿಮ್ಮ ಹಿಂದಿನ ಸೇವಾ ಅವಧಿ ಎನ್ಪಿಎಸ್., ಕೆಜೆಡಿ, ಗಳಿಕೆ ರಜೆ ಇದ್ಯಾವುದೂ ಮುಂದುವರಿಯುವುದಿಲ್ಲ. ಆದರೆ ಎಲ್ಐಸಿಯನ್ನು ಹೊಸ ಹುದ್ದೆಯಲ್ಲೂ ಸಹ ಮುಂದುವರೆಸಬಹುದು. ***
- 20-12-16.
ಪದೋನ್ನತಿ ನಿರಾಕರಣೆ ನಂತರ ವೇತನ ಬಡ್ತಿ ಸಿಗುವುದೇ?
ಅಂಗವೈಕಲ್ಯ ಕಾರಣದಿಂದ ನಾನು 2010ರಲ್ಲಿ ಮುಖ್ಯೋಪಾಧ್ಯಾಯ ಹುದ್ದೆಯ ಪದೋನ್ನತಿ ಬೇಡವೆಂದು ನಿರಾಕರಿಸಿದ್ದೆ. ಆದರೆ 20, 25 ಮತ್ತು 30 ವರ್ಷದ ವೇತನ ಬಡ್ತಿಗೆ ಅರ್ಹನಾಗಿದ್ದೇನೆಯೇ?
|ಪಿ.ಎಚ್.ಪಾಟೀಲ್ ಬೆಳಗಾವಿ.
ದಿನಾಂಕ 9.5.2002ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 13, ಎಸ್ಆರ್ಪಿ 2002, ಹಾಗೂ ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12, ಎಸ್ಆರ್ಪಿ 2012ರಂತೆ ಈಗಾಗಲೇ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿ ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ 20, 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ನೀಡಬಾರದೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ಈ ಹೆಚ್ಚುವರಿ ವೇತನ ಬಡ್ತಿಗಳಿಗೆ ಅರ್ಹರಾಗಿರುವುದಿಲ್ಲ.***
- 19-12-16.
ಪರೀಕ್ಷಾರ್ಥ ಅವಧಿಯನ್ನು 2 ವರ್ಷಗಳ ಕಾಲ ನಿಗದಿಪಡಿಸಲಾಗುತ್ತದೆ.
ನಾನು ಸಹ್ಯಾದ್ರಿ ಕನ್ನಡ ಪ್ರೌಢಶಾಲೆಯಲ್ಲಿ 1998ರಿಂದ ನೇಮಕಾತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದು ಈ ಶಾಲೆಯು 2014ರ ಫೆಬ್ರವರಿಯಲ್ಲಿ ಅನುದಾನಕ್ಕೊಳಪಟ್ಟಿರುತ್ತದೆ. ನನ್ನ ಹುದ್ದೆಯು ಸಹ ಅನುದಾನಕ್ಕೊಳಪಟ್ಟಿದ್ದು ಈಗ ಪ್ರೊಬೇಷನರಿ ಅವಧಿಯ ಬಗ್ಗೆ ಗೊಂದಲಗಳಿದ್ದು ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿ ಅವಧಿಯೇ? ಅಥವಾ ಅನುದಾನಕ್ಕೊಳಪಟ್ಟ ದಿನಾಂಕದಿಂದ 2 ವರ್ಷಗಳೋ ಎಂಬ ಗೊಂದಲಗಳಿವೆ. ಸೂಕ್ತ ಪರಿಹಾರ ಸೂಚಿಸಿ.
ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ (ನೌಕರರ ಸೇವಾ ಷರತ್ತುಗಳು ) ನಿಯಮಾವಳಿ 1999ರ ಮೇರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಹೊಂದಿದ ನೌಕರರ ಸೇವಾ ಅವಧಿಯು ಅನುದಾನಿತ ದಿನಾಂಕದಿಂದ ಪ್ರಾರಂಭವಾಗುತ್ತದೆ. ಆದ ಕಾರಣ ನಿಮ್ಮ ಪ್ರೊಬೇಷನರಿ ಅವಧಿಯು 2014ರ ಫೆಬ್ರವರಿಯಿಂದ ಆರಂಭವಾಗಿ 2 ವರ್ಷಗಳಿರುತ್ತವೆ. ಇದಕ್ಕೆ ಕಾರಣ ಅನುದಾನವನ್ನು ಸರ್ಕಾರವು ನೀಡುತ್ತಿದ್ದು ಮೇಲಿನ ನಿಯಮಾವಳಿಯಂತೆ ಪರೀಕ್ಷಾರ್ಥ ಅವಧಿಯನ್ನು 2 ವರ್ಷಗಳ ಕಾಲ ನಿಗದಿಪಡಿಸಲಾಗುತ್ತದೆ. ****
- 18-12-16.
ಮತಾಂತರಗೊಂಡ ಮೀಸಲಾತಿ ಅಡಿಯಲ್ಲಿ ಉದ್ಯೋಗವನ್ನು ಕೋರಬಹುದು.
ವೆಂಕಟೇಶ ನಾಯಕ ಗೋಕಾಕ.
ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿ ಸ್ವಇಚ್ಛೆಯಿಂದ ಮತಾಂತರ ಹೊಂದಲು ಕಾನೂನಿನಡಿ ಅವಕಾಶವಿದೆಯೇ? ಆ ವ್ಯಕ್ತಿ ಸಾಮಾನ್ಯ ವರ್ಗದಡಿ ನೇಮಕವಾಗಬಹುದೇ? ಜಾತಿ ಮೀಸಲಾತಿ ಅಡಿ ಉದ್ಯೋಗ ಪಡೆದಿದ್ದು ಮತಾಂತರಗೊಂಡರೆ ಮೀಸಲಾತಿ ರದ್ದಾಗುವುದೇ?
ಸರ್ಕಾರಿ ನೌಕರನು ತನ್ನ ಸ್ವ ಇಚ್ಛೆಯಿಂದ ಮತಾಂತರ ಗೊಳ್ಳಲು ಯಾವುದೇ ನಿಯಮಾವಳಿಯು ಅಡ್ಡಿಯಾಗಿರುವುದಿಲ್ಲ. ಅದು ಅವನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಾಗಿರುತ್ತದೆ. ಅವನು ಅರ್ಜಿ ಸಲ್ಲಿಸುವಾಗ ಸಾಮಾನ್ಯ ನೇಮಕಾತಿಯಲ್ಲಿ ನೇಮಕವಾಗಬಹುದು. ಆದರೆ ಅವನು ಜಾತಿ ಮೀಸಲಾತಿ ಅಡಿಯಲ್ಲಿ ಉದ್ಯೋಗ ಪಡೆದಿದ್ದರೆ ಮತಾಂತರದ ನಂತರ ಅವನ ಮೀಸಲಾತಿ ಬೇರೆಯಾಗುತ್ತದೆ. ಹೀಗಾಗಿರುವುದರಿಂದ ಅವನು ತನ್ನ ಮಕ್ಕಳಿಗೆ ಮತಾಂತರಗೊಂಡ ಮೀಸಲಾತಿ ಅಡಿಯಲ್ಲಿ ಉದ್ಯೋಗವನ್ನು ಕೋರಬಹುದು. 1992ರ ಕರ್ನಾಟಕ ಅನುಸೂಚಿತ ಜಾತಿ, ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳು ಮುಂತಾದವುಗಳ ಮೀಸಲಾತಿ) ನಿಯಮಾವಳಿಯ ನಿಯಮ 7ರಡಿಯಲ್ಲಿ ಅವನು ಸಿಂಧುತ್ವ ಪ್ರಮಾಣ ಪತ್ರವನ್ನು ಪಡೆಯಬೇಕು.
- 16.12.2016.
ನಾನು ಸರ್ಕಾರಿ ಇಲಾಖೆಯಲ್ಲಿ ಶೀಘ್ರಲಿಪಿಗಾರನಾಗಿ 5 ವರ್ಷ ಸೇವೆ ಸಲ್ಲಿಸಿದ್ದು ಸರ್ಕಾರಿ ಆದೇಶದ ಮೇರೆಗೆ 1 ವರ್ಷ ಪ್ರಥಮ ದರ್ಜೆ ಸಹಾಯಕರ ತರಬೇತಿಯನ್ನೂ ಪೂರೈಸಿರುತ್ತೇನೆ. ನಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ರೀತ್ಯ 5 ವರ್ಷ ಶೀಘ್ರ ಲಿಪಿಗಾರರಾಗಿ ಸೇವೆ ಸಲ್ಲಿಸಿದವರಿಗೆ ಕಚೇರಿ ಅಧೀಕ್ಷಕರ ಹುದ್ದೆಗಳಿಗೆ ಪದೋನ್ನತಿ ನೀಡಲು ಅವಕಾಶವಿದೆ. ಆದರೆ ನಮ್ಮ ಇಲಾಖೆಯ ಕೆಲವು ಕೆಳಗಿನ ಅಧಿಕಾರಿಗಳು ತರಬೇತಿ ಅವಧಿಯನ್ನುಳಿದು 5 ವರ್ಷ ಸೇವೆ ಸಲ್ಲಿಸಬೇಕೆಂದು ನನಗೆ ಪದೋನ್ನತಿಯನ್ನು ನೀಡಲು ನಿರಾಕರಿಸುತ್ತಿದ್ದಾರೆ. ಇಲ್ಲಿಯವರೆಗೂ ನಮ್ಮ ಇಲಾಖೆಯಲ್ಲಿ ಶೀಘ್ರ ಲಿಪಿಗಾರರಿಗೆ ಅಧೀಕ್ಷಕರ ಹುದ್ದೆಗೆ ಪದೋನ್ನತಿ ನೀಡಲಾಗಿಲ್ಲ. ಈ ಬಗ್ಗೆ ನಿಯಮಾವಳಿ ರೀತ್ಯ ಸೂಕ್ತ ಪರಿಹಾರ ಸೂಚಿಸಿ.
| ಶಿವಶಂಕರ ಎನ್. ಮೈಸೂರು
1982ರ ಸರ್ಕಾರಿ ಆದೇಶದಲ್ಲಿ ಕ್ಷೇತ್ರ ಇಲಾಖೆಗಳಲ್ಲಿ ಪದೋನ್ನತಿ ಪಡೆಯಬೇಕಾದರೆ ಅವರು 5 ವರ್ಷಗಳ ಕಾಲ ಸೇವೆ ಸಲ್ಲಿಸಿ ಅದರಲ್ಲಿ 1 ವರ್ಷ ಪ್ರಥಮ ದರ್ಜೆ ಸಹಾಯಕರ ತರಬೇತಿಯನ್ನು ಸಹ ಪಡೆಯತಕ್ಕದೆಂದು ಸೂಚಿಸಲಾಗಿದೆ. ಹೀಗಿರುವಾಗ ನಿಮ್ಮ ಇಲಾಖೆಯ ಕೆಳಗಿನ ಅಧಿಕಾರಿಗಳು ತರಬೇತಿ ಅವಧಿಯನ್ನು ಹೊರತುಪಡಿಸಿ 5 ವರ್ಷ ಸೇವಾ ಅರ್ಹತೆ ಹೊಂದಬೇಕೆಂದು ಸೂಚಿಸುವುದು ಸ್ವಾಭಾವಿಕ ನ್ಯಾಯಕ್ಕೆ ಅಪಚಾರವೆಸಗಿದಂತಾಗುತ್ತದೆ. ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಅಥವಾ ಪದೋನ್ನತಿ ಮೂಲಕ ತುಂಬುವಾಗ ಅವರ ಸೇವಾ ಅರ್ಹತೆಯನ್ನು 5 ವರ್ಷಗಳು ಎಂದು ನಿಗದಿಪಡಿಸಿರುವಾಗ ತತ್ಸಮಾನ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ಶೀಘ್ರ ಲಿಪಿಗಾರರಿಗೂ ಸಹ ಈ ಆದೇಶದ ಹಿನ್ನೆಲೆಯಲ್ಲಿ ಹಾಗೂ ಇಲಾಖೆಯ ನೇಮಕಾತಿ ನಿಯಮಾವಳಿಯಂತೆ ಪದೋನ್ನತಿಯನ್ನು ನೀಡಬೇಕಾಗುತ್ತದೆ. ***
- 15-12-2016.
- ಸರ್ಕಾರದ ಕೊಡುಗೆಯೂ ಸಹ ಈ ಅವಧಿಯಲ್ಲಿ ಇರುವುದಿಲ್ಲ…
- ಜಯಲಕ್ಷ್ಮಿ ಮೈಸೂರು
ನನ್ನನ್ನು ಶಿಸ್ತು ಪ್ರಾಧಿಕಾರಿಯವರು 2016ರ ಆಗಸ್ಟ್ 18ರಿಂದ ಅಮಾನತುಗೊಳಿಸಿದ್ದಾರೆ. ನನ್ನ ಅಮಾನತ್ತಿನ ಅವಧಿಯಲ್ಲಿ ನೂತನ ಪಿಂಚಣಿ ಯೋಜನೆಯ (ಎನ್ಪಿಎಸ್) ವಂತಿಕೆ ಕಡಿತಗೊಳಿಸಲಾಗುತ್ತಿದೆ. ಇದು ಸರಿಯೇ?
ದಿನಾಂಕ 7-5-2014ರ ಸರ್ಕಾರದ ಸೇರ್ಪಡೆ ಆದೇಶದ ಹಿನ್ನೆಲೆಯಲ್ಲಿ (ಎಫ್ಡಿ (ಸ್ಪೆಷಲ್)118 ಪಿಇಎನ್ 2013) ನೂತನ ಪಿಂಚಣಿ ಯೋಜನೆಯ ವಂತಿಕೆ ಕಡಿತಗೊಳಿಸಬಾರದು. ಅಲ್ಲದೆ ಸರ್ಕಾರದ ಕೊಡುಗೆಯೂ ಸಹ ಈ ಅವಧಿಯಲ್ಲಿ ಇರುವುದಿಲ್ಲ. ಆದುದರಿಂದ ನಿಮ್ಮ ಮೇಲಾಧಿಕಾರಿಯವರು ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಇರುವುದರಿಂದ ಎನ್ಪಿಎಸ್ ಕಡಿತ ಮಾಡುವುದು ಕ್ರಮಬದ್ಧವಾಗಿರುವುದಿಲ್ಲ. ಈ ಬಗ್ಗೆ ನೀವು ನಿಮ್ಮ ಮೇಲಾಧಿಕಾರಿಗಳವರಿಗೆ ಸದರಿ ಆದೇಶದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಬಹುದು. ****
- 14-12-16.
3 ತಿಂಗಳೊಳಗೆ ಆರೋಪಪಟ್ಟಿ ಜಾರಿಯಾಗದಿದ್ದರೆ ಅಮಾನತು ರದ್ದಾಗುವುದೇ?
ನನ್ನನ್ನು ಶಿಸ್ತು ಪ್ರಾಧಿಕಾರಿಗಳು 2016 ಆಗಸ್ಟ್ 5ರಿಂದ ದುರ್ವರ್ತನೆ ಹಾಗೂ ಕರ್ತವ್ಯ ನಿರ್ಲಕ್ಷತೆ ಆರೋಪದ ಹಿನ್ನೆಲೆಯಲ್ಲಿ ಅಮಾನತು ಗೊಳಿಸಿದ್ದಾರೆ. ಅಮಾನತು ಗೊಳಿಸಿದ 3 ತಿಂಗಳೊಳಗೆ ಆರೋಪಪಟ್ಟಿ ಜಾರಿಯಾಗದಿದ್ದರೆ ಅಂತಹ ಅಮಾನತು ರದ್ದಾಗುತ್ತದೆಯೇ?
- ಸುದರ್ಶನ್ ವಿ.ಎಸ್. ರಾಯಚೂರು
ಹೌದು. ಇಂತಹ ಒಂದು ಆದೇಶವನ್ನು ಅಜಯ್ ಕುಮಾರ್ ಚೌಧರಿ ಡ/ಠ ಯೂನಿಯನ್ ಆಫ್ ಇಂಡಿಯಾ (2015) 2 ಎಸ್ಸಿಸಿ (ಎಲ್ ಅಂಡ್ ಎಸ್) 455, ಪ್ರಕರಣದಲ್ಲಿ 2015ರ ಫೆಬ್ರವರಿಯಲ್ಲಿ ಸರ್ವೇಚ್ಛ ನ್ಯಾಯಾಲಯವು ಇಂಥದ್ದೊಂದು ಆದೇಶವನ್ನು ಮಾಡಿದೆ. ಸರ್ಕಾರಿ ನೌಕರನನ್ನು ಅಮಾನತುಗೊಳಿಸಿದ ಆದೇಶ ದಿನಾಂಕದಿಂದ 3 ತಿಂಗಳೊಳಗಾಗಿ ಆರೋಪಿತ ಅಧಿಕಾರಿ/ನೌಕರನಿಗೆ ಆರೋಪಪಟ್ಟಿಯನ್ನು ಜಾರಿ ಮಾಡದಿದ್ದರೆ ಹಾಗೂ ಅಮಾನತನ್ನು ಸಕಾರಣವಿಲ್ಲದೆ ಮುಂದುವರೆಸಿದ್ದರೆ ಅಂತಹ ಆದೇಶವು ತಾನಾಗಿಯೇ ರದ್ದಾಗುತ್ತದೆ. ಈ ಬಗ್ಗೆ ನೀವು ನಿಮ್ಮ ಶಿಸ್ತು ಪ್ರಾಧಿಕಾರದವರಿಗೆ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪುನರ್ನೇಮಕಗೊಳಿಸಲು ಮನವಿ ಸಲ್ಲಿಸಬಹುದು.
- 13-12-16.
ನನ್ನನ್ನು ದುರ್ನಡತೆಯ ಆಧಾರದ ಮೇಲೆ ಶಿಸ್ತು ಪ್ರಾಧಿಕಾರಿಯವರು 2016ರ ಸೆಪ್ಟೆಂಬರ್ 15ರಿಂದ ಅಮಾನತ್ತಿನಲ್ಲಿಟ್ಟಿದ್ದಾರೆ. ನಾನು ಬೆಳಗಾವಿ ಜಿಲ್ಲೆಯಲ್ಲಿ ವಾಸವಾಗಿದ್ದು ಬೆಂಗಳೂರಿನಲ್ಲಿ ನಡೆಯುವ ಇಲಾಖಾ ವಿಚಾರಣಾ ಆಧಾರದ ಮೇಲೆ ಪ್ರಯಾಣ ಭತ್ಯೆ ಪಡೆಯಲು ಅರ್ಹನಾಗಿದ್ದೇನೆಯೇ ?
- | ಬಿ.ಎಂ. ಪಾಟೀಲ್ ಬೆಳಗಾವ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಮಯ 570ರ ಪ್ರಕಾರ ಅಮಾನತ್ತಾದ ಸರ್ಕಾರಿ ನೌಕರನು ಇಲಾಖಾ ವಿಚಾರಣೆಗೆ ಹಾಜರಾಗಲು ಪ್ರಯಾಣ ಭತ್ಯೆಗೆ ಅರ್ಹನಾಗಿರುತ್ತಾನೆ. ಸರ್ಕಾರಿ ನೌಕರನ ಪ್ರಯಾಣ ಭತ್ಯೆಯನ್ನು ಅಮಾನತ್ತಿನ ಪೂರ್ವದಲ್ಲಿ ಅವನು ಯಾವ ದರ್ಜೆಗೆ ಸೇರಿದ್ದಾನೋ ಅದಕ್ಕನುಸಾರವಾಗಿ ಕ್ರಮಬದ್ಧಗೊಳಿಸಲಾಗುವುದು. ನೀವು ನಿಮ್ಮ ಮೇಲಧಿಕಾರಿಗಳಿಗೆ ಪ್ರಯಾಣ ಭತ್ಯೆ ನೀಡಲು ವಿಚಾರಣಾಧಿಕಾರಿ ನೀಡಿದ ಹಾಜರಾತಿ ಪತ್ರವನ್ನು ಸಲ್ಲಿಸಿ ಮನವಿ ಸಲ್ಲಿಸಬಹುದು.***
- 12-11-16.
ನಾನು ಪೊಲೀಸ್ ಪೇದೆಯಾಗಿ 2005 ಮಾರ್ಚ್ನಲ್ಲಿ ಕರ್ತವ್ಯಕ್ಕೆ ಸೇರಿದ್ದು ತೀವ್ರವಾದ ಬೆನ್ನುನೋವು ಇರುವುದರಿಂದ ಕರ್ತವ್ಯ ನಿರ್ವಹಿಸಲು ತುಂಬಾ ಕಷ್ಟವಾಗುತ್ತಿದೆ. ನನಗೆ ಪಿಂಚಣಿ ಸೌಲಭ್ಯವಿದ್ದು ನಾನು 15 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದು, ಸ್ವಯಂ ನಿವೃತ್ತಿ ಪಡೆದರೆ ನನಗೆ ಸಿಗುವ ಪಿಂಚಣಿ ಎಷ್ಟು? ಇತರೆ ಯಾವ ಸೌಲಭ್ಯಗಳು ಲಭ್ಯವಾಗಲಿವೆ?
- | ಜಯಪ್ರಕಾಶ್ ದಾವಣಗೆರೆ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285ರಂತೆ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆಯಬಹುದಾಗಿದೆ. ನೀವು 15 ವರ್ಷಗಳ ಸೇವಾವಧಿ ಮುಗಿಸಿದ ನಂತರ ನಿಮ್ಮ ನೇಮಕಾತಿ ಪ್ರಾಧಿಕಾರಿಯವರಿಗೆ 3 ತಿಂಗಳ ಮುಂಚೆ ನೋಟೀಸನ್ನು ನೋಡಿ ನಿವೃತ್ತಿ ವೇತನವನ್ನು ಮಂಜೂರು ಮಾಡಲು ಕೋರಬಹುದು. ಈ ರೀತಿ ಸ್ವಯಂ ನಿವೃತ್ತಿ ಪಡೆಯುವುದರಿಂದ ನಿಮ್ಮ ಸೇವಾರ್ಹತೆಗೆ 5 ವರ್ಷಗಳ ಸೇವಾ ಅಧಿಕ್ಯವನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2) (ಬಿ) (ಜಿಡ) ಪಡೆಯಬಹುದು. ಈ ಸ್ವಯಂ ನಿವೃತ್ತಿ ಸಂದರ್ಭದಲ್ಲಿ ನಿಮ್ಮ ಮೂಲ ವೇತನದ ಆಧಾರದ ಮೇಲೆ ಪಿಂಚಣಿ ನಿವೃತ್ತಿ ಉಪದಾನ ಹಾಗೂ ಕಮ್ಯುಟೇಷನ್ ಅನ್ನು ಲೆಕ್ಕ ಹಾಕಲಾಗುವುದು.
- 11-12-16.
ನಾನು 1994ರ ನವೆಂಬರ್ 30 ರಂದು ನಿವೃತ್ತಿಯಾಗಿದ್ದೇನೆ. 2016 ರ ನವೆಂಬರ್ 30ಕ್ಕೆ ನನಗೆ 80 ವರ್ಷ ತುಂಬಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಪ್ರಕಾರ ನನ್ನ ನಿವೃತ್ತಿ ಮೂಲ ವೇತನದ ಶೇಕಡಾ 20 ಅಧಿಕ ವೇತನ ಪಡೆಯಲು ಅರ್ಹನಾಗಿದ್ದೇನೆಯೇ?
| ಎಂ.ಆರ್. ಪಲ್ಲೇದ ಧಾರವಾಡ.
ದಿನಾಂಕ 3-9-2010ರ ಸರ್ಕಾರಿ ಆದೇಶದಲ್ಲಿ 1-7-1993ಕ್ಕಿಂತ ಮೊದಲು ವಯೋನಿವೃತ್ತಿ ಹೊಂದಿ 80 ವರ್ಷ ಪೂರೈಸಿದವರಿಗೆ ಶೇ.20 ಅವರ ನಿವೃತ್ತಿ ವೇತನದಲ್ಲಿ ಹೆಚ್ಚಳ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ನೀವು ತದನಂತರ ನಿವೃತ್ತಿಯಾಗಿದ್ದು ಅಧಿಕ ನಿವೃತ್ತಿ ವೇತನ ಪಡೆಯಲು ಅರ್ಹರಾಗಿರುವುದಿಲ್ಲ.
***
- 10-12-16.
ಬಿ.ಕೆ. ಶಿವಾನಂದ ಬೆಂಗಳೂರು
ನಾನು 2002ರ ಡಿಸೆಂಬರ್ 30ರಂದು ನೇರ ನೇಮಕಾತಿ ಮೂಲಕ (ಬ್ಯಾಕ್ಲಾಗ್) ಹುದ್ದೆಯಲ್ಲಿ ವಾಹನ ಚಾಲಕನಾಗಿ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನೌಕರಿಗೆ ಸೇರಿದ್ದು, 14 ವರ್ಷ ಕರ್ತವ್ಯ ನಿರ್ವಹಿಸಿದ್ದೇನೆ. ನಾನು ಹಿಂದು ವಾಲ್ಮೀಕಿ ಜನಾಂಗಕ್ಕೆ ಸೇರಿದವನಾಗಿದ್ದು, ನನಗೆ ವಾಹನ ಚಾಲಕರ ಹುದ್ದೆ ಹೊರತುಪಡಿಸಿ. ಯಾವ ಇಲಾಖಾ ಮುಂಬಡ್ತಿ ಸಿಗುತ್ತದೇ?
ಕರ್ನಾಟಕ ಸಿವಿಲ್ ಸೇವಾ ಲಿಪಿಕ ಹುದ್ದೆಗಳಿಗೆ (ನೇಮಕಾತಿ) ನಿಯಮಗಳು 1978ರ 4ಎರಂತೆ ಚಾಲಕರ ಉದ್ಯೋಗ ವೃಂದದಲ್ಲಿ 5 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರುವವರು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆದರೆ ನೇರವಾಗಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಲಾಗುವುದಿಲ್ಲ.
***
- 8-12-16
ಆರೋಗ್ಯ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ನನ್ನ ಪತಿ ಸೇವೆಯಲ್ಲಿದ್ದಾಗಲೇ 2015ರ ಜುಲೈ 5 ರಂದು ನಿಧನರಾದರು, ಆಗ ಅನುಕಂಪ ಆಧಾರದಲ್ಲಿ ನನ್ನ ಮಗನಿಗೆ ಉದ್ಯೋಗ ನೀಡಲು ಅಲ್ಲಿನ ಅಧಿಕಾರಿಗಳನ್ನು ಕೇಳಿದಾಗ ನಿನ್ನ ಮಗನಿಗೆ 18 ವರ್ಷಗಳು ತುಂಬದ ಕಾರಣ ಉದ್ಯೋಗ ನೀಡಲು ಆಗುವುದಿಲ್ಲ ಎಂದು ಹೇಳಿ ನನ್ನ ಕೈಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿಸಿದ್ದಾರೆ. ಆದರೆ ನನಗೆ ಆರೋಗ್ಯ ಸರಿ ಇಲ್ಲದಿರುವುದರಿಂದ ಕಾರ್ಯನಿರ್ವಹಿಸಲು ಕಷ್ಟವಾಗಿರುತ್ತದೆ. ನನ್ನ ಮಗ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ್ದು 2016ರ ಸೆಪ್ಟೆಂಬರ್ 15ಕ್ಕೆ 18 ವರ್ಷ ತುಂಬಿದೆ. ಈಗ ಅವನಿಗೆ ಉದ್ಯೋಗ ನೀಡಲು ಅವಕಾಶವಿರುತ್ತದೆಯೇ?
| ಎನ್.ವೀಣಾ ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ನಿಯಮ 3ರಂತೆ ಅನುಕಂಪದ ಆಧಾರದ ಮೇಲೆ ಮೃತ ನೌಕರನ ಪತ್ನಿಯು ಅರ್ಹಳಾಗಿದ್ದಲ್ಲಿ ಅಥವಾ ಯಾವುದೇ ಸಮಂಜಸವಾದ ಕಾರಣಗಳಿಗಾಗಿ ನೇಮಕ ಒಪ್ಪಿಕೊಳ್ಳದಿದ್ದಲ್ಲಿ ಮಗನು ಅರ್ಹನಾಗುತ್ತಾನೆ. ಆದರೆ ಸರ್ಕಾರಿ ನೌಕರನು ಮೃತ ಹೊಂದಿದ ದಿನಾಂಕಕ್ಕೆ 1 ವರ್ಷದೊಳಗೆ 18 ವರ್ಷವನ್ನು ದಾಟಬೇಕಾಗಿರುತ್ತದೆ. ಆದುದರಿಂದ ನಿಮ್ಮ ಪುತ್ರನು ಈ ನಿಯಮಾವಳಿಯ ಹಿನ್ನೆಲೆಯಲ್ಲಿ 18 ವರ್ಷ ಪೂರೈಸದೆ ಇರುವುದರಿಂದ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹನಾಗುವುದಿಲ್ಲ.
- 24-11-16.
ನಾನು ಕಿರಿಯ ಮಹಿಳಾ ಆರೋಗ್ಯಸಖಿಯಾಗಿ ಸೇವೆ ಸಲ್ಲಿಸಿದ್ದು 10, 15 ಕಾಲಮಿತಿ ವೇತನ ಬಡ್ತಿಗಳನ್ನೂ ಪಡೆದಿದ್ದೇನೆ. 2016ರ ಅಕ್ಟೋಬರ್ನಲ್ಲಿ ನನ್ನ ಮೂಲ ವೇತನ ರೂ. 28,800 ಆಗುತ್ತದೆ. ಇದೇ ತಿಂಗಳಿಗೆ 30 ವರ್ಷದ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುತ್ತದೆ. ನನ್ನ ಮೂಲ ವೇತನ ರೂ. 29,600 ಆಗಿದ್ದು, ಸ್ಥಗಿತವಾಗುತ್ತದೆ. ನನಗೆ ಪದೋನ್ನತಿ ಲಭ್ಯವಾದಲ್ಲಿ ಒಂದು ವೇತನ ಬಡ್ತಿ ಲಭ್ಯವಾಗುತ್ತದೆಯೇ ಅಥವಾ ಇಲ್ಲವೇ ? ಇಲ್ಲವಾದಲ್ಲಿ ಹೇಗೆ ? ಯಾವ ರೀತಿ ಪಡೆಯಬಹುದು.
- | ಮಂಗಳಾ ವಿ. ತುಮಕೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 42(ಬಿ) ಪ್ರಕಾರ ನಿಮಗೆ ಈ ಪದೋನ್ನತಿಯು ಆರ್ಥಿಕ ಸೌಲಭ್ಯ ಲಭ್ಯವಾದರೆ ಪಡೆಯಬಹುದು ಇಲ್ಲವೆ ಸ್ಥಗಿತ ವೇತನ ಬಡ್ತಿ ಮತ್ತು ಪದೋನ್ನತಿ ವೇತನ ಬಡ್ತಿ ಮುಂದೂಡಲು ಮನವಿಯನ್ನು ಸಲ್ಲಿಸಬಹುದು. ನೀವು ಒಂದು ಸ್ಥಗಿತ ವೇತನ ಬಡ್ತಿ ಲಭ್ಯವಾದ ಮೇಲೆ ಮತ್ತೊಂದು ಪದೋನ್ನತಿ ವೇತನ ಬಡ್ತಿಯನ್ನು ಪಡೆಯಬಹುದಾಗಿದೆ.
***
- 21.11.2016,
ನಾನು ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು ನನ್ನ ಮೂಲ ವೇತನ ಶ್ರೇಣಿ (16,000-29,600) ಇದೆ. ನಾನು ಇಲಾಖೆ ಅನುಮತಿ ಮೇರೆಗೆ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು, ನಿಗದಿಪಡಿಸಿದ ಇಲಾಖೆಯ ಪರೀಕ್ಷೆಗಳಾದ (1) ಮುನ್ಸಿಪಾಲ್ ಲೋಕಲ್ ಬೋರ್ಡ್ 2) ಅಟೌಂಟ್ಸ್ ಹೈಯರ್ 3) ಜನರಲ್ ಭಾಗ-1 ಮತ್ತು 2 (4) ಪಿ.ಡಬ್ಲೂ್ಯ.ಡಿ. ಭಾಗ-1 ಮತ್ತು 2 (5) ಕನ್ನಡ ಭಾಷಾ ಪರೀಕ್ಷೆಯಲ್ಲಿ ವಿನಾಯಿತಿ ಪಡೆದಿದ್ದು ಕಾಮಗಾರಿ ಇಲಾಖೆಯ ಜೂನಿಯರ್ ಇಂಜಿನಿಯರ್ ಹುದ್ದೆಯ ವೇತನ ಶ್ರೇಣಿ (17,650 ರಿಂದ 32,000) ವೇತನ ಶ್ರೇಣಿಯ ಬೇರೆ ಬೇರೆಯಾಗಿರುವುದರಿಂದ ಹಿರಿಯ ಅಭಿಯಂತರ ಹುದ್ದೆಗೆ ಬದಲಾವಣೆ ಮಾಡಿಕೊಳ್ಳಲು ಯಾವ ರೀತಿ ಕ್ರಮ ಅನುಸರಿಸಬೇಕಾಗಿರುತ್ತದೆ ?
- |ಜಿ.ಆರ್. ನಂಜುಂಡಪ್ಪ ಹಿರಿಯ ಆರೋಗ್ಯ ಪರಿವೀಕ್ಷಕರು, ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ) ನಿಯಮಗಳು 1977ರ ನಿಯಮ 16(ಎ)ಯಲ್ಲಿ ಕೆಳಕಂಡಂತೆ ನಿಯಮ ತಿಳಿಸಲಾಗಿದೆ.
16(ಎ) ಸೇವೆಯೊಳಗೆ ವರ್ಗಾವಣೆ ಮೂಲಕ ನೇಮಕ ಮಾಡುವುದು – ಈ ನಿಯಮಗಳಲ್ಲಿ ಅಥವಾ ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ವಿಶೇಷವಾಗಿ ರಚಿಸಿದ ನೌಕರಿ ಭರ್ತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಇಲಾಖಾ ಮುಖ್ಯಸ್ಥರು ಸೇವೆಗೆ ಸಂಬಂಧಿಸಿದಂತೆ, ಸಾರ್ವಜನಿಕ ಹಿತ ದೃಷ್ಟಿಯಿಂದ ಮತ್ತು ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ಮತ್ತು ಸರ್ಕಾರವು ಈ ಸಂಬಂಧವಾಗಿ ಹೊರಡಿಸಬಹುದಾದ ಯಾವುದೇ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು, ಸಿ ಗುಂಪು ಅಥವಾ ಡಿ ಗುಂಪಿನ ಸದಸ್ಯರನ್ನು ಜೇಷ್ಠ ್ಯೆಯ ಒಂದು ಘಟಕದಲ್ಲಿನ ಹುದ್ದೆಯಿಂದ ಜೇಷ್ಠ ್ಯೆಯ ಮತ್ತೊಂದು ಘಟಕದಲ್ಲಿನ ಅದೇ ಕೇಡರ್ನಲ್ಲಿನ ಸಮಾನ ಹುದ್ದೆಗೆ ವರ್ಗಾವಣೆ ಮೂಲಕ ನೇಮಕ ಮಾಡಬಹುದು. ಮೇಲ್ಕಂಡ ನಿಯಮಾವಳಿಯ ಹಿನ್ನೆಲೆಯಲ್ಲಿ ನಿಮ್ಮ ವೇತನ ಶ್ರೇಣಿಯು ಕಿರಿಯ ಅಭಿಯಂತರರ ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿಗಿಂತ ಕಡಿಮೆಯಾಗಿರುವುದರಿಂದ ನಿಮ್ಮನ್ನು ವರ್ಗಾವಣೆ ಮಾಡಲು ಆಗುವು
***
- 20-11-16
ನಾನು ಇತ್ತೀಚೆಗೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದು ನನ್ನ ಪ್ರೊಬೆಶನರಿ ಅವಧಿ ಇನ್ನೂ ಮುಗಿದಿಲ್ಲ. ಆದರೆ ಈಗ ಕೆಪಿಎಸ್ಸಿ ಕರೆದಿರುವ ಸಿ ಗುಂಪಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇಲಾಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದಾರೆ. ಇದಕ್ಕೆ ನಾನು ಏನು ಮಾಡಬೇಕು?
- |ಸುಮಲತ ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ ನಿಯಮಗಳು) 1977ರ ನಿಯಮ 11 ರಂತೆ ಸರ್ಕಾರಿ ನೌಕರರು ಯಾವುದೇ ಬೇರೆ ಹುದ್ದೆಗೆ ಅಥವಾ ಸೇವೆಗೆ ನೌಕರಿ ಬಡ್ತಿಗಾಗಿ ಅರ್ಜಿ ಸಲ್ಲಿಸಿದರೆ ನೇಮಕಾತಿ ಪ್ರಾಧಿಕಾರದವರು ಆಕ್ಷೇಪಣಾ ರಹಿತ ಪ್ರಮಾಣ ಪತ್ರವನ್ನು ನೀಡಬೇಕೆಂದು ಸೂಚಿಸಿದೆ. ನೀವು ಮತ್ತೊಮ್ಮೆ ವಿನಂತಿಯನ್ನು ಸಲ್ಲಿಸಬಹುದು.
***
17-11-16
ಮಾತೃ ಇಲಾಖೆಯ ಅನುಮೋದನೆ ಇಲ್ಲದೆ ಅಮಾನತು ಮಾಡಿರುವುದು ಕ್ರಮಬದ್ಧವೇ?
ನಾನು ಬಿ ಗುಂಪಿನ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯತಿಗೆ ನಿಯೋಜನೆ ಮೇರೆಗೆ ಹೋಗಿದ್ದೇನೆ. ಕರ್ತವ್ಯಲೋಪ ಆಧಾರದ ಮೇಲೆ ನನ್ನನ್ನು ಮೇಲೆ ನನ್ನ ಮಾತೃಇಲಾಖೆಯ ಅನುಮೋದನೆ ಇಲ್ಲದೆ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಸೆಪ್ಟೆಂಬರ್ 1 ರಿಂದ ಅಮಾನತ್ತಿನಲ್ಲಿಟ್ಟಿದ್ದಾರೆ. ಇದು ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಕ್ರಮಬದ್ಧವಾಗಿದೆಯೇ?
- | ಪಂಚಾಕ್ಷರಿ ಚಾಮರಾಜನಗರ.
ಸಿ.ಸಿ.ಎ. ನಿಯಮಾವಳಿಯ ನಿಯಮ 15(2ಎ)ರ ಪ್ರಕಾರ ಏನೇ ಒಳಗೊಂಡಿದ್ದರೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಎರವಲು ಮೇಲೆ ಹೋಗಿರುವ ಸರ್ಕಾರಿ ನೌಕರರನ್ನು ಮಾತೃ ಇಲಾಖೆಯ ಪೂರ್ವಾನುಮತಿ ಪಡೆಯದೆ ಅಮಾನತು ಗೊಳಿಸಬಹುದು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ 155 ಅಥವಾ 196ನೇ ಪ್ರಕರಣದ ಮೇರೆಗೆ ಜಿಲ್ಲಾ ಅಥವಾ ತಾಲೂಕು ಪಂಚಾಯಿತಿಗೆ ಎರವಲು ಹೋಗಿರುವ ಸಮೂಹ ಎ ಅಥವಾ ಸಮೂಹ ಬಿ ಗುಂಪಿನ ಸರ್ಕಾರಿ ಅಧಿಕಾರಿಗಳನ್ನು ಮಾತೃ ಇಲಾಖೆಯ ಪೂರ್ವಾನುಮತಿ ಇಲ್ಲದೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಅಮಾನತ್ತು ಗೊಳಿಸಬಹುದು ಎಂದು ತಿಳಿಸಲಾಗಿದೆ. ನಿಮ್ಮನ್ನು ಅಮಾನತು ಗೊಳಿಸಿರುವುದು ನಿಯಮಾನುಸಾರ ಕ್ರಮಬದ್ದವಾಗಿರುತ್ತದೆ.
***
- 16-11-16.
ರಜೆ ಪಡೆದು ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವೇ?
ಈ ಹಿಂದೆ ಸಿನಿಮಾ ರಂಗದಲ್ಲಿ ಸುಮಾರು 8 ವರ್ಷ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದು, 2012ರಲ್ಲಿ ನನಗೆ ಕೆಪಿಟಿಸಿಎಲ್ನಲ್ಲಿ ಕೆಲಸ ಸಿಕ್ಕಿದೆ. ಈ ಕೆಲಸದ ಜತೆಗೆ ನಾನು ನನ್ನ ರಜೆಗಳನ್ನು ಬಳಸಿಕೊಂಡು ಸಿನಿಮಾಟೋಗ್ರಾಫರ್, ತಾಂತ್ರಿಕ ಅಥವಾ ನಟನಾಗಿ ಕಾರ್ಯ ನಿರ್ವಹಿಸಬಹುದೇ? ಇದಕ್ಕೆ ನಮ್ಮ ಮೇಲಾಧಿಕಾರಿಯು ಪರವಾನಗಿ ಅಥವಾ ಮಂಡಳಿಯ ಅಧಿಕೃತ ಆದೇಶವೇನಾದರೂ ಬೇಕೆ?
- | ಮಹೇಶ ಎಂ.
ಕರ್ನಾಟಕ ಸರ್ಕಾರಿ ಸೇವಾ (ನಡತೆ, ನಿಯಮಗಳು 1966) ನಿಯಮ 16 ರಂತೆ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಯಾವುದೇ ರೀತಿಯ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ ಅಥವಾ ಇತರೆ ಉದ್ಯೋಗಕ್ಕಾಗಿ ಮಾತುಕತೆ ನಡೆಸತಕ್ಕದ್ದಲ್ಲ. ಇತರೆ ಉದ್ಯೋಗವನ್ನು ಕೈಗೊಳ್ಳತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ಸಿನಿಮಾಟೋಗ್ರಾಫರ್ ಆಗಿ ತಾಂತ್ರಿಕ ಅಥವಾ ನಟರಾಗಿ ಕಾರ್ಯನಿರ್ವಹಿಸಲು ಪ್ರತಿಬಂಧಿಸಲಾಗಿದೆ. ಅಲ್ಲದೆ ಸರ್ಕಾರವು 2004ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ನೌಕರನ ಈ ನಡಾವಳಿಯನ್ನು ಪ್ರತಿಬಂಧಿಸಲು ಸಂಪೂರ್ಣವಾಗಿ ನಿಷೇಧಿಸಿದೆ.
***
- 15-11-16.
ಪ್ರೌಢಶಾಲಾ ಹುದ್ದೆಗೆ ಬಡ್ತಿಯ ಮೂಲಕ ಹೋಗದಿದ್ದರೆ ಲಭ್ಯವಾಗುವುದಿಲ್ಲ.
ನಾನು ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ 2007ರ ಆಗಸ್ಟ್ 18ರಂದು ಸೇವೆಗೆ ಸೇರಿದ್ದೇನೆ. ಈಗ ನಾನು ಬಿಎಸ್ಸಿ, ಬಿ.ಎಡ್., ಪದವಿ ಪಡೆದಿದ್ದು, ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಯ ಬಡ್ತಿ ಲಿಸ್ಟ್ನಲ್ಲಿ ನನ್ನ ಹೆಸರು 9ನೇ ಸ್ಥಾನದಲ್ಲಿದೆ. ಒಂದು ವೇಳೆ ನಾನು ಬಡ್ತಿ ನಿರಾಕರಿಸಿದರೆ, ನನಗೆ ಮುಂದಿನ 10, 15, 20 ವರ್ಷಗಳ ಕಾಲಮಿತಿ ವೇತನ ಬಡ್ತಿಗಳು ಸಿಗುತ್ತವೆಯೇ?
- | ಭೀಮು ಕಂಬಾರ ಬೆಳಗಾವಿ
ಕರ್ನಾಟಕ ಸರ್ಕಾರಿ ಸೇವಾ (ಕಾಲಬದ್ಧ ಬಡ್ತಿ ನಿಯಮಗಳು 1983), ಕರ್ನಾಟಕ ಸರ್ಕಾರಿ ಸೇವಾ ಸ್ವಯಂ ಚಾಲಿತ ಪದೋನ್ನತಿ (ನಿಯಮಗಳು) 1991 ಹಾಗೂ ದಿನಾಂಕ 9-5-2007ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 13 ಎಸ್ಆರ್ಪಿ 2007ರಂತೆ ನಿಮಗೆ ಕಾಲಮಿತಿ ಬಡ್ತಿಯಾಗಲಿ ಅಥವಾ ಹೆಚ್ಚುವರಿ ವೇತನ ಬಡ್ತಿಯಾಗಲಿ ಅಥವಾ ಸ್ವಯಂಚಾಲಿತ ಪದೋನ್ನತಿಯಾಗಲಿ ನೀವು ಪ್ರೌಢಶಾಲಾ ಹುದ್ದೆಗೆ ಬಡ್ತಿಯ ಮೂಲಕ ಹೋಗದಿದ್ದರೆ ಲಭ್ಯವಾಗುವುದಿಲ್ಲ.
***
- 9-11-16.
ಗರ್ಭಸ್ರಾವ, ಗರ್ಭಪಾತವಾದರೆ ರಜೆಯು 6 ವಾರಗಳನ್ನು ಮೀರಬಾರದು.
ನನಗೆ 7ನೇ ತಿಂಗಳಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಗಂಡು ಮಗು ಹುಟ್ಟಿದ್ದು, 2 ದಿನ ಇದ್ದು ಸತ್ತು ಹೋಗಿರುತ್ತದೆ. ನಮ್ಮ ಮೇಲಧಿಕಾರಿಯವರು ನೀವು 6 ತಿಂಗಳ ಹೆರಿಗೆ ರಜೆ ಪಡೆಯಲು ಅರ್ಹರಿರುವುದಿಲ್ಲ. ಅದು ಜೀವಂತ ಮಗುವಿಗೆ ಮಾತ್ರ, ನೀವು 42 ದಿನಗಳ ರಜೆ ಮುಗಿಸಿಕೊಂಡು ಬಂದು ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿದ್ದಾರೆ. ನಾನು ಎಷ್ಟು ದಿನ ರಜೆ ಪಡೆಯಲು ಅರ್ಹಳು ತಿಳಿಸಿ. ನಾನು 6 ತಿಂಗಳ ರಜೆ ಪಡೆಯಲು ಅರ್ಹಳಾದಲ್ಲಿ ಮೇಲಧಿಕಾರಿಗಳ ಮನವೊಲಿಸುವುದು ಹೇಗೆ? ಒಂದು ವೇಳೆ ಮಾಡಿಕೊಂಡಲ್ಲಿ ನನ್ನ ಕ.ಕ. ಮುಂದಕ್ಕೆ ಹೋಗುವುದೇ ತಿಳಿಸಿಕೊಡಿ.
- | ರೂಪ ಸಿ.ಆರ್. ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯ ಮಹಿಳಾ ಸರ್ಕಾರಿ ನೌಕರರಿಗೆ ಸಕ್ಷಮ ಪ್ರಾಧಿಕಾರಿಯವರು 180 ದಿನಗಳವರೆವಿಗೆ ಅದರ ಆರಂಭದ ದಿನದಿಂದ ಹೆರಿಗೆ ರಜೆಯನ್ನು ಮಂಜೂರು ಮಾಡಬಹುದು. ಇದೇ ನಿಯಮಾವಳಿಯ ನಿಯಮ 135(2)ರ ರೀತ್ಯ ಗರ್ಭಸ್ರಾವ ಅಥವಾ ಗರ್ಭಪಾತವಾದರೆ ರಜೆಯು ಆರು ವಾರಗಳನ್ನು ಮೀರಬಾರದು ಎಂದು ಸೂಚಿಸಲಾಗಿದೆ. ಆದರೆ ನಿಮ್ಮ ಪ್ರಕರಣದಲ್ಲಿ ಮಗುವು 26 ವಾರಗಳ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜನಿಸಿ ನಿಧನ ಹೊಂದಿರುವುದರಿಂದ ನಿಮಗೆ 180 ದಿನಗಳ ಕಾಲ ಪ್ರಸೂತಿ ರಜೆಯನ್ನು ಮಂಜೂರು ಮಾಡಬೇಕಾದುದು ಸಕ್ಷಮ ಪ್ರಾಧಿಕಾರಿಯ ಕರ್ತವ್ಯವಾಗಿರುತ್ತದೆ. ಆದರೆ ನಿಮ್ಮ ಮೇಲಾಧಿಕಾರಿಯವರು 6 ತಿಂಗಳ ಹೆರಿಗೆ ರಜೆ ಬರುವುದಿಲ್ಲ ಎಂದು ತಿಳಿಸುವುದು ನಿಯಮ ಬಾಹಿರವಾಗುತ್ತದೆ. ಮಹಿಳಾ ಸರ್ಕಾರಿ ನೌಕರಳು ಮಗುವಿಗೆ ಜನ್ಮ ನೀಡಿದ ನಂತರ ಆ ಮಗುವು ನಿಧನ ಹೊಂದಿದರೆ ಆಕೆ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಬಲಾಢ್ಯವಾಗಿರುವುದಿಲ್ಲ. ಅಲ್ಲದೆ ದೈಹಿಕವಾಗಿಯೂ ಉತ್ತಮ ದೇಹದಾರ್ಢ್ಯತೆಯನ್ನು ಹೊಂದಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ಮಗು ನಿಧನ ಹೊಂದಿದ್ದರೂ 6 ತಿಂಗಳ ರಜೆ ಮಂಜೂರು ಮಾಡಲು ನಿಮ್ಮ ಮೇಲಾಧಿಕಾರಿಯವರಿಗೆ ತಿಳಿಸಬೇಕಾಗುತ್ತದೆ. ನೀವು ವೇತನ ರಜೆ ಪಡೆದುಕೊಂಡಲ್ಲಿ ನಿಮ್ಮ ಪರೀಕ್ಷಾರ್ಥ ಅವಧಿಯು ಮುಂದೂಡಲ್ಪಡುತ್ತದೆ. ಆದ ಕಾರಣ ನೀವು ನಿಮ್ಮ ಮೇಲಾಧಿಕಾರಿಗಳಿಗೆ ಈ ಪ್ರಸೂತಿ ರಜೆಯನ್ನು 180 ದಿನಗಳಿಗೆ ನೀಡಲು ಮನವಿ ಸಲ್ಲಿಸಬಹುದು.
***
- 14/11/16
- ನನ್ನ ಪತಿಯು ಉಪನ್ಯಾಸಕ ವೃತ್ತಿಯಲ್ಲಿದ್ದರು. ಅವರ ನಿಧನದ ನಂತರ ನನಗೆ ಅನುಕಂಪದ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕರಾಗಿ ಪದವಿ ಪೂರ್ವ ಕಾಲೇಜಿನಲ್ಲಿ ನೇಮಕಾತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾನು ಕುಟುಂಬ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದೇನೆ. ಈಗ ನಾನು ನನ್ನ ಪತಿಯ ಕೆಲಸಕ್ಕೆ ರಾಜೀನಾಮೆ ನೀಡಿದರೆ ಕುಟುಂಬ ಪಿಂಚಣಿ ಸೌಲಭ್ಯವನ್ನು ನಿಲ್ಲಿಸುತ್ತಾರೆಯೆ? ಅಥವಾ ಕೆಲಸಕ್ಕೂ ಫ್ಯಾಮಿಲಿ ಪೆನ್ಶನ್ ಸೌಲಭ್ಯಕ್ಕೂ ಯಾವುದೇ ಸಂಬಂಧವಿಲ್ಲವೆ?
ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ಪಿಂಚಣಿ) ನಿಯಮಗಳು 2002ರ ರೀತ್ಯ ನೀವು ಕೆಲಸಕ್ಕೆ ರಾಜೀನಾಮೆ ನೀಡಿದರೂ ಕುಟುಂಬ ಪಿಂಚಣಿ ಸೌಲಭ್ಯವನ್ನು ನಿಲ್ಲಿಸಲಾಗುವುದಿಲ್ಲ. ಆದರೆ ಈ ನಿಯಮಾವಳಿ ರೀತ್ಯ ಮರುವಿವಾಹವಾದರೆ ಕುಟುಂಬ ಪಿಂಚಣಿಯು ರದ್ದಾಗುತ್ತದೆ. ಇಲ್ಲವೇ ನಿಮ್ಮ ಮೊದಲ ಪತಿಯಿಂದ ಜನಿಸಿದ ಮಗುವಿಗೆ ವರ್ಗಾವಣೆಯಾಗುತ್ತದೆ. (ಹೆ
- |ವೀಣಾ ಜಿ. ಮಂಗಳೂರು
26-10-16.
ನೌಕರಿಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬಹುದು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರನು ಸಾರ್ವತ್ರಿಕ ಚುನಾವಣೆಗಳಾದ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ, ವಿಧಾನಸಭೆ, ಲೋಕಸಭೆಗಳಂತಹ ಚುನಾವಣೆಗಳಿಗೆ ಸ್ಪರ್ಧಿಸಲು ಅವಕಾಶವಿದೆಯೆ? ಹಾಗಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮ ಹಾಗೂ ಷರತ್ತುಗಳನ್ನು ತಿಳಿಸಿ. ನೌಕರಿಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರೆ ರಾಜೀನಾಮೆ ಹಿಂಪಡೆದು ಪುನಃ ಅದೇ ಹುದ್ದೆಗೆ ಹಾಜರಾಗಬಹುದೇ?
| ಸುರೇಶ. ಹೆಚ್ ಬಳ್ಳಾರಿ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 5ರ ರಿತ್ಯಾ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ನೌಕರಿಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬಹುದು. ಚುನಾವಣಾ ಅಧಿಕಾರಿಯಿಂದ ರಾಜೀನಾಮೆ ಅಂಗೀಕಾರವಾದ ಬಗ್ಗೆ ಮಾಹಿತಿ ಪಡೆಯುವುದರಿಂದ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕರ್ತವ್ಯಕ್ಕೆ ಮರು ಹಾಜರಾಗಲು ಸಾಧ್ಯವಾಗುವುದಿಲ್ಲ. ಆದುದರಿಂದ ಸರ್ಕಾರಿ ನೌಕರನು ಸಾಹಿತ್ಯಿಕ ಸಾಂಸ್ಕೃತಿಕ ಮತ್ತು ಇನ್ನಿತರ ರಾಜಕೀಯೇತರ ಸಂಸ್ಥೆ ಚುನಾವಣೆಗಳಲ್ಲಿ ಭಾಗವಹಿಸಬಹುದು.
***
24-10-16.
ನನಗೆ ಮಗು ಪೋಷಣೆಗೆ ರಜೆ ಸೌಲಭ್ಯದ ಅವಧಿ ಎಷ್ಟು?
ನನಗೆ 41 ವರ್ಷವಿದ್ದು ಸಂತಾನಕ್ಕಾಗಿ ಸಾಕಷ್ಟು ವೈದ್ಯರ ಸಲಹೆ/ಸೂಚನೆ ಪಡೆದರೂ ಫಲಪ್ರದವಾಗಲಿಲ್ಲ. ಈಗ ನಮ್ಮ ಸಂಬಂಧಿಕರೊಬ್ಬರ ಮಗು ದತ್ತು ಪಡೆಯುವ ಅವಕಾಶ ದೊರಕಿದೆ. ಇದಕ್ಕೂ ಇಲಾಖಾ ಅನುಮತಿ ಪಡೆಯಬೇಕೆ ಹಾಗೂ ನನಗೆ ಮಗು ಪೋಷಣೆಗೆ ರಜೆ ಸೌಲಭ್ಯದ ಅವಧಿ ಎಷ್ಟು?
| ಎಸ್.ಲಕ್ಷ್ಮೀ ತುರುವೇಕೆರೆ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ರೀತ್ಯಾ ನೀವು ಮಗು ದತ್ತು ಪಡೆಯಲು ಸರ್ಕಾರದ ಅನುಮತಿ ಅವಶ್ಯಕತೆಯಿಲ್ಲ. ನೀವು ಹಿಂದೂ ದತ್ತಕ ಕಾಯ್ದೆಯಡಿ ಮಗು ದತ್ತು ತೆಗೆದುಕೊಂಡು ನೋಂದಣಿ ಮಾಡಿಸಬೇಕು ಹಾಗೂ ನಿಮ್ಮ ಮಗುವು ಒಂದು ವರ್ಷ ಪೂರ್ಣವಾಗುವವರೆಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 135ಬಿ ರೀತ್ಯಾ ನೀವು ಮಗುವಿನ ಪೋಷಣೆಗೆ ರಜೆ ಪಡೆಯಬಹುದು.
***
23-10/16.
ಯಾವುದೇ ಸರ್ಕಾರಿ ನೌಕರರು ದೀರ್ಘ ಕಾಯಿಲೆಯಿಂದ ಯಾವುದೇ ರಜೆ ಪಡೆಯದೆ ಮೃತಪಟ್ಟಲ್ಲಿ ಆತನ ಅವಲಂಬಿತರು ಹೆಂಡತಿ/ಗಂಡ ಅನುಕಂಪದ ಆಧಾರದ ಮೇರೆಗೆ ನೌಕರಿ ಪಡೆಯಲು ಅರ್ಹರೆ? ಸದರಿ ಮೃತಪಟ್ಟ ವ್ಯಕ್ತಿಯು ಇಂತಿಷ್ಟು ವರ್ಷ ಸರ್ಕಾರಿ ಸೇವೆ ಸಲ್ಲಿಸಬೇಕಾಗಿರುತ್ತದೆ ಎಂದೇನಾದರೂ ಇರುತ್ತದೆಯೇ?
| ಎಂ. ವೆಂಕಟಾಚಲಪತಿ ಕೋಲಾರ.
ಕರ್ನಾಟಕ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿ ಒಂದು ದಿನ ಸೇವೆ ಸಲ್ಲಿಸಿ ಮೃತನಾದರೆ, ಅವನನ್ನು ಅವಲಂಬಿಸಿದ ಗಂಡ ಅಥವಾ ಹೆಂಡತಿ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1986ರ ನಿಯಮ 3ರಂತೆ ಅನುಕಂಪದ ಮೇರೆಗೆ ನೇಮಕ ಹೊಂದಲು ಅರ್ಹರಾಗುತ್ತಾರೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತಿ ಸೇವೆಗೆ ಸೇರಿ 1 ದಿವಸವಾದರೂ ಸಹ ಅವರು ಸರ್ಕಾರಿ ನೌಕರರೇ ಆಗಿರುವುದರಿಂದ ತಕ್ಷಣವೇ ಮೃತನಾದರೂ ಅವನ ಕುಟುಂಬಕ್ಕೆ ಎಲ್ಲಾ ಆರ್ಥಿಕ ಮತ್ತು ಸೇವಾ ಸೌಲಭ್ಯಗಳು ನಿಯಮಾವಳಿಗಳ ರೀತ್ಯಾ ಲಭ್ಯವಾಗುತ್ತದೆ.
***
22-10-16.
ನಾನು ಬೆರಳಚ್ಚುಗಾರನಾಗಿ ಸರ್ಕಾರಿ ಸೇವೆಗೆ ಸೇರಿ 8 ವರ್ಷ ಸೇವೆಯ ನಂತರ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಪಡೆದೆ. 4 ವರ್ಷ ಶೀಘ್ರಲಿಪಿಗಾರನಾಗಿ ಹಾಗೂ 1 ವರ್ಷ ಪ್ರಥಮ ದರ್ಜೆ ಸಹಾಯಕರ ತರಬೇತಿ ಪಡೆದಿದ್ದೇನೆ. ನಮ್ಮ ಇಲಾಖೆಗೆ ಕಚೇರಿ ಅಧೀಕ್ಷಕರ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಾವಳಿ ರೀತ್ಯಾ ಶೀಘ್ರಲಿಪಿಗಾರನಾಗಿ ಅಥವಾ ಪ್ರಥಮ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸಿದರೆ ಪದೋನ್ನತಿ ನೀಡಲಾಗು ವುದೆಂದು ತಿಳಿಸಲಾಗಿದೆ. ಆದರೂ ನನಗೆ ಪದೋನ್ನತಿ ನಿರಾಕರಿಸಿದ್ದಾರೆ. ಇದು ಸ್ವಾಭಾವಿಕ ನ್ಯಾಯವೆ? ನಾನು ಪರಿಶಿಷ್ಟ ಜಾತಿಗೆ ಸೇರಿದ್ದು ಪದೋನ್ನತಿ ಸೇವಾವಧಿಗೆ ಅರ್ಹತಾ ಸೇವಾವಧಿ ಕಡಿಮೆ ಸಲ್ಲಿಸಿದ್ದರೂ ಪದೋನ್ನತಿ ನೀಡಬಹುದೆ.
-ಶಿವಕುಮಾರಯ್ಯ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ (ಪದೋನ್ನತಿ), ವೇತನ ನೀತಿ-ನಿಯಮಗಳು 1973ರ ರೀತ್ಯಾ ಸರ್ಕಾರಿ ನೌಕರನು ವೃಂದ ನೇಮಕಾತಿ ನಿಯಮಾವಳಿ ರೀತ್ಯಾ ಅರ್ಹತಾದಾಯಕ ಸೇವೆ ಹೊಂದಿದ್ದರೆ ಮುಂದಿನ ಹುದ್ದೆಗೆ ಪದೋನ್ನತಿ ನೀಡಬಹುದೆಂದು ಸೂಚಿಸಲಾಗಿದೆ. ನೀವು ಶೀಘ್ರಲಿಪಿಗಾರರಾಗಿ 4 ವರ್ಷ ಮತ್ತು 1 ವರ್ಷ ತರಬೇತಿಯನ್ನು ಸಹ ಪಡೆದಿರುವುದರಿಂದ ಸರ್ವ ರೀತಿಯಲ್ಲೂ ನೀವು ಪದೋನ್ನತಿಗೆ ಅರ್ಹರಾಗಿರುತ್ತೀರಿ. ಆದರೆ, ನಿಮ್ಮ ಇಲಾಖೆಯ ಕೆಳಗಿನ ಅಧಿಕಾರಿಗಳು ಶೀಘ್ರಲಿಪಿಗಾರರ ಹುದ್ದೆಯಲ್ಲಿ ಐದು ವರ್ಷ ಮತ್ತು ಪ್ರ.ದ.ಸ ತರಬೇತಿ 1 ವರ್ಷ ಎಂದು ತಿಳಿಸಿ ಪದೋನ್ನತಿ ನಿರಾಕರಿಸುವುದು ಸ್ವಾಭಾವಿಕ ನ್ಯಾಯವಲ್ಲ. ಶೀಘ್ರಲಿಪಿಗಾರರ ಮತ್ತು ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿ ಒಂದೇ ಆಗಿದ್ದು ಇವುಗಳನ್ನು ಲಿಪಿಕ ಹುದ್ದೆಗಳೆಂದು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗೆ ಪರಿಗಣಿಸಲಾಗಿದೆ. ಅಲ್ಲದೆ ನೀವು ಪರಿಶಿಷ್ಟ ಜಾತಿಯವರಾಗಿರುವುದರಿಂದ ದಿನಾಂಕ: 27.07.2013ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 88 ಸೇನೆನಿ 2013ರ ರೀತ್ಯಾ ನಿಮ್ಮ ಅರ್ಹತಾದಾಯಕ ಸೇವೆಯನ್ನು ಕಡಿಮೆಗೊಳಿಸಿ ಪದೋನ್ನತಿಯನ್ನು ನೀಡಬಹುದಾಗಿದೆ.
***
21-10-16.
ನಾನು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು ಪ್ರಸ್ತುತ 2 ವರ್ಷಗಳಿಂದ ಲೋಕಾಯುಕ್ತ ಟ್ರಾ್ಯಪ್ ಕೇಸ್ನಲ್ಲಿ ಸಿಲುಕಿಕೊಂಡು ಅಮಾನತ್ತಿನಲ್ಲಿದ್ದೇನೆ. ನಾನು ಪದವೀಧರನಾಗಿದ್ದು ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರೆದಿರುವ ಪಿ.ಡಿ.ಓ ಹುದ್ದೆಗಳಿಗೆ ಹಾಗೂ ಪೊಲೀಸ್ ಇಲಾಖೆಯ ಪಿ.ಎಸ್.ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದು ನಾನು ಆಕ್ಷೇಪಣಾ ರಹಿತ ಪತ್ರ ನೀಡಲು ಮೇಲಧಿಕಾರಿಗಳಿಗೆ ಕೋರಿದಾಗ ನಿರಾಕರಿಸಿದ್ದಾರೆ. ನನಗೆ ನಿಯಮಾವಳಿಯ ರೀತ್ಯಾ ಅನುಮತಿ ನೀಡಲು ಅವಕಾಶವಿದೆಯೇ. | ಬಿ.ಎನ್.ಬಿರಾದಾರ ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನಡತೆ ನಿಯಮಳು) 1966ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನೂ ಪೂರ್ವಾನುಮತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಲ್ಲದೆ ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ, ಬಡ್ತಿ) ನಿಯಮಗಳು 1977ರ ನಿಯಮ 11ರಂತೆ ಸಕ್ಷಮ ಪ್ರಾಧಿಕಾರದ ಮೂಲಕವೇ ಸಲ್ಲಿಸಬೇಕು. ಆದರೆ, ಪ್ರಸ್ತುತ ನೀವು ಅಮಾನತ್ತಿನಲ್ಲಿರುವಾಗ ಅಂತಹ ನೌಕರರಿಗೆ ಆಕ್ಷೇಪಣಾ ರಹಿತ ಪತ್ರ ಕೊಡಲು ಬರುವುದಿಲ್ಲ. ಅಂತಹ ಅರ್ಜಿ ಪರಿಗಣಿಸಬಾರದೆಂದು ಈಗಾಗಲೇ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಮಾನತ್ತಿನಲ್ಲಿರುವ ನೌಕರನನ್ನು ಹೊಸ ಹುದ್ದೆಗೆ ಆಯ್ಕೆಯಾಗುವುದರಿಂದ ಬಿಡುಗಡೆಗೊಳಿಸಲು ಕ್ಲಿಷ್ಟಕರವಾಗುತ್ತದೆ. ಶಿಸ್ತುಕ್ರಮ, ಕ್ರಿಮಿನಲ್ ಕ್ರಮ ಎದುರಿಸುತ್ತಿರುವವರ ಪ್ರಕರಣಗಳನ್ನು ಹಾಗೂ ದಂಡನಾ ಅವಧಿಯಲ್ಲಿರುವ ಪ್ರಕರಣಗಳನ್ನು ಇದೇ ರೀತಿ ಪರಿಗಣಿಸಬೇಕಾಗುತ್ತದೆ.
***
20-10-16.
ನಾನು ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಈಗ ಪಿಡಿಓ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದಿದ್ದೇನೆ. ವಯೋಮಿತಿ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಸರ್ಕಾರಿ ಸೇವಾ ನಿಯಮಾವಳಿಯಂತೆ ನನಗೆ ವಯಸ್ಸಿನ ಸಡಿಲಿಕೆ ದೊರಕುತ್ತದೆಯೇ? ಸಡಿಲಿಕೆ ಸಿಗುವುದಾದರೆ ಎಷ್ಟು ವರ್ಷ ಸಿಗುತ್ತದೆ?
| ಗಜಾನನ ಹೆಗಡೆ ಯಲ್ಲಾಪುರ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 6 (ಬಿ)ರಂತೆ ಸರ್ಕಾರಿ ನೌಕರನು ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ಅಧಿನಿಯಮ, ಕೇಂದ್ರ ಮತ್ತು ರಾಜ್ಯ ಅಧಿನಿಯಮದಡಿಯಲ್ಲಿನ ಸರ್ಕಾರದಿಂದ ಸ್ಥಾಪಿತವಾಗಿದ್ದು ಮತ್ತು ಒಡೆತನ ಹೊಂದಿರುವ ಅಥವಾ ನಿಯಂತ್ರಣ ಹೊಂದಿರುವ ನಿಗಮದಡಿಯಲ್ಲಿ ಹುದ್ದೆ ಹೊಂದಿರುವ ಸಂದರ್ಭದಲ್ಲಿ ಅಭ್ಯರ್ಥಿಯು ಆ ಹುದ್ದೆಯಲ್ಲಿ ಮಾಡಿರುವ ಸೇವಾ ಅವಧಿಯಷ್ಟು ಅಥವಾ ಗರಿಷ್ಠ 10 ವರ್ಷದ ವಯೋಮಿತಿ ಸಡಿಲಿಕೆ ನೀಡಲಾಗುವುದು. ಆದರೆ ನೀವು ಖಾಸಗಿ ಒಡೆತನದ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ನಿಮಗೆ ವಯೋಮಿತಿ ಸಡಿಲಿಕೆಯ ಸೌಲಭ್ಯ ಲಭ್ಯವಾಗುವುದಿಲ್ಲ.
***
19-10-2016.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನಿರಾಕರಿಸಿದ್ದೇನೆ. ಇಂತಹ ನಿರಾಕರಣಿಯಿಂದ ನನಗೆ 25 ಮತ್ತು 30 ವರ್ಗಗಳ ವೇತನ ಬಡ್ತಿ ನೀಡಿರುವುದಿಲ್ಲ. ಶಿಕ್ಷಕ ಪದೋನ್ನತಿ ಪಡೆಯಲು ಒಮ್ಮೆ ಮರು ಅವಕಾಶ ಕೋರಿದ ಶಿಕ್ಷಕರಿಗೆ 25 ವರ್ಷದ ವೇತನ ಬಡ್ತಿ ಮಂಜೂರು ಮಾಡಬಹುದೇ?
– ಎಸ್.ವೇಣು, ಬಾಗೇಪಲ್ಲಿ.
ದಿನಾಂಕ 12-4-2012ರ ಸರ್ಕಾರಿ ಆದೇಶದ ಕಂಡಿಕೆ 6ರಲ್ಲಿಯಂತೆ ಸರ್ಕಾರಿ ನೌಕರನು ಸ್ವಯಂಪ್ರೇರಿತ ಪದೋನ್ನತಿ ನಿರಾಕರಿಸಿದರೆ ಅಥವಾ ಈಗಾಗಲೇ ಒಂದು ಪದೋನ್ನತಿ ಪಡೆದಿದ್ದರೆ ಅಂತಹ ನೌಕರರಿಗೆ 25 ಮತ್ತು 30 ವರ್ಷಗಳ ನಿರಂತರ ಸೇವಾ ಅವಧಿಗೆ ನೀಡಲಾಗುವ ಹೆಚ್ಚುವರಿ ವೇತನ ಬಡ್ತಿ ನೀಡುವದಿಲ್ಲ. ಆದುದರಿಂದ ನೀವು ಪುನಃ ಪದೋನ್ನತಿ ಸ್ವೀಕರಿಸಿದರೂ ಸಹ ಈ ಹಿಂದೆ ನಿರಾಕರಿಸಿದ ಪ್ರಯುಕ್ತ ಹೆಚ್ಚುವರಿ ವೇತನ ಬಡ್ತಿ ನಿಮಗೆ ನೀಡಲಾಗುವುದಿಲ್ಲ.
***
18-10-16.
ಅನುಮತಿಸಬೇಕೇ ಬೇಡವೇ ಎಂಬುದನ್ನು ಪ್ರಾಧಿಕಾರಿಯೇ ನಿರ್ಧರಿಸತಕ್ಕದ್ದು.
ನಾನು ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ಪ್ರಸ್ತುತ ಕರೆದಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸ ಬಯಸಿದ್ದು ಮೇಲಧಿಕಾರಿಗಳಿಗೆ ಆಕ್ಷೇಪಣಾ ರಹಿತ ಪತ್ರ ನೀಡಲು ಕೋರಿದಾಗ ಪ್ರೊಬೇಷನರಿ ಅವಧಿ ಮುಗಿಯದಿರುವುದರಿಂದ ನೀಡಲು ಸಾಧ್ಯವಿಲ್ಲವೆಂದು ತಗಾದೆ ಎತ್ತಿದ್ದಾರೆ. ಆಕ್ಷೇಪಣಾ ಪತ್ರವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಿ ಪ್ರಸ್ತುತ ಹುದ್ದೆಗೆ ರಾಜೀನಾಮೆ ನೀಡಿ ಪಿಡಿಓ ಹುದ್ದೆಗೆ ಹಾಜರಾದರೆ ತೊಂದರೆಯಾಗುತ್ತದೆಯೇ? ಪಿಡಿಓ ಪರೀಕ್ಷೆಗೆ ಯಾವ ಪುಸ್ತಕ ಓದಬೇಕೆಂಬ ಮಾಹಿತಿ ನೀಡಿ.
– ನಾಗಲಾಂಬಿಕಾ ದಾವಣಗೆರೆ.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ)ನಿಯಮಾವಳಿ 1977ರ ನಿಯಮ 11ರ ಮೇರೆಗೆ ಯಾವುದೇ ಸೇವೆಗೆ ಅಥವಾ ಹುದ್ದೆಗೆ ಬಡ್ತಿಗಾಗಿ ಅರ್ಜಿ ಸಲ್ಲಿಸುವಾಗ ಈಗಿರುವ ಹುದ್ದೆಗೆ ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರಿಯ ಮೂಲಕ ಸಲ್ಲಿಸತಕ್ಕದ್ದು. ಅನುಮತಿಸಬೇಕೇ ಬೇಡವೇ ಎಂಬುದನ್ನು ಪ್ರಾಧಿಕಾರಿಯೇ ನಿರ್ಧರಿಸತಕ್ಕದ್ದು. ಅನುಮತಿ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ಬಾಧೆ ಉಂಟು ಮಾಡುವುದಿಲ್ಲ ಅಥವಾ ಅರ್ಜಿದಾರ ಸರ್ಕಾರದೊಡನೆ ಮಾಡಿಕೊಂಡಿರುವ ನಿರ್ದಿಷ್ಟ ಒಪ್ಪಂದಕ್ಕೆ ಅಸಂಗತವಾಗಿಲ್ಲವೆಂದು ಪ್ರಾಧಿಕಾರಿ ಪರಿಗಣಿಸದ ಹೊರತು ಅನುಮತಿ ನೀಡತಕ್ಕದ್ದು ಎಂದು ಸೂಚಿಸಲಾಗಿದೆ. ಹೀಗಿರುವಾಗ ಪ್ರೊಬೇಷನರಿ ಅವಧಿಯಲ್ಲಿ ಆಕ್ಷೇಪಣಾ ರಹಿತ ಪತ್ರ ನೀಡದಿರುವುದು ನಿಯಮಬಾಹಿರವಾಗುತ್ತದೆ. ಅಲ್ಲದೆ ನೀವು ಪ್ರಸ್ತುತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊಸ ಪಿಡಿಓ ಹುದ್ದೆಗೆ ಹಾಜರಾದರೆ ನಡತೆ ನಿಯಮಾವಳಿಯ ಉಲ್ಲಂಘನೆಯಾಗುತ್ತದೆ. ಶಿಸ್ತಿನ ಕ್ರಮಕ್ಕೆ ಒಳಗಾಗುತ್ತೀರಿ. ಪಿಡಿಓ ಹುದ್ದೆಗೆ ನೂತನ ಪಠ್ಯಕ್ರಮಕ್ಕನುಸಾರವಾಗಿ ಇತ್ತೀಚಿಗೆ ಪ್ರಕಟವಾಗಿರುವ ಲ.ರಾಘವೇಂದ್ರ ಅವರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾ.ಪಂ. ಕಾರ್ಯದರ್ಶಿ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಯನ್ನು ತಪ್ಪದೆ ಓದಿದರೆ ಯಶಸ್ಸು ಗಳಿಸಲು ಸಾಧ್ಯ.
***
15-10-16
ಮಂಜೂರಾತಿ ದಿನಾಂಕದಿಂದಲೇ ಅನ್ವಯ.
-ಎನ್.ಎಂ.ಮಂಜುನಾಥ್ ದಾವಣಗೆರೆ
ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು, 2 ಜೀವಂತ ಮಕ್ಕಳ ನಂತರ ನನ್ನ ಪತ್ನಿಗೆ ದಿನಾಂಕ 4.4.2014ರಂದು ಸಂತಾನ ಹರಣ ಚಿಕಿತ್ಸೆ ಮಾಡಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಮೇಲಾಧಿಕಾರಿಯವರಾದ ಪ್ರಾಚಾರ್ಯರು ದಿನಾಂಕ 1.6.2016ರಂದು ಮಾಸಿಕ ಕುಟುಂಬ ಭತ್ಯೆಯನ್ನು ಮಂಜೂರು ಮಾಡಿರುತ್ತಾರೆ. ಈಗ ನಾನು 4.4.2014ರಿಂದ ಬಾಕಿ ಬಿಲ್ಲು ಮಾಡಿಕೊಂಡು, ಅದನ್ನು ಪಡೆದುಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
1985ರ ಸರ್ಕಾರಿ ಆದೇಶದಂತೆ ಸರ್ಕಾರವು ಕುಟುಂಬ ಕಲ್ಯಾಣ ಯೋಜನೆಗೆ ಉತ್ತೇಜನ ನೀಡಲು, ಸರ್ಕಾರಿ ನೌಕರನು ಅದನ್ನು ಅನುಸರಿಸಲು ಪ್ರಾರಂಭದಿಂದಲೇ ವಿಶೇಷ ವೈಯಕ್ತಿಕ ವೇತನವನ್ನು ನೀಡಲು ಆದೇಶಿಸಿರುತ್ತದೆ. ನೀವು 2014ರಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ನಿಮ್ಮ ಪತ್ನಿಗೆ ಮಾಡಿಸಿದ ನಂತರ ಅರ್ಜಿ ಸಲ್ಲಿಸಿರುವುದರಿಂದ ಹಾಗೂ ನಿಮ್ಮ ಮೇಲಾಧಿಕಾರಿಯವರು ಇದನ್ನು 2016ರಲ್ಲಿ ಮಂಜೂರು ಮಾಡಿರುವುದರಿಂದ ಹಿಂದಿನ ಬಾಕಿ ಮೊಬಲಗನ್ನು ಪಡೆಯಲು ನಿಯಮಾವಳಿಯಲ್ಲಿ ಅವಕಾಶ. ಮಂಜೂರಾತಿ ದಿನಾಂಕದಿಂದಲೇ ಇದು ಅನ್ವಯವಾಗುತ್ತದೆ.
***
14-10-16
ಮೂಲ ವೇತನ ಯಾವುದು ಅನ್ವಯವಾಗುತ್ತದೆ?
ನಾನು ದಿನಾಂಕ 11.8.2014ರಿಂದ 9.3.2016ರವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಇಲಾಖೆ ಒಪ್ಪಿಗೆ ಪಡೆದು ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ ನೇರ ನೇಮಕಾತಿ ಮೂಲಕ ದಿನಾಂಕ 10.3.2016ರಂದು ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿರಂತೆ ಬಿಡುಗಡೆ ಹೊಂದಿ ಹೊಸ ಹುದ್ದೆಗೆ ಹಾಜರಾಗಿರುತ್ತೇನೆ. ಪಿಡಿಓ ಹುದ್ದೆಯ ವೇತನ ಶ್ರೇಣಿ ರೂ. 20,000-30,000 ಸಾವಿರವಾಗಿದ್ದು ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ರೂ. 14,250-26,700 ಇದ್ದು ಈಗ ನನ್ನ ಮೂಲ ವೇತನ ಯಾವುದು ಅನ್ವಯವಾಗುತ್ತದೆ?
| ಕೆ.ಎಂ. ಮಾಯಮ್ಮನವರ್ ಮುಂಡರಗಿ ಗದಗ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41-ಎರಂತೆ ಒಬ್ಬ ಸರ್ಕಾರಿ ನೌಕರನು ಮೇಲಿನ ವೇತನ ಶ್ರೇಣಿಯಿಂದ ಅದರ ಕೆಳಗಿನ ವೇತನ ಶ್ರೇಣಿಗೆ ನಿಯುಕ್ತಿ ಹೊಂದಿದರೆ ಅವನಿಗೆ ಮೇಲಿನ ವೇತನ ಶ್ರೇಣಿಯಲ್ಲಿ ಯಾವ ದಿನಾಂಕದಿಂದ ವೇತನ ಪಡೆಯುತ್ತಿದ್ದನೋ ಅದೇ ದಿನಾಂಕದಿಂದ ಕೆಳಗಿನ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಲಾಗುತ್ತದೆ. ಆದುದರಿಂದ ನೀವು ಪಿಡಿಓ ಹುದ್ದೆಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಳಗಿನ ಶ್ರೇಣಿಗೆ ನಿಯುಕ್ತರಾಗಿರುವುದರಿಂದ ನಿಮಗೆ ರೂ. 14,550-20,700ರಲ್ಲಿ ದಿನಾಂಕ 1.8.2014ರಿಂದ ವೇತನವನ್ನು ನಿಗದಿಪಡಿಸಲಾಗುತ್ತದೆ. ನಿಮಗೆ ವೇತನ ರಕ್ಷಣೆ ದೊರಕುವುದಿಲ್ಲ.
***
13-10-16.
ಜೀವನಾಧಾರ ಭತ್ಯೆ ಭರಿಸಿಕೊಡಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ಒಬ್ಬ ಸರ್ಕಾರಿ ನೌಕರನು ಕೊಲೆ ಆಪಾದನೆ ಮೇಲೆ ಸೆರೆಮನೆ ವಾಸ ಅನುಭವಿಸುತ್ತಿದ್ದು ಇವರಿಗೆ ಸಂಬಂಧಪಟ್ಟ ಇಲಾಖೆಯವರು ಅಮಾನತು ಆದೇಶ ಹೊರಡಿಸಿರುತ್ತಾರೆ. ಆದರೆ ಇವರು 3 ತಿಂಗಳ ನಂತರ ಸೆರೆಮನೆಯಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಮೇಲ್ಕಂಡ ಅವಧಿಗೆ ಜೀವನಾಧಾರ ಭತ್ಯೆ ಭರಿಸಿಕೊಡಬೇಕೆಂದು ಮನವಿ ಮಾಡಿರುತ್ತಾರೆ. ಇವರಿಗೆ ಜೀವನಾಧಾರ ಭತ್ಯೆ ಭರಿಸಿಕೊಡಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
| ಎಸ್.ವೆಂಕಟೇಶ ಶ್ರೀರಾಮಪುರ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ(ಸಿಸಿಎ)ನಿಯಮಾವಳಿಯ ನಿಯಮ 10ರ ಮೇರೆಗೆ ಸರ್ಕಾರಿ ನೌಕರನು ಕ್ರಿಮಿನಲ್ ಆರೋಪದ ಮೇಲಾಗಲಿ, ಇನ್ನಿತರೆ ಪ್ರಕರಣಗಳಾಗಲಿ 48 ಗಂಟೆಗಳಿಗಿಂತ ಹೆಚ್ಚು ಅವಧಿಗೆ ನ್ಯಾಯಾಂಗ ಕಸ್ಟಡಿಯಲ್ಲಿದ್ದರೆ ಅಥವಾ 48 ಗಂಟೆ ಮೀರಿದ ಕಾರಾಗೃಹ ಶಿಕ್ಷೆ ವಿಧಿಸಿದ್ದರೆ ಸರ್ಕಾರಿ ನೌಕರನನ್ನು ಸಕ್ಷಮ ಪ್ರಾಧಿಕಾರವು ಅಮಾನತ್ತಿನಲ್ಲಿಡಬಹುದು. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 98ರ ಮೇರೆಗೆ ಸರ್ಕಾರಿ ನೌಕರನಿಗೆ ಮೊದಲ 6 ತಿಂಗಳು ಅವನು ಪಡೆಯುತ್ತಿದ್ದ ವೇತನದ ಅರ್ಧದಷ್ಟು ಹಾಗೂ ಅದಕ್ಕೆ ಅನ್ವಯವಾಗುವ ತುಟ್ಟಿಭತ್ಯೆ ಹಾಗೂ ಅಮಾನತ್ತಿನ ಪೂರ್ವ ಪಡೆಯುತ್ತಿದ್ದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಜೀವನಾಧಾರ ಭತ್ಯೆಯಾಗಿ ನೀಡಬೇಕಾಗುತ್ತದೆ. ಸರ್ಕಾರಿ ನೌಕರನು ಅಮಾನತ್ತಿನಲ್ಲಿರುವಾಗ ನಿಯಮ 100ರಂತೆ ಆತನನ್ನು ವಜಾಗೊಳಿಸುವ ಮೊದಲು ಎಲ್ಲಾ ಹಕ್ಕುಗಳನ್ನು ಹೊಂದಿರುತ್ತಾನೆ. ಆದ್ದರಿಂದ ಜಾಮೀನಿನ ಮೇಲೆ ಬಿಡುಗಡೆಗೂ ಮೊದಲು ಸೆರೆಮನೆ ವಾಸದಲ್ಲಿದ್ದ ಅವಧಿಗೆ ಜೀವನಾಧಾರ ಭತ್ಯೆ ನೀಡಬೇಕಾಗುತ್ತದೆ.
***
10-10-16.
ಸಿನಿಮಾ ನಿರ್ದೇಶನ ಮಾಡಬಹುದೇ?
ನಾನೊಬ್ಬ ಕೆಇಬಿ ನೌಕರ. ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಸ್ವಂತ ರಜೆಗಳಲ್ಲಿ ಚಲನಚಿತ್ರದಲ್ಲಿ ನಟಿಸಬಹುದೇ? ಹಾಗೂ ಸಿನಿಮಾ ನಿರ್ದೇಶನ ಮಾಡಬಹುದೇ?
| ರಾಮಪ್ಪ ಎನ್ ರಾಥೋಡ ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರಂತೆ ಯಾರೇ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವ ಮಂಜೂರಾತಿ ಪಡೆಯದ ಹೊರತು ಪ್ರತ್ಯಕ್ಷವಾಗಿ, ಪರೋಕ್ಷವಾಗಿಯಾಗಲೀ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ತೊಡಗುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ ದಿನಾಂಕ 23.1.2001ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 17, ಸೇನಿಸಿ 2001ರಲ್ಲಿ ಸರ್ಕಾರಿ ನೌಕರರು ನಟಿಸುವುದು ಒಳಗೊಂಡಂತೆ ಚಲನಚಿತ್ರಕ್ಕೆ ಹಾಗೂ ದೂರದರ್ಶನ ಧಾರವಾಹಿಗಳಲ್ಲಿ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಪೂರ್ವಾನುಮತಿ ನೀಡಲು ಸೂಚನೆ ನೀಡಲಾಗಿದೆ. ಅಲ್ಲದೆ 2004ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ನೌಕರರು ಯಾವುದೇ ಚಲನಚಿತ್ರದಲ್ಲಾಗಲಿ, ಧಾರವಾಹಿಯಲ್ಲಾಗಲಿ ನಟಿಸುವುದನ್ನು ನಿಷೇಧಿಸಲಾಗಿದೆ. ಹೀಗಿರುವಲ್ಲಿ ನಟನೆ, ನಿರ್ದೇಶನ ನಿಯಮಬಾಹಿರವಾಗುತ್ತದೆ. ಇದು ಮುಂದಿನ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ.
***
9-10-16.
ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ವಸತಿ ನಿಲಯದ ಮಹಿಳಾ ವಾರ್ಡನ್ ಆಗಿ ಹುದ್ದೆಗೆ 2002ರಲ್ಲಿ ನೇರ ನೇಮಕಾತಿ ಹೊಂದಿರುತ್ತೇನೆ. ಈಗ ಸಮಸ್ಯೆಯೇನೆಂದರೆ ನಾನು ಅವಿವಾಹಿತಳಾಗಿದ್ದು ಈಗಾಗಲೆ ಮದುವೆಯಾಗಿ ಜೀವಂತ ಪತ್ನಿ ಹೊಂದಿರುವ ಪುರುಷನೊಂದಿಗೆ ಎರಡನೇ ಹೆಂಡತಿಯಾಗಿ ಮದುವೆಯಾಗಬಹುದೆ. ಇದಕ್ಕೆ ಸರ್ಕಾರದ ಅನುಮತಿ ಬೇಕೆ?
| ಪ್ರಿಯಕುಮಾರಿ ಗಂಗಾವತಿ.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 28(2)ರ ಮೇರೆಗೆ ಯಾರೇ ಮಹಿಳಾ ಸರ್ಕಾರಿ ನೌಕರರು ಮೊದಲು ಸರ್ಕಾರದ ಅನುಮತಿ ಪಡೆಯದೆ ಜೀವಂತ ಪತ್ನಿಯನ್ನು ಹೊಂದಿರುವ ವ್ಯಕ್ತಿಯನ್ನು ವಿವಾಹವಾಗತಕ್ಕದ್ದಲ್ಲ ಎಂದು ಸೂಚಿಸಿದೆ. ಹೀಗಿರುವಲ್ಲಿ ನೀವು ಈಗಾಗಲೇ ಪತ್ನಿಯನ್ನು ಹೊಂದಿರುವ ಪುರುಷನನ್ನು ವಿವಾಹವಾಗಲು ಮೊದಲ ಪತ್ನಿಯ ಅನುಮತಿಯೊಂದಿಗೆ ಸರ್ಕಾರದ ಪೂರ್ವಾನುಮತಿಯನ್ನು ಸಹ ಪಡೆಯಬೇಕಾಗುತ್ತದೆ. ***
7-10-16.
ನಾನು ರಾಜ್ಯ ಸರ್ಕಾರಿ ನೌಕರಿಯಲ್ಲಿದ್ದು, ಎರಡು ಹೆರಿಗೆ ರಜೆ ಪಡೆದು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡು ಪಿ.ಪಿ.ಯನ್ನು ಸಹ ಪಡೆಯುತ್ತಿದ್ದೇನೆ. ಆದರೆ ನನ್ನ ಮೊದಲ ಮಗು ತೀರಿಕೊಂಡಿದ್ದರಿಂದ ಈಗ ಇನ್ನೊಂದು ಮಗುವನ್ನು ಪಡೆಯಲು ಇಚ್ಛಿಸಿದ್ದೇನೆ. ಐ.ವಿ.ಎಫ್. ಮೂಲಕ ಗರ್ಭಿಣಿಯಾಗಿದ್ದೇನೆ. ನನಗೆ ಹೆರಿಗೆ ರಜೆ ಅವಶ್ಯಕತೆ ಇದ್ದು, ರಜೆ ಪಡೆಯಲು ಏನು ಮಾಡಬೇಕು? ನಾನು ಪಿ.ಪಿ.ಯನ್ನು ರದ್ದುಪಡಿಸಬೇಕೆ? ಕ್ಯಾನ್ಸಲ್ ಮಾಡಿಸಲು ಅನುಸರಿಸುವ ಕ್ರಮ ತಿಳಿಸಿರಿ. ನಾನು ಪುನಃ ಪಿ.ಪಿ. ಪಡೆಯಬಹುದೆ?.
| ಡಿ.ಆರ್. ಸುಭದ್ರಮ್ಮ ಭದ್ರಾವತಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯಾ ಮಹಿಳಾ ಸರ್ಕಾರಿ ನೌಕರರು ಎರಡು ಜೀವಂತ ಮಗುವಿಗೆ 180 ದಿನಗಳ ಹೆರಿಗೆ ರಜೆ ಪಡೆಯಲು ಅವಕಾಶವಿದೆ. ನಿಮ್ಮ ಮೊದಲನೇ ಮಗು ಅಕಾಲಿಕ ಮರಣ ಹೊಂದಿರುವುದರಿಂದ ನೀವು ಐ.ವಿ.ಎಫ್. ಮೂಲಕ ಗರ್ಭಿಣಿಯಾಗಿರುವುದನ್ನು ತಿಳಿಸಿ ನಿಮ್ಮ ಪಿ.ಪಿ.ಯನ್ನು ರದ್ದುಗೊಳಿಸಲು ರಜೆ ಮಂಜೂರಾತಿ ಪ್ರಾಧಿಕಾರಕ್ಕೆ ರಜೆ ಮಂಜೂರಾತಿಯನ್ನು ಸಲ್ಲಿಸಬಹುದು. ತದನಂತರ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ಹೆರಿಗೆ ರಜೆಯನ್ನು ಪಡೆಯಬಹುದು ಹಾಗೂ 1985ರ ಸರ್ಕಾರಿ ಆದೇಶದಂತೆ ನೀವು ಮತ್ತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ವೈಯಕ್ತಿಕ ವೇತನವನ್ನು ಪಡೆಯಬಹುದು.
***
6-10-16.
ಹುದ್ದೆಗೆ ಯಾವ್ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು?
ನಾನು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ನನಗೀಗ 35 ವರ್ಷ. ಈಗಾಗಲೇ 10 ವರ್ಷ ಸೇವೆ ಸಲ್ಲಿಸಿದ್ದು ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದೇನೆ. ನನಗೆ ವಯೋಮಿತಿಯಲ್ಲಿ ಎಷ್ಟು ವರ್ಷಗಳ ಕಾಲ ಸಡಿಲಿಕೆ ದೊರೆಯುತ್ತದೆ? ಹುದ್ದೆಗೆ ಯಾವ್ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು?
| ರೇವಯ್ಯ ಒಡೆಯ ವಿಜಯಪುರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ತನ್ನ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿ ನೀಡಿದೆ. ಈ ಅಧಿಸೂಚನೆಯಲ್ಲೇ ಈಗಾಗಲೇ ಸರ್ಕಾರಿ ನೌಕರರಿಗೆ 10 ವರ್ಷಗಳ ಕಾಲ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿಗೆ ಭರ್ತಿ) ನಿಯಮಗಳು 1977ರ ನಿಯಮ 6 (3) (ಬಿ)ರಂತೆ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ಹುದ್ದೆಯನ್ನು ಹೊಂದಿರುವ ಅಭ್ಯರ್ಥಿಯು ಅವನು ಸಲ್ಲಿಸಿದ ಸೇವಾವಧಿಯಷ್ಟು ಅಥವಾ ಗರಿಷ್ಠ ಹತ್ತು ವರ್ಷಗಳವರೆಗೆ ಸಡಿಲಿಕೆ ನೀಡಲಾಗುತ್ತದೆ. ನೀವು ಈ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸುವ ಪಠ್ಯಕ್ರಮಕ್ಕನುಸಾರವಾಗಿ ರಚಿತವಾಗಿರುವ ಲ.ರಾಘವೇಂದ್ರ ಅವರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್-1 ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಪುಸ್ತಕವನ್ನು ಅಧ್ಯಯನ ಮಾಡಬಹುದು. ಇದರೊಂದಿಗೆ ಇವರೇ ರಚಿಸಿದ ಸಾಮಾನ್ಯ ಜ್ಞಾನ, ಪ್ರಶ್ನೆಕೋಶ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರಶ್ನೆಕೋಶ ಪುಸ್ತಕಗಳನ್ನು ಸಹ ಅಧ್ಯಯನ ಮಾಡಬಹುದು (ಹೆಚ್ಚಿನ ವಿವರಗಳಿಗೆ ಲ.ರಾಘವೇಂದ್ರ ಅವರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್-1 ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಪುಸ್ತಕವನ್ನು ನೋಡಬಹುದು, ಪ್ರತಿಗಳಿಗಾಗಿ ಮೊ: 9481244434 ಸಂರ್ಪಸಬಹುದು)
***
5-10-16.
ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿ ವೃಂದದ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ನನಗೆ 7 ವರ್ಷದ ಮಗನಿದ್ದಾನೆ. ನಮಗೆ ಒಬ್ಬನೇ ಮಗ ಸಾಕೆನಿಸಿದೆ. ನನ್ನ ಹೆಂಡತಿಗೆ ಬಿ.ಪಿ ಇದೆ ಎರಡು ಬಾರಿ ಸಿಜೇರಿಯನ್ ಆಗಿದೆ. ನಾನು ಹಾರ್ಟ್ ಪೇಷಂಟ್ ಹೀಗಾಗಿ ಇಬ್ಬರಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಷ್ಟವಿಲ್ಲ. ನನಗೆ 37 ವರ್ಷ ವಯಸ್ಸು, ಸಂತಾನರಹಣ ಚಿಕಿತ್ಸೆಗೆ ಸಂಬಂಧಿಸಿದ ವಿಶೇಷ ಭತ್ಯೆ ಪಡೆಯಬಹುದೆ?
| ಶರಣ ಪ್ರಕಾಶ್ ಬೀಳಗಿ
ದಿನಾಂಕ: 01.10.1985ರ ಸರ್ಕಾರಿ ಆದೇಶಗಳಂತೆ ಎಫ್.ಡಿ.27 ಎಸ್.ಆರ್.ಎಸ್.85ರಂತೆ ಪುರುಷ ನೌಕರನು 50 ವರ್ಷದೊಳಗಿದ್ದು ಅವರು 2 ಜೀವಂತ ಮಕ್ಕಳನ್ನು ಹೊಂದಿದ್ದರೆ ಅಂತಹವನ ಶಸ್ತ್ರ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ನಗರಪಾಲಿಕೆ ಆಸ್ಪತ್ರೆಯಿಂದ ಮಾಡಿಸಿಕೊಂಡಿರಬೇಕು. ಅಂತಹ ನೌಕರರಿಗೆ ಈ ಕುಟುಂಬ ಕಲ್ಯಾಣ ಯೋಜನೆ ಅನುಸರಣೆಗೆ ಅವನು ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಪಡೆಯುತ್ತಿದ್ದ ವೇತನ ಶ್ರೇಣಿಯ ವೇತನ ಬಡ್ತಿಯನ್ನು ವಿಶೇಷ ಬಡ್ತಿಯಾಗಿ ನೀಡಲಾಗುವುದು. ಆದರೆ ನೀವು ಈ ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳದೆ ಇರುವುದರಿಂದ ಈ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ.
***
4-10-16.
ವಾಗ್ದಂಡನೆಗೆ ನೌಕರರಿಗೆ ಯಾವುದೇ ಆರ್ಥಿಕ ನಷ್ಟವುಂಟಾಗುವುದಿಲ್ಲ…
ಅಧಿಕಾರಿ / ನೌಕರರು ಬಡ್ತಿ ಹೊಂದುವ ಸಂದರ್ಭದಲ್ಲಿ ಶಿಸ್ತು ಪ್ರಾಧಿಕಾರಕ್ಕೆ ಒಳಪಟ್ಟಿದ್ದಲ್ಲಿ ಅಂತಹ ಅಧಿಕಾರಿ / ನೌಕರರ ಬಡ್ತಿಯನ್ನು ಮುಂದೂಡಲಾಗುತ್ತಿದ್ದು, ನಂತರ ದಿನಗಳಲ್ಲಿ ಶಿಸ್ತು ಪ್ರಾಧಿಕಾರದ ಆದೇಶದನ್ವಯ ಪ್ರಕರಣವು ವಾಗ್ದಂಡನೆ ರೂಪದಲ್ಲಿ ಮುಕ್ತಾಯಗೊಂಡಿದ್ದರೆ ಅಂತಹವರನ್ನು ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ37, ಸೇಇವಿ 2009, ದಿನಾಂಕ: 06.04.2010ರ ಪ್ರಕಾರ ವಾಗ್ದಂಡನೆಯು ವಿಧಿಸಿದ ದಿನಾಂಕದಂದೇ ಅಂತ್ಯಗೊಳ್ಳುತ್ತಿದ್ದು, ನಂತರದಲ್ಲಿ ನೌಕರನ ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದೆಂದು ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ ನಿಯಮ 8ರಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ, ಪ್ರಶ್ನೆ ಏನೆಂದರೆ ಅಧಿಕಾರಿ/ನೌಕರರು ಪದೋನ್ನತಿಗೆ ಬಡ್ತಿ ಹೊಂದಿದ ನಂತರ ಅವರ ಜೇಷ್ಠತೆಯನ್ನು ಎಲ್ಲಿ ನಿಗದಿಪಡಿಸಬೇಕು? ಅಧಿಕಾರಿ/ನೌಕರರು ಮೂಲತಃ ಬಡ್ತಿ ಒರಿಜನಲ್ ಡೇಟ್ ಹಾಗೂ ಆಫ್ ಪ್ರಮೋಷನ್ ಹೊಂದುವ ಸಂದರ್ಭದಲ್ಲಿದ್ದ ಜೇಷ್ಠತೆಯಲ್ಲಿಯೆ ಮುಂದುವರೆಯಬೇಕೆ?
|ಶ್ರೀಧರ್ ಹೆಗಡೆ ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ನಿಯಮ 400ರಂತೆ ಶಿಸ್ತು ಪ್ರಾಧಿಕಾರಿಯು ವಿಧಿಸಿದ ವಾಗ್ದಂಡನೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸುವಂತಿಲ್ಲ. ಆದರೆ, ಈ ವಾಗ್ದಂಡನೆ ವಿಧಿಸಿದ ದಿನಾಂಕದ ನಂತರ ನೌಕರನ ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದು. ವಾಗ್ದಂಡನೆಗೆ ನೌಕರರಿಗೆ ಯಾವುದೇ ಆರ್ಥಿಕ ನಷ್ಟವುಂಟಾಗುವುದಿಲ್ಲ. ಆದರೆ, ಅವನ ಜೇಷ್ಠತೆಯನ್ನು ಅವನ ಕಿರಿಯ ನೌಕರನು ಈ ಪದೋನ್ನತಿ ತಡೆಹಿಡಿದ ಅವಧಿಯಲ್ಲಿ ಮುಂಬಡ್ತಿ ಹೊಂದಿದ್ದರೆ ಅವನ ನಂತರ ನಿಗದಿಪಡಿಸಲಾಗುತ್ತದೆ. ಮೂಲತಃ ಪದೋನ್ನತಿ ಹೊಂದಿದ ಸಂದರ್ಭದಲ್ಲಿನ ಜೇಷ್ಠತೆಯು ಮುಂದುವರೆಯುತ್ತದೆ.
***
3-10-16.
ರಜೆಯನ್ನು ಪಡೆಯಲು ಅರ್ಹನಿರುತ್ತೇನೆ?
ನಾನು ಕಂದಾಯ ಇಲಾಖೆಯಲ್ಲಿ ಅಕ್ಟೋಬರ್ 2014ರಿಂದ ಸೇವೆ ಸಲ್ಲಿಸುತ್ತಿದ್ದು, ಪೊ›ಬೇಷನರಿ ಅವಧಿ ಇನ್ನೂ ಪೂರ್ಣಗೊಂಡಿರುವುದಿಲ್ಲ. ಅನಿವಾರ್ಯ ಕಾರಣಗಳಿಂದ 11 ದಿನಗಳ ಕಾಲ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತೇನೆ. ಇದರಿಂದ ನನ್ನ ಪೊ›ಬೇಷನರಿ ಪೂರ್ಣಗೊಳ್ಳುವಲ್ಲಿ ಯಾವ ರೀತಿ ತೊಂದರೆಯಾಗುತ್ತದೆ? ಪಿ.ಎಸ್.ಐ. ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ತಯಾರಿ ನಡೆಸಲು ಯಾವ ರೀತಿ ದೀರ್ಘ ರಜೆಯನ್ನು ಪಡೆಯಲು ಅರ್ಹನಿರುತ್ತೇನೆ?
✍ ಪ್ರವೀಣಕುಮಾರ ಗದಗ
ಕರ್ನಾಟಕ ಸರ್ಕಾರಿ ಸೇವಾ (ಪೊ›ಬೇಷನ್) ನಿಯಮಗಳು 1977ರ ನಿಯಮ 4ರ ರೀತ್ಯಾ ನೀವು 11 ದಿನಗಳ ಗೈರು ಹಾಜರಿಯನ್ನು ವೇತನ ರಹಿತ ರಜೆಯೆಂದು ಪರಿಗಣಿಸಲ್ಪಟ್ಟಿದ್ದಲ್ಲಿ ಪೊ›ಬೇಷನ್ ಅವಧಿ ಘೊಷಣೆಯನ್ನು ಮುಂದೂಡಲಾಗುವುದು. ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 117ರಂತೆ ನಿಮ್ಮ ಖಾ. ತೆಯಲ್ಲಿ ಯಾವುದೇ ರಜೆಯಿಲ್ಲದಿದ್ದರೆ ಅಸಾಧಾರಣ ರಜೆಯನ್ನು ಮಂಜೂರು ಮಾಡಿಸಿಕೊಳ್ಳಬಹುದು.
***
1-10-16.
ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಬೆರಳಚ್ಚುಗಾರನಾಗಿ (ಬಿಡುವು ರಹಿತ) ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ಖಾತೆಯಲ್ಲಿ ಡಿಸೆಂಬರ್ 2015ಕ್ಕೆ 300 ಗಳಿಕೆ ರಜೆಗಳಿದ್ದವು. ದಿನಾಂಕ: 01.01.2016 ರಂದು ಮುಂಗಡವಾಗಿ 15 ರಜೆಗಳನ್ನು ಲೆಕ್ಕಕ್ಕೆ ಜಮೆ ಮಾಡಬೇಕಿದೆ. ದ್ವಿತೀಯ ದರ್ಜೆ ಬೆರಳಚ್ಚುಗಾರರ ಹುದ್ದೆಯಿಂದ ಹಿರಿಯ ದರ್ಜೆ ಬೆರಳಚ್ಚುಗಾರರಾಗಿ ಸ್ಥಾನಪನ್ನ ಬಡ್ತಿ ಪಡೆದಿರುವುದರಿಂದ ದಿನಾಂಕ: 01.01.2016ರಂದು ಅಪರಾಹ್ನ ಬಿಡುಗಡೆ ಹೊಂದಿ ದಿನಾಂಕ: 02.01.2016ರ ಪೂರ್ವಾಹ್ನ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾದ ಸ್ಥಳದಲ್ಲಿ ಬಡ್ತಿ ಪಡೆದ ಹುದ್ದೆಗೆ ವರದಿ ಮಾಡಿಕೊಂಡಿರುತ್ತೇನೆ. ಇಲ್ಲಿ ಸೇರಿಕೆ ಕಾಲವನ್ನು ಉಪಯೋಗಿಸಿಕೊಂಡಿರುವುದಿಲ್ಲ. 2012ರ ಹೊಸ ಆದೇಶದ ಪ್ರಕಾರ ಸರ್ಕಾರ ಗಳಿಕೆ ರಜೆಯ ಗರಿಷ್ಠ ಮಿತಿಯನ್ನು 240 ರಿಂದ 300ಕ್ಕೆ ಹೆಚ್ಚಿಸಿರುವುದು ಸರಿಯಷ್ಟೆ. ಆದರೆ, ಗರಿಷ್ಟ ಮಿತಿ 300 ತಲುಪಿದ ನೌಕರರ ಗಳಿಕೆ ರಜೆಗಳನ್ನು ಮುಂದಿನ ಅವಧಿಗೆ ಜಮೆ ಮಾಡುವಾಗ +15 ಇಡಬೇಕೆ ಅಥವಾ ಬಿಡಬೇಕೆ, ಮತ್ತು ಗರಿಷ್ಟ ಮಿತಿ 240 ಇದ್ದಾಗ +15 ಇಡಲು ಪ್ರತ್ಯೇಕವಾಗಿ ಸರ್ಕಾರದಿಂದ ಆದೇಶವಾಗಿತ್ತು. ಆದರೆ ಹೊಸ ಆದೇಶದಲ್ಲಿ ಈ ಕುರಿತು ಉಲ್ಲೇಖವಿಲ್ಲ ಎಂಬುದು ಹಲವು ನೌಕರರ/ಅಧಿಕಾರಿಗಳಲ್ಲಿ ಗೊಂದಲಮಯವಾಗಿದೆ. ಆದ್ದರಿಂದ, ದಯಮಾಡಿ 2012ರ ಹೊಸ ನಿಯಮದನ್ವಯ ಮೇಲ್ಕಂಡ ರಜೆಗಳನ್ನು ಲೆಕ್ಕಾಚಾರವನ್ನು ತಿಳಿಸಿಕೊಡಬೇಕಾಗಿ ವಿನಂತಿ.
|ಹನುಮಂತಪ್ಪ.ಡಿ ಹೊನ್ನಾಳಿ
ಕರ್ನಾಟಕ ಸರ್ಕಾರಿ ಸೇವಾ ನಿಯಮ 112 (3)ರ ಉಪಬಂಧದಡಿಯಲ್ಲಿ ಡಿಸೆಂಬರ್ ಅಥವಾ ಜೂನ್ ತಿಂಗಳ ಕೊನೆಯ ದಿನಾಂಕದಂದು ಸರ್ಕಾರಿ ನೌಕರನ ಖಾತೆಯಲ್ಲಿರುವ ಗಳಿಕೆ ರಜೆಯು 300 ದಿವಸಗಳು ಅಥವಾ ಅದಕ್ಕಿಂತಲೂ ಹೆಚ್ಚು ಇದ್ದರೆ ನಿಯಮ 112 (2)ರ ರೀತ್ಯಾ ಜಮಾ ಮಾಡುವ ಹದಿನೈದು ದಿನಗಳ ಗಳಿಕೆ ರಜೆಯನ್ನು ಅವನ ಖಾತೆಗೆ ಜಮಾ ಮಾಡುವುದರ ಬದಲು 15 ದಿನ ಪ್ರತ್ಯೇಕವಾಗಿರತಕ್ಕದ್ದು ಎಂದು ಸೂಚಿಸಲಾಗಿದೆ. ಈ ನಿಯಮಾವಳಿಯ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಆಯಾಯ ಅರ್ಧ ವರ್ಷದಲ್ಲಿ 300 ದಿನಗಳಿಗಿಂತ ಹೆಚ್ಚಾಗುವ ಗಳಿಕೆ ರಜೆಯನ್ನು ನಗದೀಕರಣ ಅಥವಾ ಬಳಸಿಕೊಳ್ಳದಿದ್ದಲ್ಲಿ ಅದು ವ್ಯಪಗತವಾಗುತ್ತದೆ.
***
25-9-16.
ಎಷ್ಟು ಪಿಂಚಣಿ ದೊರೆಯುತ್ತದೆ ?
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, ಸೇವೆಗೆ ಸೇರಿದ್ದು ದಿನಾಂಕ: 28.12.2005ರಂದು ಈವರೆಗೆ 10 ವರ್ಷಗಳ ಸೇವೆ ಪೂರೈಸಿರುತ್ತೇನೆ. ಈಗ ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಸ್ವಯಂ ನಿವೃತ್ತಿ (ವಿಆರ್ಎಸ್ ) ಹೊಂದ ಬಯಸುತ್ತೇನೆ. ವಿಆರ್ಎಸ್ ಅರ್ಜಿಗಳು ಎಲ್ಲಿ ದೊರೆಯುತ್ತವೆ ಮತ್ತು ವಿಆರ್ಎಸ್ ತೆಗೆದುಕೊಂಡರೆ ತಿಂಗಳಿಗೆ ಎಷ್ಟು ಪಿಂಚಣಿ ದೊರೆಯುತ್ತದೆ. ನನ್ನ ಮೂಲ ವೇತನ ರೂ.16000 ಇರುತ್ತದೆ.
|ಎಸ್.ಎಂ.ವಾಲಿಕಾರ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2) (1) (ಎ) ರಂತೆ 15 ವರ್ಷಗಳಿಗೆ ಕಡಿಮೆಯಿಲ್ಲದ ಸರ್ಕಾರಿ ನೌಕರರು ಸ್ವಯಂ ನಿವೃತ್ತಿ ಹೊಂದಲು ಅವಕಾಶವಿರುತ್ತದೆ. ಆದುದರಿಂದ ನೀವು 10 ವರ್ಷಗಳನ್ನು ಮಾತ್ರ ಪೂರೈಸಿರುವುದರಿಂದ ನಿಮಗೆ ಪ್ರಸ್ತುತ ಅನಾರೋಗ್ಯದ ನಿಮಿತ್ತ ನಿವೃತ್ತಿ ಹೊಂದಲು ಅವಕಾಶವಿರುವುದಿಲ್ಲ. ಆದರೆ, ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 273ರಂತೆ ನೀವು ಸಂಪೂರ್ಣವಾಗಿ ಅಶಕ್ತರಾಗಿದ್ದರೆ ಅಶಕ್ತತಾ ನಿವೃತ್ತಿ ವೇತನ ಪಡೆಯಲು ಅವಕಾಶವಿರುತ್ತದೆ.
***
26-9-16.
ನಾವು ಯಾವ ರೀತಿ ವಿವರಣೆ ನೀಡಬೇಕು?
ಸರ್ಕಾರಿ ನೌಕರರು ವರ್ಷಕ್ಕೆ ಒಂದು ಬಾರಿ ನೌಕರರ ಹೆಸರಲ್ಲಿರುವ ಸ್ಥಿರಾಸ್ತಿ ಹಾಗೂ ಚರಾಸ್ತಿ ಬಗ್ಗೆ ಮಾತ್ರ ವಿವರಣೆ ನೀಡಬೇಕೆ ಅಥವಾ ಪತ್ನಿ, ಮಕ್ಕಳು, ತಂದೆ, ತಾಯಿ ಹೆಸರಿನಲ್ಲಿ ಇರುವ ಆಸ್ತಿಯ ಬಗ್ಗೆಯೂ ವಿವರಣೆ ನೀಡಬೇಕಾ? ಒಟ್ಟು ಕುಟುಂಬದಲ್ಲಿ ಇರುವ ಆಸ್ತಿಗಳ ಬಗ್ಗೆ ನಾವು ಯಾವ ರೀತಿ ವಿವರಣೆ ನೀಡಬೇಕು?
| ನಂಜುಂಡಸ್ವಾಮಿ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 23ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನೂ ಪ್ರತಿ ವರ್ಷ ಮಾರ್ಚ್ 31ಕ್ಕೆ ಅಂತ್ಯವಾಗುವ ಅವಧಿಗೆ ಹಿಂದಿನ 12 ತಿಂಗಳ ಅಂತರದಲ್ಲಿ ತನ್ನ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಸ್ತಿ ಮತ್ತು ಋಣ ವಿವರಗಳ ಪತ್ರಿಕೆಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಿಯಮಾವಳಿಯ ರೀತ್ಯಾ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯರಿರಲಿ ಪಿತ್ರಾರ್ಜಿತವಾಗಿ ಬಂದ ಅಥವಾ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯರು ಒಡೆತನ ಹೊಂದಿರುವ ಅಥವಾ ತನ್ನ ಹೆಸರಿನಲ್ಲಾಗಲೀ ಅಥವಾ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿಲ್ಲಾಗಲೀ ಗುತ್ತಿಗೆ ಅಥವಾ ಅಡಮಾನದ ಮೂಲಕ ಗಳಿಸಿದ ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರಗಳ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ.
***
2-8-16
ನಾನು ಸರ್ಕಾರಿ ಸೇವೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ 20 ವರ್ಷ ಸೇವೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಚೇರಿ ಅಧೀಕ್ಷಕ ಹುದ್ದೆಗೆ ಪದೋನ್ನತಿ ಲಭ್ಯವಾಗಲಿದೆ. ಆದರೆ ನನಗೆ 2014-15ನೇ ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ಹಿಂದಿನ ಅಧಿಕಾರಿಗಳು ನೀಡದೇ ಇರುವುದರಿಂದ ಇಲಾಖಾ ಪದೋನ್ನತಿ ಸಮಿತಿಗೆ ನನಗೆ ಪದೋನ್ನತಿ ನೀಡಲು ಶಿಫಾರಸು ಮಾಡಿಲ್ಲ. ನಾನು ಈ ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ಪಡೆಯುವುದು ಹೇಗೆ? ಇದಕ್ಕೆ ಸೂಕ್ತ ಪರಿಹಾರ ಉಂಟೇ?
ಜಗದೀಶ್ ಚಿತ್ರದುರ್ಗ
ಕರ್ನಾಟಕ ಸರ್ಕಾರಿ ಸೇವಾ (ಕಾರ್ಯನಿರ್ವಾಹಣಾ ವರದಿಗಳು) ನಿಯಮಗಳು 2000ರ ನಿಯಮ 7 ರೀತ್ಯಾ ವರದಿ ಮಾಡುವ ಅಧಿಕಾರಿಯು ನಿಗದಿತ ಅವಧಿಯೊಳಗೆ ಸರ್ಕಾರಿ ನೌಕರನ ಕಾರ್ಯನಿರ್ವಹಣಾ ವರದಿಯನ್ನು ಪರಿಶೀಲನಾ ಪ್ರಾಧಿಕಾರಕ್ಕೆ ಮತ್ತು ಅಂಗೀಕಾರ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ ವಿಶೇಷ ವರದಿಯನ್ನು ಪಡೆಯಬಹುದೆಂದು ಸೂಚಿಸಲಾಗಿದೆ. ಆದುದರಿಂದ ನೀವು ಈ ನಿಯಮಾವಳಿಯಂತೆ ವಿಶೇಷ ವರದಿಯನ್ನು ಪಡೆದು ಇಲಾಖಾ ಪದೋನ್ನತಿ ಸಮಿತಿಗೆ ಕಳುಹಿಸಲು ವಿನಂತಿಸಬಹುದು.
***
3-8-16
ನಾನು ದಿನಾಂಕ: 25.06.2007ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸರ್ಕಾರಿ ಸೇವೆಗೆ ಸೇರಿದ್ದು, 2010ರಲ್ಲಿ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ (ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ) ವರ್ಗಾವಣೆ ಪಡೆದಿರುತ್ತೇನೆ. ನಾನು ನನ್ನ ಪತಿಯೂ ಸರ್ಕಾರಿ ನೌಕರರಾಗಿದ್ದು, ಈಗ ಪತಿ-ಪತ್ನಿ ಪ್ರಕರಣದಲ್ಲಿ ನಾನು ಇನ್ನೊಂದು ಘಟಕಕ್ಕೆ ವರ್ಗಾವಣೆ ಪಡೆಯಲು ಅವಕಾಶ ಇದೆಯೇ?
ಆಶಾರಾಣಿ.ಎ.ಎಸ್ ಹಾಸನ ಜಿಲ್ಲೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2007ರ ಸೆಕ್ಷನ್ 6 (2) (1)ರ ರೀತ್ಯಾ ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಮತ್ತು ಶಿಕ್ಷಕರು ಪ್ರಸ್ತುತ ಇರುವ ಜ್ಯೇಷ್ಠತಾ ಘಟಕದಲ್ಲಿ ಕನಿಷ್ಠ 3 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಲ್ಲಿ ಕೌನ್ಸಿಲಿಂಗ್ ಮೂಲಕ ಪತ್ನಿ ಅಥವಾ ಪತಿಯು ಸೇವೆ ಸಲ್ಲಿಸುತ್ತಿರುವ ಸ್ಥಳಕ್ಕೆ ಅಥವಾ ಹತ್ತಿರದ ಸ್ಥಳಕ್ಕೆ ಸ್ಪಷ್ಟ ಖಾಲಿ ಸ್ಥಳದ ಲಭ್ಯತೆ ಆಧಾರದ ಮೇಲೆ ಸೇವಾ ಅವಧಿಯಲ್ಲಿ ಎರಡು ಬಾರಿಗಿಂತ ಹೆಚ್ಚಿಲ್ಲದೆ ವರ್ಗಾವಣೆ ಮಾಡಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ನೀವು ಮತ್ತೊಮ್ಮೆ ಇನ್ನೊಂದು ಘಟಕಕ್ಕೆ ವರ್ಗಾವಣೆ ಪಡೆಯಬಹುದು.
***
4-8-16
20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುವೆನೆ?
ನಾನು ದಿನಾಂಕ: 12.05.2016ರಂದು ಹಿರಿಯ ಆರೋಗ್ಯ ಸಹಾಯಕರ ಹುದ್ದೆಗೆ ಸ್ಥಾನಪನ್ನ ಪದೋನ್ನತಿಯನ್ನು ಪಡೆದುಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತೇನೆ ಹಾಗೂ ಹಿಂದಿನ ವೇತನದಲ್ಲಿಯೇ ಅಕ್ಟೋಬರ್-2016ರವರೆಗೆ ಮುಂದುವರೆಯುವುದಾಗಿ ಘೊಷಣೆ ಪತ್ರವನ್ನು ಬರೆದುಕೊಟ್ಟಿರುತ್ತೇನೆ. ಒಂದು ವೇಳೆ ನನಗೆ ಪದೋನ್ನತಿ ಬಾರದೆ ಇದ್ದಲ್ಲಿ ದಿನಾಂಕ: 20.10.2016ಕ್ಕೆ 20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುತ್ತಿದ್ದೆ. ಈಗ ನಾನು ಸ್ಥಾನಪನ್ನ ಪದೋನ್ನತಿ ಪಡೆದಿರುವುದರಿಂದ 20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುವೆನೆ? ಇದ್ದಲ್ಲಿ ಯಾವ ನಿಯಮದ ಪ್ರಕಾರ ಇರುತ್ತದೆ.
ವೆಂಕಟನರಸಪ್ಪ.ಎಂ.ವಿ ಚಿಕ್ಕಬಳ್ಳಾಪುರ.
ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್.ಡಿ.13.ಎಸ್.ಆರ್.ಪಿ.2002 ರಂತೆ ಮೊದಲ ಹದಿನಾಲ್ಕು ವೇತನ ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ ಅವಧಿಯಲ್ಲಿ ಒಂದು ಪದೋನ್ನತಿ ಪಡೆಯದೆ ಮುಂದುವರೆದಿರುವ ಸರ್ಕಾರಿ ನೌಕರರಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಆಯ್ಕೆಕಾಲಿಕ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಹುದೆಂದು ಸೂಚಿಸಲಾಗಿದೆ. ಆದರೆ, ಇದೇ ಆದೇಶದ ಕಂಡಿಕೆ 6(2)ರ ರೀತ್ಯಾ ಈಗಾಗಲೇ ಒಂದು ಪದೋನ್ನತಿಯನ್ನು ಪಡೆದಿರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಅಂಶದ ಹಿನ್ನೆಲೆಯಲ್ಲಿ ನೀವು ಐದು ತಿಂಗಳಗಿಂತ ಮೊದಲೇ 20 ವರ್ಷವಾಗುವ ಮೊದಲು ಪದೋನ್ನತಿ ಪಡೆದಿರುವುದರಿಂದ ಈ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ.
***
5-8-16.
***
6-8-16
ಆರಂಭದ ದಿನದಿಂದ 180 ದಿನಗಳವರೆಗೆ ಮಂಜೂರು ಮಾಡಬಹುದು.
ನಮ್ಮ ಕಚೇರಿಯಲ್ಲಿ ಎಸ್ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬರಿಗೆ ಮದುವೆಯಾಗಿ ಒಂದು ತಿಂಗಳಿಗೆ ಅವರ ಪತಿ ಮರಣ ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ಈ ಕೆಲಸ ಕೊಡಲಾಗಿದೆ. ಸುಮಾರು 5-6 ವರ್ಷಗಳ ನಂತರ ಇವರು ಮತ್ತೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಇವರು ಗರ್ಭಿಣಿಯಾದರೆ ನಿಯಮಾವಳಿ ರೀತ್ಯಾ ಪ್ರಸೂತಿ ರಜೆ ಮಂಜೂರು ಆಗುವುದಿಲ್ಲ ಎಂದು ಕಚೇರಿಯಲ್ಲಿ ಎಲ್ಲರೂ ಹೇಳುತ್ತಿದ್ದಾರೆ. ಈ ಗೊಂದಲಕ್ಕೆ ಪರಿಹಾರ ತಿಳಿಸಿ.
* ನೇತ್ರಾವತಿ ಗಂಗಾವತಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯಾ ಮಹಿಳಾ ಸರ್ಕಾರಿ ನೌಕರರಿಗೆ ಸಕ್ಷಮ ಅಧಿಕಾರಿಯು ಹೆರಿಗೆ ರಜೆಯನ್ನು ಆರಂಭದ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಬಹುದು. ಈ ರಜೆಯನ್ನು ಎರಡು ಜೀವಂತ ಮಕ್ಕಳಿಗೆ ಮಾತ್ರ ಮಹಿಳಾ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ. ಆದರೆ ಇವರು ಎರಡನೇ ಮದುವೆ ಆಗುವುದಕ್ಕೆ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು ನಿಯಮ 28ರಂತೆ ಸಕ್ಷಮ ಅಧಿಕಾರಿಯ ಅನುಮತಿಯನ್ನು ಪಡೆಯಬೇಕು.
***
7-8-16
ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಬೇಕಾಗುತ್ತದೆ.
1995ರಿಂದ ರಾಜ್ಯ ಸರ್ಕಾರದಲ್ಲಿ ದ್ವಿ.ದ.ಸ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹಿಂದೆ 1991ರಿಂದ ಸ್ಟೈಫಂಡರಿ ಪದವೀಧರನಾಗಿ ಕಾರ್ಯನಿರ್ವಹಿಸಿದ್ದೇನೆ. ನಾನೀಗ 2016ರ ಸೆಪ್ಟಂಬರ್ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ. ನನಗೆ ನಿವೃತ್ತಿ ವೇತನ ಸೌಲಭ್ಯ ನೀಡುವಾಗ ಸ್ಟೈಫಂಡರಿ ಪದವಿ ಸೇವೆ ಪರಿಗಣಿಸಲಾಗುತ್ತದೆಯೇ?
ಐ ಎಲ್.ಬೈರಪ್ಪಾಜಿ, ಮೈಸೂರು.
ದಿನಾಂಕ: 08.01.1998ರ ಸರ್ಕಾರಿ ಆದೇಶ ಸಂಖ್ಯೆ: ಎಸ್.ಡಬ್ಲೂ್ಯ.ಎಸ್.18ಎಲ್ಇಟಿ94 ರಂತೆ ಸರ್ಕಾರವು ಸವೋಚ್ಛ ನ್ಯಾಯಾಲಯವು ದಿನಾಂಕ: 26.08.1992ರ ತೀರ್ಪಿನಂತೆ ಸರ್ಕಾರಿ ನೌಕರರು ದಿನಾಂಕ: 01.05.1991ರಿಂದ ಸ್ಟೈಪಂಡರಿ ಪದವೀಧರರಾಗಿ ಸಲ್ಲಿಸಿದ ಸೇವೆಯನ್ನು ನಿವೃತ್ತಿ ವೇತನದ ಸೌಲಭ್ಯಗಳಿಗಾಗಿ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀವು ದಿನಾಂಕ: 01.05.1991ರಿಂದ ಸಲ್ಲಿಸಿದ ಸ್ಟೈಪಂಡರಿ ಪದವಿಯ ಅರ್ಹತೆಯನ್ನು ನಿಮ್ಮ ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಬೇಕಾಗುತ್ತದೆ.
***
8-8-16.
20 ವರ್ಷದ ಹೆಚ್ಚುವರಿ ವೇತನ ಬಡ್ತಿ ಪಡೆಯಬಹುದೇ?
ದಿನಾಂಕ: 27.08.1998ರಲ್ಲಿ ಸೇವೆಗೆ ಸೇರಿದ್ದು, 18 ವರ್ಷಗಳಾಗಿದೆ. ನಾನು ಕೆಎಸ್ಓಯು ಮೈಸೂರಿನಲ್ಲಿ ಬಿ.ಇಡಿ (ಕನ್ನಡ) ಮಾಡಿದ್ದೇನೆ. ನನ್ನ ಬಿ.ಇಡಿ ವಿವರವನ್ನು ಸೇವಾ ಪುಸ್ತಕದಲ್ಲಿ ನಮೂದಿಸಬೇಕೆಂದಿದ್ದೇನೆ. ಸೇವಾವಧಿ ಪುಸ್ತಕದಲ್ಲಿ ನಮೂದಿಸಿದ ನಂತರ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2, ಬಡ್ತಿ ಬಂದಲ್ಲಿ, ನನಗೆ ಸ್ಥಳದ ಆಯ್ಕೆ ಸರಿಬರಲಿಲ್ಲವೆಂದರೆ ತಿರಸ್ಕರಿಸಬೇಕೆಂದಿದ್ದೇನೆ. ತಿರಸ್ಕರಿಸಿದರೆ 20 ವರ್ಷದ ಹೆಚ್ಚುವರಿ ವೇತನ ಬಡ್ತಿ ಪಡೆಯಬಹುದೇ?
| ರಾಮಕೃಷ್ಣ ಎಸ್. ರಾಮನಗರ
ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 13 ಎಸ್ಆರ್ಪಿ 2002 ರಂತೆ ಮೊದಲ ಹದಿನಾಲ್ಕು ವೇತನ ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ ಅವಧಿಯಲ್ಲಿ ಒಂದು ಪದೋನ್ನತಿ ಪಡೆಯದೆ ಮುಂದುವರೆದಿರುವ ಸರ್ಕಾರಿ ನೌಕರರಿಗೆ ಆ ಹುದ್ದೆಗೆ ನಿಗಧಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಆಯ್ಕೆ ಕಾಲಿಕ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಬಹುದೆಂದು ಸೂಚಿಸಲಾಗಿದೆ. ಆದರೆ, ಇದೇ ಆದೇಶದ ಕಂಡಿಕೆ 6(2)ರ ರೀತ್ಯಾ ಸ್ವ-ಇಚ್ಛೆಯಿಂದ ತಮ್ಮ ಪದೋನ್ನತಿ ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಅಂಶದ ಹಿನ್ನೆಲೆಯಲ್ಲಿ ನೀವು 20 ವರ್ಷವಾಗುವ ಮೊದಲು ಪದೋನ್ನತಿ ತಿರಸ್ಕರಿಸಿದಲ್ಲಿ ಈ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ.
***
9-8-16
ಅವಳಿಗೆ ಕುಟುಂಬ ಪಿಂಚಣಿ ಸಿಗುತ್ತದೆಯೇ?
ಸರ್ಕಾರಿ ಸೇವೆಯಲ್ಲಿದ್ದ ನನ್ನ ಪತಿ ನಿಧನರಾಗಿದ್ದು, ಸುಮಾರು 15 ವರ್ಷಗಳಿಂದ ಕುಟುಂಬ ಪಿಂಚಣಿ ಪಡೆಯುತ್ತಿದ್ದೇನೆ. ನಾಲ್ವರು ಮಕ್ಕಳಿದ್ದು, ಒಬ್ಬಳು(45) ಅವಿವಾಹಿತಳಾಗಿದ್ದು, ಮಾನಸಿಕವಾಗಿ ಸುಸ್ಥಿತಿಯಲ್ಲಿಲ್ಲ. ನನ್ನ ನಂತರ ಅವಳಿಗೆ ಕುಟುಂಬ ಪಿಂಚಣಿ ಸಿಗುತ್ತದೆಯೇ? ಅದಕ್ಕಾಗಿ ಏನು ಮಾಡಬೇಕು?
ಮೀನಾಕ್ಷಮ್ಮ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿ ವೇತನ) ನಿಯಮಗಳು 2002ರ ನಿಯಮ 9 (ಡಿ) ರೀತ್ಯಾ ಕುಟುಂಬ ನಿವೃತ್ತಿ ವೇತನವನ್ನು ಮಾನಸಿಕವಾಗಿ ಅಸ್ವಸ್ಥರಾಗಿರುವ ಅಥವಾ ಮನೋವೈಕಲ್ಯದಿಂದ ಬಳಲುತ್ತಿರುವ ಮಗ ಅಥವಾ ಮಗಳ ಹೆಸರಿಗೆ ನೀಡತಕ್ಕದ್ದು. ಅದನ್ನು ಜೀವಿತ ಅವಧಿಯವರೆಗೆ ಸಂದಾಯ ಮಾಡತಕ್ಕದ್ದೆಂದು ತಿಳಿಸಿದೆ. ಈ ಹಿನ್ನೆಲೆ ನೀವು ನಿಮ್ಮ ಮಗಳ ಮನೋ ವೈಕಲ್ಯತೆಗೆ ನಿಮ್ಹಾನ್ಸ್ನಿಂದ ಪ್ರಮಾಣ ಪತ್ರ ಪಡೆದು ಕುಟುಂಬ ಪಿಂಚಣಿ ಪಡೆಯುತ್ತಿರುವ ಸರ್ಕಾರಿ ಖಜಾನೆಗೆ ಮತ್ತು ಮಹಾಲೇಖಪಾಲಕರಿಗೆ ನಿಮ್ಮ ನಿಧನದ ನಂತರ ಮಗಳಿಗೆ ನೀಡುವಂತೆ ಈಗಲೇ ಮನವಿ ಸಲ್ಲಿಸಿ.
***
10-8-16
ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸುವುದು ಸಾಧ್ಯವಿದೆಯೆ?
ನಾನು ಬಿಎಂಸಿಆರ್ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಗಸ್ಟ್ 2012ರಿಂದ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂಲತಃ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿ. ಅರ್ಜಿ ಸಲ್ಲಿಸುವಾಗ ಮೀಸಲಾತಿಯಲ್ಲಿ ಶುಶ್ರೂಷಕಿ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತೇನೆ. ಆದರೆ ಹೆಚ್ಚು ಅಂಕ ಗಳಿಸಿರುವ ಕಾರಣ ನನ್ನನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಮಾಡಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಜೂನ್ ತಿಂಗಳಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ್ದು ಅದರಲ್ಲಿ ನನ್ನನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸದೆ ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿ, ನನಗಿಂತ ಕಡಿಮೆ ಅಂಕ ಹೊಂದಿರುವ ಪರಿಶಿಷ್ಟ ಜಾತಿಯ ನೌಕರನಿಗೆ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ, ನನ್ನನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸುವುದು ಸಾಧ್ಯವಿದೆಯೆ?
ಐ ಶ್ರೀಮತಿ ಪಾಪತಿ ಪಿ. ಬೆಂಗಳೂರು
ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ ನಿಯಮಗಳು) 1957ರ ನಿಯಮ 4(ಎ)ರಂತೆ ಆಯ್ಕೆ ಮಾಡುವ ನೇಮಕಾತಿ ಪ್ರಾಧಿಕಾರವು ಅಭ್ಯರ್ಥಿಗಳನ್ನು ಯಾವ ಅರ್ಹತಾ ಕ್ರಮದಲ್ಲಿ ವ್ಯವಸ್ಥೆಗೊಳಿಸಿದೆಯೋ, ಆ ಆದೇಶದ ವೃಂದಗಳು ಅಥವಾ ಹುದ್ದೆಯ ವರ್ಗದಿಂದ ಆಯ್ಕೆ ಮಾಡುವ ಮೂಲಕ ಹುದ್ದೆಯ ವರ್ಗಕ್ಕೆ ಬಡ್ತಿ ನೀಡುವಾಗ ಅವರ ಜೇಷ್ಠತೆ ಪರಿಗಣಿಸಬೇಕು ಎಂದು ತಿಳಿಸಿದೆ. ಅಲ್ಲದೆ 1990ರ ಅನುಸೂಚಿತ ಜಾತಿಗಳು, ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ(ನೇಮಕಾತಿಗಳು) ಮುಂತಾದವುಗಳ ಮೀಸಲಾತಿ ಅಧಿನಿಯಮದಂತೆ ಅಭ್ಯರ್ಥಿಯು ಮೀಸಲಾತಿಯಡಿ ಆಯ್ಕೆಯಾಗಿದ್ದರೆ, ಅದೇ ಮೀಸಲಾತಿಯಲ್ಲಿ ಪದೋನ್ನತಿ ಪರಿಗಣಿಸಬೇಕು. ಆದರೆ, ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಯು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದಲ್ಲಿ, ಪದೋನ್ನತಿ ನೀಡುವಾಗ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸಲು ಸೂಚಿಸಿದೆ. ಅಲ್ಲದೆ ಸೇವಾ ಪುಸ್ತಕದಲ್ಲಿ ಸಂಬಂಧಿಸಿದ ಅಂಕಣದಲ್ಲಿ ಪರಿಶಿಷ್ಟ ಜಾತಿ ನಮೂದಿಸಬೇಕು. ಆದ ಕಾರಣ ನಿಮ್ಮ ನೇಮಕಾತಿ ಪ್ರಾಧಿಕಾರಿಯವರು ನಿಮಗಿಂತ ಕಡಿಮೆ ಅಂಕ ಹೊಂದಿರುವ ಪರಿಶಿಷ್ಟ ಜಾತಿಯ ನೌಕರನಿಗೆ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರಿಸಿರುವುದು ಸರಿಯಾದ ಕ್ರಮವಲ್ಲ.
***
11-8-16
ಎನ್ಪಿಎಸ್ ಮಾಡಿಸಲು ಏನು ಮಾಡಬೇಕು?
ನಾನು ಮೊದಲು ಆಸ್ಪತ್ರೆಯಲ್ಲಿ ಗ್ರೂಪ್ ಡಿಯಾಗಿ 16 ತಿಂಗಳು ಕಾರ್ಯನಿರ್ವಹಿಸಿದ್ದು, ದಿನಾಂಕ: 21.07.2015ರಂದು ವೈಯಕ್ತಿಕ ಕಾರಣಗಳಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ನಂತರ ಶಿಕ್ಷಕಿಯಾಗಿ ನೇಮಕವಾಗಿ ದಿನಾಂಕ: 15.03.2016ರಂದು ಕೆಲಸಕ್ಕೆ ಹಾಜರಾಗಿದ್ದೇನೆ. ಹಿಂದೆ ಮಾಡಿಸಿದ್ದ ಎನ್ಪಿಎಸ್ ಕ್ಲೋಸ್ ಮಾಡಲು ಅರ್ಜಿ ಸಲ್ಲಿಸಿದ್ದು, ಇದರಿಂದ ಮತ್ತೊಂದು ಎನ್ಪಿಎಸ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈಗ ನಾನು ಎನ್ಪಿಎಸ್ ಮಾಡಿಸಲು ಏನು ಮಾಡಬೇಕು? ದಯವಿಟ್ಟು ಪರಿಹಾರ ತಿಳಿಸಿ.
ಐ ಸುಮತಿ, ಮೈಸೂರು.
ದಿನಾಂಕ: 29.03.2010ರ ಸರ್ಕಾರಿ ಅದೇಶದಂತೆ ಸಂಖ್ಯೆ: ಎಫ್ಡಿ(ಎಫ್ಪಿಎಲ್) 28 ಪಿಇಎನ್ 2009ರಂತೆ ನೂತನ ಪಿಂಚಣಿ ಯೋಜನೆಗೆ ನೀವು ನೋಂದಣಿ ಮಾಡಿಸಿರುವುದರಿಂದ ಹಾಗೂ ದಿನಾಂಕ: 10.01.2012ರ ಸರ್ಕಾರಿ ಸುತ್ತೋಲೆ ಆ.ಇ.(ವಿಶೇಷ)01 ಪಿಇಎನ್ 2010ರಂತೆ ಟ್ರಾನ್ ನಂ. ಪಡೆದಿರುವುದರಿಂದ ನೀವು ಹಿಂದಿನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡಿರುವುದರಿಂದ ಹೊಸ ಎನ್ಪಿಎಸ್ ಖಾತೆ ಮಾಡಬೇಕು. ಇದಕ್ಕೆ ಕಾರಣ, 9 ತಿಂಗಳ ಕಾಲ ನೀವು ಸರ್ಕಾರಿ ಸೇವೆಯಲ್ಲೇ ಇಲ್ಲದ್ದರಿಂದ ನಿಮ್ಮ ಹಿಂದಿನ ಖಾತೆ ಮುಕ್ತಾಯಗೊಂಡಿದ್ದು, ಅದನ್ನು ವಾಪಸ್ಸು ಪಡೆಯಬೇಕು. ಆದ್ದರಿಂದ ಈ ಆದೇಶಗಳ ಹಿನ್ನೆಲೆ ನೀವು ಹೊಸದಾಗಿ ಎನ್ಪಿಎಸ್ ಲೆಕ್ಕ ತೆರೆಯಬೇಕೆಂದು ಸಕ್ಷಮ ವೇತನ ಬಟವಾಡೆ ಅಧಿಕಾರಿಗಳಿಗೆ ವಿನಂತಿಸಬೇಕು.
***
12-8-16
ನಾನು ಸರ್ಕಾರಿ ನೌಕರನಾಗಿದ್ದು ನನ್ನ ಮೇಲೆ ಆರೋಪ ಹೊರಿಸಿ ಶಿಸ್ತು ಪ್ರಾಧಿಕಾರಿಯವರು ಇಲಾಖಾ ವಿಚಾರಣೆ ನಡೆಸುತ್ತಿದ್ದಾರೆ. ನನ್ನ ಮೇಲಿನ ಆರೋಪಗಳು ಕ್ಷುಲ್ಲಕವಾಗಿದ್ದು, ಈ ಇಲಾಖಾ ವಿಚಾರಣೆಗೆ ಸರ್ಕಾರದ ಕಾರ್ಯದರ್ಶಿ ಅಥವಾ ಸಂಬಂಧಿಸಿದ ಸಚಿವರು ಮಧ್ಯಂತರ ತಡೆಯಾಜ್ಞೆ ನೀಡಬಹುದೆ?
ಐ ವಿರೂಪಾಕ್ಷ ಗೌಡ ಗದಗ
ಸಿಸಿಎ ನಿಯಮಾವಳಿಗಳಲ್ಲಾಗಲೀ ಅಥವಾ ಇತರೆ ಯಾವುದೇ ಕಾನೂನಿನಲ್ಲಾಗಲೀ ಯಾವುದೇ ಕಾರಣಕ್ಕೆ ಪ್ರಗತಿಯಲ್ಲಿರುವ ಶಿಸ್ತು ನಡವಳಿಕೆಗಳನ್ನು ತಡೆಹಿಡಿಯುವ ಅಧಿಕಾರ ಯಾವುದೆ ಆಡಳಿತಾತ್ಮಕ ಪ್ರಾಧಿಕಾರಕ್ಕೆ ಇಲ್ಲ. ಇಲ್ಲಿ ಆಡಳಿತಾತ್ಮಕ ಪ್ರಾಧಿಕಾರವೆಂದರೆ ನ್ಯಾಯಾಲಯವಲ್ಲದ ಪ್ರಾಧಿಕಾರ ಮತ್ತು ಸಿಸಿಎ ನಿಯಮಾವಳಿಗಳ ರೀತಿ ಅಪೀಲು ಮತ್ತು ಪುನರಾವಲೋಕನ ಪ್ರಾಧಿಕಾರಗಳು ಒಳಗೊಳ್ಳುತ್ತಾರೆ. ಕಾನೂನು ಬದ್ಧ ಶಿಸ್ತು ಪ್ರಾಧಿಕಾರಿ ಸಿಸಿಎ ನಿಯಮಗಳಡಿಯಲ್ಲಿ ಕ್ರಮ ಜರುಗಿಸಲು ಸ್ವತಂತ್ರ ಪ್ರಾಧಿಕಾರಿಯಾಗಿರುತ್ತಾರೆ. ಯಾವುದೇ ಆಡಳಿತಾತ್ಮಕ ಶ್ರೇಣಿಯ ಅಧಿಕಾರಿಯ ಹಿಡಿತದಲ್ಲಿ ಅವನು ಬರುವುದಿಲ್ಲ. ತಿಳಿದೋ ಅಥವಾ ತಿಳಿಯದೆಯೋ ಅವನು ತಪ್ಪುಗಳನ್ನು ಮಾಡುತ್ತಿದ್ದರೂ ಸಹ ಅವನ ಮೇಲಾಧಿಕಾರಿಗಳು ಮಧ್ಯೆ ಪ್ರವೇಶಿಸುವಂತಿಲ್ಲ. ಶಿಸ್ತು ಪ್ರಾಧಿಕಾರಿ ಶಿಸ್ತು ನಡವಳಿಗಳಲ್ಲಿ ಅಂತಿಮ ಆದೇಶ ಮಾಡಿದಾಗ ಮಾತ್ರ ಸಿಸಿಎ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿದ ಅಪೀಲು ಪ್ರಾಧಿಕಾರಗಳು ಅಂತಹ ಅಂತಿಮ ಆದೇಶವನ್ನು ಹೊರಡಿಸಬಹುದು. ಅಲ್ಲದೆ ದುರುದ್ದೇಶಪೂರಿತ ಶಿಸ್ತು ನಡವಳಿಗಳೆಂದು ನ್ಯಾಯಾಲಯ ಭಾವಿಸದ ಹೊರತು ನ್ಯಾಯಾಲಯಗಳೂ ಸಹ ಪ್ರಗತಿಯಲ್ಲಿರುವ ಶಿಸ್ತು ಕ್ರಮಗಳಿಗೆ ಮಧ್ಯೆ ಪ್ರವೇಶಿಸುವಂತಿಲ್ಲ. ಹೀಗಾಗಿ ಸರ್ಕಾರದ ಕಾರ್ಯದರ್ಶಿಯಾಗಲೀ ಅಥವಾ ಸಚಿವರಾಗಲೀ ಮಧ್ಯಂತರ ತಡೆಯಾಜ್ಞೆ ನೀಡಲು ಬರುವುದಿಲ್ಲ.
***
13-8-16.
ಯಾವ ದಿನಾಂಕದಂದು ಪದೋನ್ನತಿಗೆ ಅರ್ಹನಾಗುತ್ತೇನೆ?
ನಾನು ಸರ್ಕಾರಿ ನೌಕರನಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2016ರ ಪ್ರಥಮ ಅಧಿವೇಶನದಲ್ಲಿ ಅಕೌಂಟ್ಸ್ ಹೈಯರ್ ಜನರಲ್ ಲಾ ಭಾಗ 1 ಮತ್ತು 2ನ್ನು ತೇರ್ಗಡೆ ಯಾಗಿದ್ದೇನೆ. ನನಗಿಂತ ಕಿರಿಯರು ಈ ಮೊದಲೇ ಈ ಪರೀಕ್ಷೆ ತೇರ್ಗಡೆಯಾಗಿದ್ದು ಅವರನ್ನು ಪದೋನ್ನತಿಗೆ ಅರ್ಹರೆಂದು ಪರಿಗಣಿಸಲಾಗಿದೆ. ಪರೀಕ್ಷೆಯ ಫಲಿತಾಂಶವನ್ನು ಆಯೋಗವು 22.7.2016ರಂದು ಪ್ರಕಟಿಸಿದೆ. ಪರೀಕ್ಷೆಯು 27.4.2016ರಂದು ನಡೆದಿರುತ್ತದೆ. ಈ ಹಿನ್ನೆಲೆ ಯಲ್ಲಿ ನಾನು ಯಾವ ದಿನಾಂಕದಂದು ಪದೋನ್ನತಿಗೆ ಅರ್ಹನಾಗುತ್ತೇನೆ?
| ಮಹೇಶ ಚಂದ್ರ ಚಿಕ್ಕಮಗಳೂರು
1974ರ ಕರ್ನಾಟಕ ಸಿವಿಲ್ ಸೇವಾ (ಕನ್ನಡ ಭಾಷಾ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿ ರೀತ್ಯ ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದಂತೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವುದು ನಿಮ್ಮ ಪರೀಕ್ಷಾರ್ಥ ಅವಧಿ ಮತ್ತು ಪದೋನ್ನತಿಗೆ ಅವಶ್ಯಕ. ದಿನಾಂಕ 13.4.2010ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 01, ಸೆಸೆನಿ 2010ರಲ್ಲಿ ಸರ್ಕಾರಿ ನೌಕರನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪದೋನ್ನತಿಗೆ ಪರಿಗಣಿಸುವಾಗ ಅವನು ಇಲಾಖಾ ಪರೀಕ್ಷೆಯ ದಿನಾಂಕವನ್ನು ಪರಿಗಣಿಸದೇ ಆಯೋಗವು ಫಲಿತಾಂಶ ಪ್ರಕಟಿಸಿದ ದಿನಾಂಕವನ್ನು ಪದೋನ್ನತಿಗೆ ಅರ್ಹತಾದಾಯಕವೆಂದು ಪರಿಗಣಿಸಲು ಸೂಚಿಸಲಾಗಿದೆ. ಆದ ಕಾರಣ ನೀವು ದಿನಾಂಕ 22.7.2016ರಿಂದ ಅರ್ಹರಾಗಿರುತ್ತೀರಿ.
***
14-8-16
ನನ್ನ ಹಿಂದಿನ ವೇತನವೇ ಮುಂದುವರಿಯುತ್ತದೆಯೇ?
ನಾನು ಉಡುಪಿ ಜಿಲ್ಲೆಯಲ್ಲಿ ಗ್ರಾಮಕರಣಿಕನಾಗಿ ದಿನಾಂಕ 31.10.2013ರಂದು ಕರ್ತವ್ಯಕ್ಕೆ ಸೇರಿದ್ದು ಅಲ್ಲಿ ನನ್ನ ಖಾಯಂ ಪೂರ್ಣಾವಧಿ ಪೂರ್ಣಗೊಂಡಿರುತ್ತದೆ. ಅಲ್ಲಿ ಸೇವೆಯಲ್ಲಿರುವಾಗಲೇ ನಾನು ಜಿಲ್ಲಾಧಿಕಾರಿಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ರಾಯಚೂರು ಜಿಲ್ಲೆಗೆ ಗ್ರಾಮಕರಣಿಕನಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದು ದಿನಾಂಕ 14.1.2016ರಂದು ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ನಾನು ಈ ಹಿಂದೆ ಮಾಡಿದ ಸೇವೆಯು ಪರಿಗಣಿತವಾಗುತ್ತದೆಯೇ? ಮತ್ತೆ ಮೊದಲಿನಿಂದ ಪರೀಕ್ಷಾರ್ಥ ಅವಧಿ ಪೂರ್ಣಗೊಳಿಸಬೇಕೇ? ನನ್ನ ಹಿಂದಿನ ವೇತನವೇ ಮುಂದುವರಿಯುತ್ತದೆಯೇ?
ಐ ಸೋಮರಾಯ ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮವಳಿಯ ನಿಯಮ 252 ಬಿ ರಂತೆ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯದಿಂದ ಬಿಡುಗಡೆ ಹೊಂದಿ ರಾಯಚೂರು ಜಿಲ್ಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರೆ ನಿಮ್ಮ ಹಿಂದಿನ ಸೇವೆಯು ಪರಿಗಣಿತವಾಗುತ್ತದೆ. ನೀವು ಬೇರೊಂದು ನೇಮಕಾತಿ ಪ್ರಾಧಿಕಾರಕ್ಕೆ ಅದೇ ಹುದ್ದೆಗೆ ನಿಯುಕ್ತಿ ಗೊಂಡಿರು ವುದರಿಂದ ಮತ್ತೆ ಪರೀಕ್ಷಾರ್ಥ ಅವಧಿಯನ್ನು 1977ರ ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಾವಳಿ ರೀತ್ಯ ಪೂರ್ಣಗೊಳಿಸಬೇಕಾಗಿರುತ್ತದೆ. ನೀವೇ ತಿಳಿಸಿದಂತೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ರಂತೆ ನಿಮಗೆ ವೇತನ ರಕ್ಷಣೆ ದೊರಕಲಿದ್ದು ನೀವು ಉಡುಪಿಯಲ್ಲಿ ಪಡೆದ ಅಂತಿಮ ವೇತನವೇ ಪ್ರಸ್ತುತ ಹೊಸ ಹುದ್ದೆಗೂ ಅನ್ವಯವಾಗುತ್ತದೆ.
***
15-8-16.
ಖಾಯಂ ಪೂರ್ವ ಸೇವೆಗಾಗಿ ಸೇವೆ ಸಲ್ಲಿಸಬೇಕೆ?
ನಾನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ 2014ರಲ್ಲಿ ನೇಮಕಹೊಂದಿ ದಿನಾಂಕ 7.2.2014ರಂದು ಕರ್ತವ್ಯಕ್ಕೆ ಹಾಜರಾಗಿ ನನ್ನ ಪರೀಕ್ಷಾರ್ಥ ಅವಧಿಯು 8.2.2016ಕ್ಕೆ ಮುಕ್ತಾಯವಾಗಿದೆ. ಈಗ ನಾನು ಇದೇ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಆಯ್ಕೆಗೊಂಡಿದ್ದೇನೆ. ಈಗ ಪುನಃ ನಾನು ಖಾಯಂ ಪೂರ್ವ ಸೇವೆಗಾಗಿ ಸೇವೆ ಸಲ್ಲಿಸಬೇಕೆ? ಅಥವಾ ಡಿ ದರ್ಜೆ ನೌಕರನಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಲಾಗುತ್ತದೆಯೇ.
ಐರಾಜು ಬೆಣ್ಣೆ ಉಡುಪಿ ಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್ ) ನಿಯಮಗಳು 1977ರಡಿಯಲ್ಲಿ ಸರ್ಕಾರಿ ಸೇವೆಯ ಪ್ರತಿಯೊಂದು ಗುಂಪಿನ ಮತ್ತು ವೃಂದಕ್ಕೆ 2 ವರ್ಷಗಳ ಕಾಲ ಪ್ರೊಬೇಷನ್ ಅವಧಿ ನಿಗದಿಪಡಿಸಲಾಗಿದೆ. ನೀವು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿ ಸಿ ಗುಂಪಿನ ಕಿರಿಯ ಆರೋಗ್ಯ ಸಹಾಯಕರ ಹುದ್ದೆಗೆ ಆಯ್ಕೆಯಾಗಿರುವುದು ಸರಿ. ಆದರೆ ನೀವು ಡಿ ದರ್ಜೆ ವೃಂದವೇ ಬೇರೆ, ಕಿರಿಯ ಆರೋಗ್ಯ ಸಹಾಯಕರ ವೃಂದವೇ ಬೇರೆ ಬೇರೆಯಾಗಿರುವುದರಿಂದ ನೀವು ಮತ್ತೆ 2 ವರ್ಷಗಳ ಕಾಲ ಹೊಸ ಹುದ್ದೆಯಲ್ಲಿ ಪೊಬೇಷನ್ ಅವಧಿಯನ್ನು ಪೂರೈಸಬೇಕಾಗುತ್ತದೆ.
***
16-8-16
ಸರ್ಕಾರಿ ನೌಕರನೊಬ್ಬ ಜಿಲ್ಲಾಧಿಕಾರಿಗಳಿಂದ ಸ್ಪೋಟಕ ವಸ್ತುಗಳ ಪರವಾನಗಿ ಪತ್ರವನ್ನು ಪಡೆದು ಪಟಾಕಿ ಮಾರಾಟ ಮಾಡಬಹುದೇ?
| ಕುಮಾರಸ್ವಾಮಿ ಸಾಗರ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರಲ್ಲಿ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ. ಯಾವುದೇ ಇತರೇ ಉದ್ಯೋಗವನ್ನು ಕೈಗೊಳ್ಳತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಈ ನಿಯಮಾವಳಿಯ ಹಿನ್ನೆಲೆಯಲ್ಲಿ ನೀವು ಕೋರಿದಂತೆ ಸರ್ಕಾರಿ ನೌಕರನು ಪಟಾಕಿ ಮಾರಾಟ ಮಾಡುವುದು ನಿಯಮಾವಳಿಗೆ ವ್ಯತಿರಿಕ್ತವಾಗಿದ್ದು ಶಿಸ್ತುಕ್ರಮಕ್ಕೆ ಒಳಗಾಗುತ್ತಾನೆ.
***
17-8-16.
ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗಕ್ಕೆ ನಿರ್ಬಂಧ ಇರುವುದಿಲ್ಲ.
ನಾನು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದು 5 ವರ್ಷ ಪೂರ್ಣಗೊಂಡಿದೆ. ನಾನು ಉನ್ನತ ವ್ಯಾಸಂಗ ಮಾಡಲು ಬಯಸಿದ್ದು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಸಂಬಳ ಸಹಿತ ಉನ್ನತ ವ್ಯಾಸಂಗ ಮಾಡಲು ಅವಕಾಶವಿದೆಯೇ? ಇದ್ದರೆ ಮುಂದೆ ನಾನು ಯಾವ ಕ್ರಮ ಅನುಸರಿಸಬೇಕು ?
ಐ ಅಶ್ವಂತ ಬಿ.ಎಸ್ ಮೈಸೂರು
ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4, ಎಸ್ಆರ್ಸಿ 73, ದಿನಾಂಕ 5.2.1973ರಲ್ಲಿ ಸರ್ಕಾರಿ ನೌಕರನು ಬಾಹ್ಯ ಅಥವಾ ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ನೀವು ಬಯಸಿದಂತೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ 2ಎರಂತೆ ಸಂಬಳ ಸಹಿತವಾಗಿ ಉನ್ನತ ವ್ಯಾಸಂಗ ಮಾಡಲು ಅವಕಾಶವಿರುವುದಿಲ್ಲ. ಇದಕ್ಕೆ ಕಾರಣ ನಿಮ್ಮ ಹುದ್ದೆಗೆ ಅಂತಹ ಉನ್ನತ ವ್ಯಾಸಂಗ ಅವಶ್ಯಕವಾಗಿರುವುದಿಲ್ಲ. ನೀವು ಬಾಹ್ಯ ಅಭ್ಯರ್ಥಿಯಾಗಿ ಅಥವಾ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿ ನಿಮ್ಮ ಮೇಲಾಧಿಕಾರಿಗೆ ಮಾಹಿತಿ ನೀಡುವುದು.
***
18-8-16.
ಅಂಗವೈಕಲ್ಯದ ಬಗ್ಗೆ ವಿಶೇಷ ಭತ್ಯೆ ಪಡೆಯುತ್ತಿಲ್ಲ, ಇದಕ್ಕೆ ನಾನು ಅರ್ಹನೇ?
ನಾನು ವಕ್ಪ್ ಮಂಡಳಿಯಲ್ಲಿ ಅಂಗವಿಕಲರ ಮೀಸಲಾತಿ ಅಡಿಯಲ್ಲಿ ದ್ವಿತೀಯದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ನಾನು ವೇತನ ಭತ್ಯೆ ಪಡೆಯುತ್ತಿದ್ದೇನೆ. ಆದರೆ ನಾನು ಅಂಗವೈಕಲ್ಯದ ಬಗ್ಗೆ ಯಾವುದೇ ವಿಶೇಷ ಭತ್ಯೆ ಪಡೆಯುತ್ತಿಲ್ಲ ಇದಕ್ಕೆ ನಾನು ಅರ್ಹನೇ?
ಐಅಬ್ದುಲ್ ಖಾದಿರ್ ಹಾನಗಲ್
ದಿನಾಂಕ 13.2.2013ರಿಂದ ಅಂಗವಿಕಲ ಸರ್ಕಾರಿ ನೌಕರನಿಗೆ ಅವನ ಮೂಲ ವೇತನಕ್ಕೆ ಅನುಗುಣವಾಗಿ ಶೇ. 6ರಷ್ಟು ವಿಶೇಷ ಭತ್ಯೆ ನೀಡಲಾಗುವುದು. ಅಲ್ಲದೆ ಅವನು ಅಂಧ ಮತ್ತು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ ಮಾಸಿಕವಾಗಿ ರೂ. 500-00 ವಿಶೇಷ ಭತ್ಯೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ನೇಮಕಾತಿ ಅಧಿಕಾರಿಯವರಿಗೆ ನಿಮ್ಮ ಅಂಗವೈಕಲ್ಯದ ಸ್ವರೂಪದ ಆಧಾರದ ಮೇಲೆ ವಿಶೇಷ ಭತ್ಯೆ ಮಂಜೂರು ಮಾಡಲು ಕೋರಬಹುದು.
****
19-8-16.
ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯ.
ನಾನು ಇತ್ತೀಚೆಗಷ್ಟೇ ಸರ್ಕಾರಿ ಸೇವೆಗೆ ಸೇರಿದ್ದು ನನ್ನ ನೇಮಕಾತಿ ಆದೇಶದಲ್ಲಿ ಅಕೌಂಟ್ಸ್ ಹೈಯರ್, ರೆವಿನ್ಯೂ ಹೈಯರ್ ಮತ್ತು ಜನರಲ್ ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆಂದು ಸೂಚಿಸಲಾಗಿದೆ. ನಾನು ಈ ಪರೀಕ್ಷೆಗಳನ್ನು ಪರೀಕ್ಷಾರ್ಥ ಅವಧಿಯೊಳಗೆ ಪೂರೈಸಬೇಕಾಗಿದ್ದು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಈ ಪರೀಕ್ಷೆಗಳಿಗೆ ಹಾಜರಾಗಿದ್ದೇನೆ. ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಹೇಗೆ? ಯಾವ್ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು? ದಯವಿಟ್ಟು ವಿವರ ನೀಡಿ.
|ಸುಮಿತ್ರಾ ಬಿ.ಎನ್. ದಾವಣಗೆರೆ.
ಕರ್ನಾಟಕ ಸರ್ಕಾರಿ ಸೇವಾ (ಕನ್ನಡಭಾಷೆ ಮತ್ತು ಸೇವಾ ಪರೀಕ್ಷೆ) ನಿಯಮಗಳು 1974ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಪರೀಕ್ಷಾರ್ಥ ಅವಧಿಯೊಳಗೆ ತನಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯ. ಈ ನಿಯಮಾವಳಿಯಲ್ಲಿ ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮ, ವಿಧಾನ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ನೀವು ಹಾಜರಾಗುತ್ತಿರುವ ಇಲಾಖಾ ಪರೀಕ್ಷೆಗಳನ್ನು ಆಯೋಗವು ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತಿರುವುದರಿಂದ ಒಮ್ಮೆ ನೀವು ಈ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಅವುಗಳ ವಿಷಯಸೂಚಿಕೆ ಮತ್ತು ಪರಿವಿಡಿಯನ್ನು ಅಧ್ಯಯನ ಮಾಡುವುದರೊಂದಿಗೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಸಹ ಅವಲೋಕಿಸಬೇಕು. ಈ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಉತ್ತರಿಸಲು ಅವಕಾಶವಿರುವುದರಿಂದ ಇತ್ತೀಚಿನವರೆಗಿನ ತಿದ್ದುಪಡಿಗಳನ್ನು ಅಳವಡಿಸಿದ ಪುಸ್ತಕಗಳನ್ನೇ ನೀವು ಅಧ್ಯಯನ ಮಾಡಬೇಕಾಗುತ್ತದೆ. ಬೆಂಗಳೂರಿನ ಶ್ರೀ ರಾಘವೇಂದ್ರ ಪ್ರಕಾಶನದವರು ಅಕೌಂಟ್ಸ್ ಹೈಯರ್ ವಿಷಯಗಳಿಗೆ ಸಂಬಂಧಿಸಿದ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಆರ್ಥಿಕ ಸಂಹಿತೆ, ಖಜಾನೆ ಸಂಹಿತೆ, ಬಜೆಟ್ ಕೈಪಿಡಿ, ರೆವಿನ್ಯೂ ಹೈಯರ್ (ಭಾಗ 1 ಮತ್ತು 2 ಕ್ಕೆ) ಸಂಬಂಧಿಸಿದಂತೆ ರೆವಿನ್ಯೂ ಹೈಯರ್ ಪಠ್ಯ ಪುಸ್ತಕಗಳನ್ನು ಹಾಗೂ ಜನರಲ್ ಲಾ ಭಾಗ 1, 2ಕ್ಕೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಬಹುದು. ***
21-8-16.
ಮಂಜೂರಾಗಿರುವ 180 ದಿನಗಳ ಪ್ರಸೂತಿ ರಜೆ ಬಳಸಿಕೊಳ್ಳಬಹುದು.
ನನ್ನ ಪತ್ನಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕಿ. ನಮಗೆ ಮೊದಲನೇ ಮಗುವಾಗಿದ್ದಾಗ ಅವಳು 180 ದಿನಗಳ ಪ್ರಸೂತಿ ರಜೆ ತೆಗೆದುಕೊಂಡಿದ್ದಾಳೆ. ಈಗ ನಮಗೆ 2ನೇ ಮಗು ಜನಿಸಿದ್ದು ಮತ್ತೆ ನನ್ನ ಪತ್ನಿ ಮಾತೃತ್ವ ರಜೆಯಲ್ಲಿ ಇದ್ದಾಳೆ. ಆದರೆ ದುರದೃಷ್ಟವಶಾತ್ ನಮಗೆ 2ನೇ ಮಗು 45 ದಿನಗಳವರೆಗೆ ಬದುಕಿ ಮರಣಿಸಿದೆ. ಈಗ ನನ್ನ ಪತ್ನಿ ಸೇವೆಗೆ ಹಾಜರಾಗಬೇಕೆ? ಅಥವಾ 180 ದಿನಗಳು ಮುಗಿದ ಮೇಲೆ ಸೇವೆಗೆ ಹಾಜರಾಗಬೇಕೆ? ಹೀಗೆ ಪ್ರಸೂತಿ ರಜೆ ತೆಗೆದುಕೊಂಡು ಮತ್ತೊಮ್ಮೆ ಈ ರಜೆ ನನ್ನ ಪತ್ನಿಗೆ ದೊರಕುತ್ತದೆಯೇ?
| ಮಾ.ವಿ. ರಾಜಶೇಖರ, ಬೀದರ್
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ನಿಮ್ಮ ಪತ್ನಿ 2ನೇ ಬಾರಿ ಮಾತೃತ್ವ ರಜೆ ಪಡೆದಿರುವುದು ಕ್ರಮಬದ್ಧ. ಆದರೆ ಮಗು ಅಕಾಲಿಕ ಮರಣ ಹೊಂದಿದ್ದು, ತಾಯಿಯ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಲಗೊಳ್ಳಲು ಪ್ರಸ್ತುತ ಮಂಜೂರಾಗಿರುವ 180 ದಿನಗಳ ಪ್ರಸೂತಿ ರಜೆ ಬಳಸಿಕೊಳ್ಳಬಹುದು. ಆದುದರಿಂದ ಮತ್ತೆ ನಿಮ್ಮ ಪತ್ನಿ ಕರ್ತವ್ಯಕ್ಕೆ ಹಾಜರಾಗದೆ 180 ದಿನಗಳ ನಂತರ ಕೆಲಸಕ್ಕೆ ಹೋಗಬಹುದು. ಈ ನಿಯಮಾವಳಿ ರೀತ್ಯ 2 ಜೀವಂತ ಮಗುವಿರುವವರೆಗೂ ಹೆರಿಗೆ ರಜೆ ಪಡೆಯಬಹುದು.
***
23-8-16
ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿ ಅವಧಿಯೇ?
ನಾನು ಸಹ್ಯಾದ್ರಿ ಕನ್ನಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ. 1998ರಿಂದ ನೇಮಕಾತಿ ಹೊಂದಿದ್ದೇನೆ. ಆದರೆ ಈ ಶಾಲೆಯು 2014ರ ಫೆಬ್ರವರಿಯಲ್ಲಿ ಅನುದಾನಕ್ಕೊಳಪಟ್ಟಿದೆ. ನನ್ನ ಹುದ್ದೆಯು ಸಹ ಅನುದಾನಕ್ಕೊಳಪಟ್ಟಿದ್ದು, ಈಗ ಪ್ರೊಬೇಷನರಿ ಅವಧಿ ಬಗ್ಗೆ ಗೊಂದಲಗಳಿವೆ. ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿಅವಧಿಯೇ? ಅಥವಾ ಅನುದಾನಕ್ಕೊಳಪಟ್ಟ ದಿನಾಂಕದಿಂದ 2 ವರ್ಷಗಳೋ ಎಂಬ ಗೊಂದಲಗಳಿವೆ. ಸೂಕ್ತ ಪರಿಹಾರ ಸೂಚಿಸಿ.| ಬಿ. ಸುಧೀಂದ್ರ ಕುಮಾರ್, ಭದ್ರಾವತಿಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ (ನೌಕರರ ಸೇವಾ ಷರತ್ತುಗಳು) ನಿಯಮಾವಳಿ 1999ರ ಮೇರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಹೊಂದಿದ ನೌಕರರ ಸೇವಾ ಅವಧಿ ಅನುದಾನಿತ ದಿನಾಂಕದಿಂದ ಪ್ರಾರಂಭವಾಗುತ್ತದೆ. ಆದ ಕಾರಣ ನಿಮ್ಮ ಪ್ರೊಬೇಷನರಿ ಅವಧಿ 2014ರ ಫೆಬ್ರವರಿಯಿಂದ ಆರಂಭವಾಗಿ 2 ವರ್ಷಗಳಿರುತ್ತವೆ. ಅನುದಾನವನ್ನು ಸರ್ಕಾರವು ನೀಡುತ್ತಿದ್ದು, ಮೇಲಿನ ನಿಯಮಾವಳಿಯಂತೆ ಪರೀಕ್ಷಾರ್ಥ ಅವಧಿಯನ್ನು 2 ವರ್ಷಗಳ ಕಾಲ ನಿಗದಿಪಡಿಸಲಾಗುತ್ತದೆ.
***
24-8-16.
ನಾನು 2010ರಲ್ಲಿ ಮುಖ್ಯೋಪಾಧ್ಯಾಯ ಹುದ್ದೆಯಪದೋನ್ನತಿ ಬೇಡವೆಂದು, ನನ್ನ ಅಂಗವೈಕಲ್ಯ ಕಾರಣದಿಂದಾಗಿ ಸ್ವ ಇಚ್ಚೆಯಿಂದ ನಿರಾಕರಿಸಿದ್ದೆ. 20, 25 ವರ್ಷ ಮತ್ತು 30 ವರ್ಷದ ವೇತನ ಬಡ್ತಿಗೆ ಅರ್ಹನಾಗಿದ್ದೇನೆಯೇ?| ಪಿ.ಎಚ್.ಪಾಟೀಲ್, ಬೆಳಗಾವಿದಿನಾಂಕ 9.5.2002ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 13, ಎಸ್ಆರ್ಪಿ 2002, ಹಾಗೂ ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12, ಎಸ್ಆರ್ಪಿ 2012ರಂತೆ ಈಗಾಗಲೇ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿ ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ 20, 25, ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳನ್ನು ನೀಡಬಾರದೆಂದು ಸೂಚಿಸಿದೆ. ಆದ್ದರಿಂದ ನೀವು ಈ ಹೆಚ್ಚುವರಿ ವೇತನ ಬಡ್ತಿಗಳಿಗೆ ಅರ್ಹರಲ್ಲ.
***
25-8-16.
ನೆನಾನು ಇಲಾಖೆಯ ಪೂರ್ವಾನುಮತಿ ಪಡೆದು (ಎನ್ಓಸಿ) ಕೇಂದ್ರೀಯ ದಾಖಲಾತಿ ಘಟಕವು ನಡೆಸಿದ ಪರೀಕ್ಷೆಯಲ್ಲಿ ಪದವಿಪೂರ್ವ ಕಾಲೇಜಿಗೆ ನೇರ ನೇಮಕಾತಿ ಹೊಂದಿದ್ದೇನೆ. ನಾನು ಈ ಹಿಂದೆ ಜನವರಿ 2012ರಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ನೇಮಕಗೊಂಡಿದ್ದು, ನಿವೃತ್ತಿ ವೇತನದ ಹುದ್ದೆಯನ್ನು ಧಾರಣೆ ಮಾಡಿದ್ದೆ. ನಾನೀಗ ಪದವಿಪೂರ್ವ ಕಾಲೇಜಿನಲ್ಲಿ 3 ವರ್ಷ ಸೇವೆ ಸಲ್ಲಿಸಿದ್ದು, 2 ವೇತನ ಬಡ್ತಿಗಳನ್ನು ಪಡೆದಿದ್ದು, 3ನೇ ವೇತನ ಬಡ್ತಿ ಪಡೆಯಲು ಪುನಃ ತರಬೇತಿ ಅವಧಿ ಪೂರ್ಣಗೊಳಿಸಬೇಕೇ? ನನಗೆ ಮೊದಲಿನ ನಿವೃತ್ತಿ ವೇತನ ಸೌಲಭ್ಯ ಈ ಇಲಾಖೆಯಲ್ಲೂ ಮುಂದುವರಿಯುವುದೇ?| ವನಿತಾ ರಾಯೇಶ್ವರ್ ಶೆಟ್ಟಿ, ಶಿರಸಿಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಹುದ್ದೆಗೆ ನೇಮಕ ಮಾಡುವಾಗ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ 4 ವರ್ಷಗಳ ಕಾಲ ಪರೀಕ್ಷಾರ್ಥ ಅವಧಿ ನಿಗದಿಪಡಿಸಲಾಗಿರುತ್ತದೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಂತೆ ಮೊದಲ 3 ವೇತನ ಬಡ್ತಿಗಳನ್ನು ಯಾವುದೇ ಅಡೆತಡೆ ಇಲ್ಲದೆ ಮಂಜೂರು ಮಾಡಬಹುದು. ಆದರೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಪ್ರಸ್ತುತ ಬಿ.ಎಡ್ ಶಿಕ್ಷಣ ತರಬೇತಿ ಕಡ್ಡಾಯಗೊಳಿಸಿರುವುದರಿಂದ, ಮತ್ತೆಬಿಎಡ್ ತರಬೇತಿಯನ್ನು ಪ್ರೌಢಶಾಲಾ ಶಿಕ್ಷಕರಾಗಿ ನೇಮಕವಾಗುವ ಮೊದಲೇ ಪಡೆದಿರುವುದರಿಂದ, ಮತ್ತೆ ತರಬೇತಿ ಪಡೆಯಬೇಕಾದ ಅವಶ್ಯಕತೆ ಇಲ್ಲ. ಆದರೆ ನಿಮ್ಮ 4ನೇ ವೇತನ ಬಡ್ತಿಯನ್ನು ಪ್ರೊಬೇಷನರಿ ಅವಧಿ ನಂತರ ಮಂಜೂರು ಮಾಡಲಾಗುತ್ತದೆ. ನೀವು ಇಲಾಖೆಯ ಪೂರ್ವಾನುಮತಿ ಪಡೆದು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252 (ಬಿ)ರಂತೆ ಕಾರ್ಯ ವಿಮುಕ್ತಿ ಹೊಂದಿ ಪದವಿಪೂರ್ವ ಕಾಲೇಜಿಗೆ ನೇಮಕವಾಗಿರುವುದರಿಂದ ನಿಮಗೆ ಸರ್ಕಾರಿ ಸೇವಾ ನಿಯಮಾವಳಿಯ 224ಬಿರಂತೆ ಪಿಂಚಣಿಗಾಗಿ ಹಿಂದಿನ ಸೇವೆ ಪರಿಗಣಿಸಲು ನಿಮ್ಮ ನೇಮಕಾತಿಪ್ರಾಧಿಕಾರಕ್ಕೆ ನೀವು ಮನವಿ ಸಲ್ಲಿಸಬೇಕು. ನಿಮ್ಮ ಮನವಿಯ ಆಧಾರದ ಮೇಲೆ ನೇಮಕಾತಿ ಪ್ರಾಧಿಕಾರಿಯವರು ನೀವು ಪ್ರೌಢಶಾಲೆಯಲ್ಲಿ 12.1.2006ರಿಂದ ಸೇವೆ ಸಲ್ಲಿಸಿರುವುದರಿಂದ ನಿಮ್ಮ ಹುದ್ದೆಯನ್ನು ಪಿಂಚಣಿಯುಕ್ತ ಹುದ್ದೆಯೆಂದು ಪರಿಗಣಿಸಿ ಮಂಜೂರು ಮಾಡಲಾಗುತ್ತದೆ.
***
1-7-16.
ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ತಪಾಸಣೆ ಕಾರ್ಯ ನಿರ್ವಹಿಸಬಹುದು.
ಒಬ್ಬ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ, ಹತ್ತಿರದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕರ ದಿನಚರಿ, ಮೌಲ್ಯಮಾಪನ ತಪಾಸಣೆ ಮಾಡುವ ಅಧಿಕಾರ ಇದೆಯೇ?
| ಸಂತೋಷ್ ಎಂ.ಎಸ್. ಶಿವಮೊಗ್ಗ
ಒಬ್ಬ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಹೆಚ್ಚುವರಿಯಾಗಿ ಸಹಾಯಕ ಶಿಕ್ಷಣಾಧಿಕಾರಿಯೆಂದು ಪದನಾಮಕರಿಸಿ ನಿಯೋಜಿತರಾದ ಮುಖ್ಯ ಶಿಕ್ಷಕರು ದಿನಾಂಕ 1.8.2007ರ ಸರ್ಕಾರಿ ಆದೇಶ ಸಂಖ್ಯೆ ಇಡಿ 109, ಡಿಪಿಐ 2007ರಂತೆ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ತಪಾಸಣೆ ಮುಂತಾದ ಕಾರ್ಯ ನಿರ್ವಹಿಸಬಹುದು.
***
2-7-16.
ಸರ್ಕಾರಿ ನೌಕರನಾಗಿರುವ ನನಗೆ ದಿನ ಪತ್ರಿಕೆ, ವಾರಪತ್ರಿಕೆಗಳಿಗೆ ಪತ್ರ ಬರೆಯಲು ಶಿಸ್ತು ಪ್ರಾಧಿಕಾರಿಯ ಅನುಮತಿ ಅವಶ್ಯಕವೇ?
ಕರ್ನಾಟಕ ಸಿವಿಲ್ ಸೇವಾ(ನಡತೆ ) ನಿಯಮಾವಳಿ 1966ರ ನಿಯಮ 9(2)ರ ಪ್ರಕಾರ ಅನುಮತಿ ಅವಶ್ಯಕ. ನೀವು ಬರೆಯುವ ಪತ್ರವನ್ನು, ನಿಮ್ಮ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಅನುಮತಿ ಪಡೆದು ಬರೆಯಬೇಕು. ಇಲ್ಲದಿದ್ದರೆ ನೀವು ಶಿಸ್ತು ಕ್ರಮಕ್ಕೆ ಒಳಗಾಗುತ್ತೀರಿ.
***
3-7-16.
ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ
ನನ್ನ ಸಹೋದ್ಯೋಗಿಯೊಬ್ಬರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವಾಗ ಲೋಕಾಯುಕ್ತ ಟ್ರಾ್ಯಪ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ತದನಂತರ ನೇರ ನೇಮಕಾತಿ ಮೂಲಕ ವಿಶ್ವವಿದ್ಯಾನಿಲಯವೊಂದರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತನ್ನ ವಿದ್ಯಾರ್ಹತೆ ಮತ್ತು ಅನುಭವದ ಹಿನ್ನೆಲೆಯಲ್ಲಿ ನೇಮಕವಾದರು. ಅತ್ತ ಸಿ.ಸಿ.ಎ ನಿಯಮಾವಳಿಯ ನಿಯಮ 14 (ಎ) ಅಡಿ ವಿಚಾರಣೆಯನ್ನು ಲೋಕಾಯುಕ್ತಕ್ಕೆ ವಹಿಸಲು ಲೋಕಾಯುಕ್ತರು ಸರ್ಕಾರದ ಕಾರ್ಯದರ್ಶಿಯವರಿಗೆ (ಆಹಾರ ಮತ್ತು ನಾಗರಿಕ ಸೇವೆಗಳು) ಶಿಫಾರಸ್ಸು ಮಾಡಿದ್ದಾರೆ. ಇವರ ವಿರುದ್ಧ 14 (ಎ) ಅಡಿ ಲೋಕಾಯುಕ್ತಕ್ಕೆ ವಿಚಾರಣೆಗೆ ವಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಸಚಿವಾಲಯದ ಇಲಾಖೆ ಆದೇಶಿಸಬೇಕೋ? ಅಥವಾ ವಿಶ್ವವಿದ್ಯಾಲಯದ ನಿಯಂತ್ರಣ ಹೊಂದಿರುವ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಆದೇಶಿಸಬೇಕೊ ತಿಳಿಸಿ?
| ಬಿ.ಎಸ್.ರಮೇಶ್ ಕುಮಾರ್ ಕೋಲಾರ
ಎರಡೂ ಅಲ್ಲ. ಕಾರಣ ಸರ್ಕಾರಿ ಸೇವೆಯಿಂದ ಬಿಡುಗಡೆಯಾದ ಕೂಡಲೆ ಆ ನೌಕರ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ, 1957ರ ಮೇರೆಗೆ ಇದರ ವ್ಯಾಪ್ತಿಯಿಂದ ಹೊರಗೆ ಹೋಗಿರುತ್ತಾರೆ (ಸಿಸಿಎ ನಿಯಮ). ಹೀಗಾಗಿ 14 (ಎ) ವ್ಯಾಪ್ತಿಯಲ್ಲಿ ಆ ನೌಕರ ಬರುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಸಲ್ಲಿಸುವ ಸೇವೆ ರಾಜ್ಯ ಸರ್ಕಾರಿ ಸೇವೆಯಲ್ಲ. ಆದ್ದರಿಂದ ಸಿಸಿಎ ನಿಯಮಾವಳಿಯ ನಿಯಮ 100 (1)ರ ಪ್ರಕಾರ ವಿಶ್ವವಿದ್ಯಾನಿಲಯದ ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಆ ವ್ಯಕ್ತಿ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಒಳಗಾಗುತ್ತಾನೆ.
***
4-7-16
ನಾನು ಅನುದಾನಿತ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಗೆ ಸೇರುವ ಮೊದಲು ಹೆರಿಗೆಯಾಗಿ ಅವಳಿ ಮಕ್ಕಳನ್ನು ಹೊಂದಿರುತ್ತೇನೆ. ಈಗ ವೃತ್ತಿ ಖಾಯಂಗೊಂಡ ನಂತರ 2ನೇ ಹೆರಿಗೆಯಾಗಿದ್ದು, ಒಂದು ಮಗುವಿಗೆ ಜನ್ಮ ನೀಡಿದ್ದೇನೆ. ಆದರೆ ಹೆರಿಗೆ ರಜೆ ಮಂಜೂರಾತಿ ಬಗ್ಗೆ ಇಲಾಖೆ ವಿಚಾರಿಸಿದಾಗ ಈಗಾಗಲೇ 2 ಜೀವಂತ ಮಕ್ಕಳು ಇರುವ ಕಾರಣ ಹೆರಿಗೆ ರಜೆ ಮಂಜೂರು ಮಾಡಲಾಗುವುದಿಲ್ಲ ಎಂದಿದ್ದಾರೆ. ಆದರೆ ಕೆಸಿಎಆರ್ ನಿಯಮದಂತೆ 2ನೇ ಹೆರಿಗೆ ರಜೆಗೆ ಅವಕಾಶ ಇದೆಯೇ ಇಲ್ಲವೇ ಅಥವಾ ನಿಯಮ ತಿದ್ದುಪಡಿ ಮಾಡಲಾಗಿದೆಯೇ?
|ಯಾಸ್ಮಿನ್ ಎಂ. ಪುತ್ತೂರು, ದ.ಕ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135(3)ರಂತೆ 2 ಅಥವಾ ಜೀವಂತ ಮಕ್ಕಳನ್ನು ಹೊಂದುವ ಮಹಿಳಾ ಸರ್ಕಾರಿ ನೌಕರರಿಗೆ ಈ ಪ್ರಸೂತಿ ರಜೆ ಅಥವಾ ಗರ್ಭಪಾತ ಸಂಬಂಧದ ರಜೆ ಮಂಜೂರು ಮಾಡುವುದಿಲ್ಲ. ನಿಮಗೆ ಮೊದಲನೇ ಹೆರಿಗೆಯಲ್ಲಿ ಅವಳಿ ಮಕ್ಕಳಾಗಿದ್ದು ಎರಡೂ ಮಕ್ಕಳು ಜೀವಂತವಾಗಿದ್ದುದರಿಂದ ಈ ಹೆರಿಗೆ ರಜೆ ಮಂಜೂರು ಮಾಡಲಾಗುವುದಿಲ್ಲ. ಆದರೆ, ನೀವು ಎರಡನೇ ಹೆರಿಗೆ ರಜೆಗೆ ವೈದ್ಯಕೀಯ ಆಧಾರದ ಮೇರೆಗೆ ನಿಮ್ಮ ಖಾತೆಯಲ್ಲಿರುವ ರಜೆ ಮಂಜೂರು ಮಾಡಿಸಿಕೊಳ್ಳಬಹುದು.
***
5-7-16
ನಾನು ಸರ್ಕಾರಿ ಸೇವೆಯಲ್ಲಿದ್ದು, ಸರ್ಕಾರಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದೇನೆ. ನಾನು ದಿನಾಂಕ: 28.10.2016ರಂದು ವಯೋನಿವೃತ್ತಿ ಹೊಂದುವವನಿದ್ದೇನೆ. ನಿವೃತ್ತಿಯ ನಂತರ ನಾನು ಸರ್ಕಾರಿ ವಸತಿ ಗೃಹದಲ್ಲಿ ಕಾನೂನಿನ ಪ್ರಕಾರ ಎಷ್ಟು ದಿನ ಇರಬಹುದು ಎಂಬ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.
|ಚಂದ್ರಕಾಂತ ನಾಯ್ಕ, ಕುಮಟಾ, ಉ.ಕ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳು ಪರಿಶಿಷ್ಟ-4ರಲ್ಲಿರುವ ಸರ್ಕಾರಿ ನೌಕರರ ನಿವಾಸಗಳನ್ನು ಬಳಸಲು ಸರ್ಕಾರಿ ಕಟ್ಟಡಗಳ ಹಂಚಿಕೆ ಮತ್ತು ಲೈಸೆನ್ಸ್ ಶುಲ್ಕ ವಿಧಿಸುವಿಕೆ ನಿಯಮಗಳು 2002ರ ನಿಯಮ 30ರಂತೆ ಒಂದು ತಿಂಗಳವರೆಗೆ ವಾಸವಿರಬಹುದು. ತದನಂತರ ಇದ್ದರೆ ನಿಯಮ 10ರಂತೆ ಹೆಚ್ಚುವರಿ ಬಾಡಿಗೆ ಶುಲ್ಕವನ್ನು ಲೋಕೋಪಯೋಗಿ ಇಲಾಖೆಯು ವಿಧಿಸುತ್ತದೆ.
***
6-7-16
ನಾನು ನಗರ ಪಾಲಿಕೆಯಲ್ಲಿ ಸಿ ದರ್ಜೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಕೆಲಸಕ್ಕೆ ದಿನಾಂಕ: 02.06.2000ರಲ್ಲಿ ಸೇರಿದ್ದು ಸ್ವಯಂ ನಿವೃತ್ತಿ ಪಡೆಯಬೇಕೆಂದು ತೀರ್ವನ ಮಾಡಿದ್ದೇನೆ. ಸ್ವಯಂ ನಿವೃತ್ತಿ ಪಡೆದರೆ ನನಗೆ ಪಿಂಚಣಿ ಸೌಲಭ್ಯ ಹಾಗೂ ಇತರೆ ಭತ್ಯೆ ಸಿಗಬಹುದೆ. |ನಂಜಪ್ಪ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 185(3)ರಡಿಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರೆ ಐದು ವರ್ಷಗಳ ಕಾಲ ಸೇವಾ ಅಧಿಕ್ಯ(ವೇಟೇಜ್) ಲಭ್ಯವಾಗುತ್ತದೆ. ನಿಮಗೆ 20 ವರ್ಷಗಳ ಪಿಂಚಣಿಗಾಗಿ ಅರ್ಹತೆ ಪರಿಗಣಿಸಲಾಗುತ್ತದೆ. ನಿಮಗೆ ಲಭ್ಯವಾಗುವ ಕಡೆಯ ವೇತನದ ಆಧಾರದ ಮೇಲೆ ನಿಯಮಾವಳಿ ರೀತ್ಯಾ ನಿವೃತ್ತಿ ವೇತನ ಕಮ್ಯುಟೇಷನ್, ಕೌಟುಂಬಿಕ ನಿವೃತ್ತಿ ವೇತನ ಹಾಗೂ ನಿಮ್ಮ ನಿವೃತ್ತಿ ವೇತನಕ್ಕೆ ಹೊಂದಿಕೆಯಾಗುವ ತುಟ್ಟಿ ಭತ್ಯೆಯು ಲಭ್ಯವಾಗುತ್ತದೆ.
***
7-7-16
ಜಾತಿ ಸಿಂಧುತ್ವ ಪ್ರಮಾಣ ಪತ್ರವು ಸಂಬಂಧಪಟ್ಟ ಇಲಾಖೆಗೆ ತಲುಪಿದ ಎಷ್ಟು ದಿನದವರೆಗೆ ನೇಮಕಾತಿ ಆದೇಶ ಪಡೆಯಲು ಕಾಲಾವಕಾಶವಿದೆ? ನಾವೇನಾದರೂ ಬೇರೆ ಇಲಾಖೆಯಲ್ಲಿ ಮತ್ತೊಂದು ಕೆಲಸಕ್ಕೆ ಹಾಜರಾಗಬೇಕಾದರೆ, ಮತ್ತೆ ಇದೇ ಸಿಂಧುತ್ವ ಪ್ರಮಾಣ ಪತ್ರವನ್ನು ಸೇರಬೇಕಾಗಿರುವ ಇಲಾಖೆಗೆ/ಸರ್ಕಾರಿ ನೌಕರಿಗೆ ಪರಿಗಣಿಸಲು ಸಾಧ್ಯವಿದೆಯೇ ?
ಐಎಸ್.ಎಸ್.ಮೂಡಲದವರ, ಹಾವೇರಿ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರಡಿಯಲ್ಲಿ ಸಿಂಧುತ್ವ ಪಡೆದ ದಿನಾಂಕದಿಂದ 6 ತಿಂಗಳೊಳಗೆ ನೇಮಕಾತಿ ಆದೇಶ ಪಡೆಯಬಹುದು. ನೀವೇನಾದರೂ ಬೇರೆ ಇಲಾಖೆಗೆ ಹಾಜರಾಗಬೇಕಾದಾಗ ಮತ್ತೆ ಸಿಂಧುತ್ವ ಪ್ರಮಾಣ ಪತ್ರ ಮಾಡಿಸುವ ಅವಶ್ಯಕತೆ ಇಲ್ಲ. ಸರ್ಕಾರಿ ಅದೇಶದಂತೆ ಹಿಂದುಳಿದ ವರ್ಗಗಳ ಸಿಂಧುತ್ವ ಪ್ರಮಾಣ ಪತ್ರವು ಐದು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಿಂಧುತ್ವವು ಶಾಶ್ವತವಾಗಿರುತ್ತದೆ.
***
8-7-16
ನಿವೃತ್ತಿಯಾದ 4 ವರ್ಷಗಳ ನಂತರ ಇಲಾಖಾ ವಿಚಾರಣೆ ಸರಿಯೇ?
ನಾನು 2011ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತನಾಗಿದ್ದು, ಕೆಲವೊಂದು ಕರ್ತವ್ಯ ಲೋಪಗಳ ಆರೋಪಪಟ್ಟಿ ನೀಡಿ ಇಲಾಖಾ ವಿಚಾರಣೆ ನಡೆಸಲು ವಿವರಣೆ ಕೇಳಿರುತ್ತಾರೆ. ನಿವೃತ್ತಿಯಾದ ನಾಲ್ಕು ವರ್ಷಗಳ ನಂತರ ಈ ಇಲಾಖಾ ವಿಚಾರಣೆ ನಡೆಸುವುದು ನಿಯಮಾವಳಿಯ ರೀತಿ ಸರಿಯೇ?
|ನಾರಾಯಣಸ್ವಾಮಿ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 214 (2) (ಬಿ) ರೀತ್ಯಾ ಸರ್ಕಾರಿ ನೌಕರನು ನಿವೃತ್ತಿಯಾದ 4 ವರ್ಷದ ಮೇಲೆ ಯಾವುದೇ ಇಲಾಖಾ ವಿಚಾರಣೆ ಮಾಡತಕ್ಕದ್ದಲ್ಲ. ಇಂತಹ ಇಲಾಖಾ ವಿಚಾರಣೆ ನಡೆಸಲು ಸರ್ಕಾರದ ಪೂರ್ವ ಮಂಜೂರಾತಿ ಅಗತ್ಯ. ನಿಮ್ಮ ವಿರುದ್ಧ ಆಡಳಿತಾತ್ಮಕವಾದ ಕರ್ತವ್ಯ ಲೋಪ ಆರೋಪ ಇರುವುದರಿಂದ ಹಾಗೂ ಯಾವುದೇ ಹಣಕಾಸಿನ ನಷ್ಟವುಂಟಾಗದೇ ಇರುವುದರಿಂದ ನಿಯಮಾವಳಿಯ ರೀತ್ಯಾ ಕ್ರಮಬದ್ಧವಾಗುವುದಿಲ್ಲ.
***
9-7-16
ಸರ್ಕಾರಿ ನೌಕರನ ಪತ್ನಿ ವ್ಯಾಪಾರ ವಹಿವಾಟನ್ನು ಮಾಡಲು ಅವಕಾಶವಿದೆ.
ಒಬ್ಬ ಸರ್ಕಾರಿ ಉದ್ಯೋಗಿ ಅಂಗಡಿ ಮಳಿಗೆ ಹೊಂದುವುದು ಅಥವಾ ಖರೀದಿಸುವುದು ಹಾಗೂ ಒಬ್ಬ ಉದ್ಯೋಗಿಯ ಪತಿ ಅಥವಾ ಪತ್ನಿ ವ್ಯಾಪಾರ ವಹಿವಾಟು ಮಾಡಲು ಕಾನೂನಿನಲ್ಲಿ ಅನುಮತಿಯಿದೆಯೇ?
|ಸುರೇಂದ್ರ ಕುಮಾರ್ ನಾಯಕ್ ಮಂಗಳೂರು
1966ರ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳ ನಿಯಮ 16ರ ಅಡಿಯಲ್ಲಿ ಯಾವುದೇ ಸರ್ಕಾರಿ ನೌಕರನು ಸರ್ಕಾರದ ಪೂರ್ವ ಮಂಜೂರಾತಿಯಿಲ್ಲದ ಹೊರತು ಪ್ರತ್ಯಕ್ಷವಾಗಿಯೇ ಆಗಲೀ ಪರೋಕ್ಷವಾಗಿಯೇ ಆಗಲೀ ವ್ಯಾಪಾರ ಮಾಡತಕ್ಕದ್ದಲ್ಲ ಅಥವಾ ಇತರ ಉದ್ಯೋಗ ಕೈಗೊಳ್ಳತಕ್ಕದ್ದಲ್ಲ. ಆದರೆ, ಸರ್ಕಾರಿ ನೌಕರನ ಪತ್ನಿ ತಾನೇ ಸ್ವತಃ ಬಂಡವಾಳ ಹೂಡಿ ವ್ಯಾಪಾರ ವಹಿವಾಟನ್ನು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ.
***
10-7-16
ಮಗ ಮೃತ ತಾಯಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಪಡೆಯಬಹುದೇ?
ಒಬ್ಬ ಸರ್ಕಾರಿ ನೌಕರನ ತಾಯಿ ಗೃಹಿಣಿ ಆಗಿದ್ದು, ತಂದೆ ನಿವೃತ್ತ ಸರ್ಕಾರಿ ನೌಕರನಾಗಿದ್ದಾಗ, ಮಗ ಮೃತ ತಾಯಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಪಡೆಯಬಹುದೇ. ದಯವಿಟ್ಟು ತಿಳಿಸಿ.
|ಎನ್.ಶ್ರೀನಿವಾಸ್ ಬೆಂಗಳೂರು
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ ನಿಯಮಗಳು) 1963ರ ನಿಯಮ 2ರಂತೆ ಸರ್ಕಾರಿ ನೌಕರರ ತಂದೆ-ತಾಯಿ ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿದ್ದರೆ ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರೂ ಅವರ ಮಾಸಿಕ ಆದಾಯವು 6,000 ರೂ.ಗಳನ್ನು ಮೀರದಿದ್ದರೆ ಅಂತಹ ತಂದೆ-ತಾಯಿಯವರ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಪಡೆಯಬಹುದು. ಆದುದರಿಂದ ಮೃತರಾದ ನಿಮ್ಮ ತಾಯಿ ನಿಮ್ಮ ಅವಲಂಬಿತರಾಗಿದ್ದರಿಂದ ನೀವು ವೈದ್ಯಕೀಯ ವೆಚ್ಚಕ್ಕೆ ಈ ನಿಯಮಾವಳಿಯ ರೀತ್ಯಾ ಸಕ್ಷಮ ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
***
11-7-16
ಎಸ್.ಡಿ.ಎ. ಹುದ್ದೆಗೆ ಬದಲಾವಣೆ ಮಾಡಿಕೊಳ್ಳಬಹುದೇ?
ನಾನು ಭೂಮಾಪನ ಇಲಾಖೆಯಲ್ಲಿ ಭೂಮಾಪಕಳಾಗಿ ದಿನಾಂಕ: 05.11.2013ರಂದು ಸೇವೆಗೆ ಸೇರಿದ್ದು, ಮೂಲ ವೇತನ ರೂ.12,500/- ಇದೆ. ಈಗ ನಾನು ಇಲಾಖೆ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿದ್ದೇನೆ. ನನ್ನ ಮೂಲ ವೇತನಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಲ್ಲಿ ಯಾವುದಾದರೂ ಬೇರೆ ಹುದ್ದೆಗಳಿಗೆ ಅಥವಾ ನನ್ನ ಮೂಲ ವೇತನಕ್ಕಿಂತ ಕಡಿಮೆ ಇರುವ ಎಸ್.ಡಿ.ಎ. ಹುದ್ದೆಗೆ (ಕಂದಾಯ ಇಲಾಖೆಯಲ್ಲಿ) ಬದಲಾವಣೆ ಮಾಡಿಕೊಳ್ಳಬಹುದೇ?
ಭಾರತಿ.ಟಿ.ಜೆ, ತುಮಕೂರು
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16ರ ಅಡಿಯಲ್ಲಿ ನೀವು ಹೊಂದಿರುವ ಹುದ್ದೆಗೆ ಅಸಮರ್ಥರಾಗಿದ್ದರೆ, ಆ ಅಸಮರ್ಥತೆ ಸಾಬೀತುಪಡಿಸುವ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದರೆ ನಿಮ್ಮನ್ನು ನಿಮ್ಮ ವೇತನ ಶ್ರೇಣಿಯ ತತ್ಸಮಾನ ವೇತನ ಶ್ರೇಣಿಯ ಹುದ್ದೆಗೆ ಸರ್ಕಾರವು ವರ್ಗಾಯಿಸಬಹುದು ಅಥವಾ ನೀವೇ ಕೋರಿದಂತೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ಆದರೆ ನಿಮಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರ್ಗಾವಣೆಗೊಂಡರೆ ವೇತನ ರಕ್ಷಣೆ ದೊರಕುವುದಿಲ್ಲ.
***
12-7-16
ನಾನು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ, ನನ್ನ ಸೇವಾವಧಿ 18 ವರ್ಷವಾದಾಗ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ಹೊಂದಿದೆ.ನಂತರ ನನಗೆ 20 ವರ್ಷದ ಹೆಚ್ಚುವರಿ ವಾರ್ಷಿಕ ಬಡ್ತಿ ಸಿಗಲಿಲ್ಲ. ಈಗ ನಾನು ಮುಖ್ಯ ಶಿಕ್ಷಕಿಯಾಗಿ ಏಳು ವರ್ಷ ಪೂರ್ತಿಗೊಳಿಸಿದ್ದೇನ.ಸೇವಾವಧಿ ಕೂಡ 25 ವರ್ಷ ಕಳೆದಿದೆ. ಆದರೆ ನನಗೆ 25 ವರ್ಪದ ಬಡ್ತಿಯೂ ಸಿಗಲಿಲ್ಲ. ಮುಂದೆ 30 ವರ್ಷದ್ದು ಸಿಗುವುದಿಲ್ಲವಾದರೆ ಇದು ಅನ್ಯಾಯ ಅಲ್ಲವೆ? ಕಾನೂನಿನಲ್ಲಿ ಈ ತಾರತಮ್ಯದ ಬಗ್ಗೆ ಯಾವುದೇ ತಿದ್ದುಪಡಿ ಇಲ್ಲವೇ? ನನಗಿಂತ ಕಡಿಮೆ ಸೇವೆ ಮಾಡುವವರು ಹೆಚ್ಚಿಗೆ ಸಂಬಳ ಪಡೆಯುತ್ತಿದ್ದಾರೆ ಇದು ನ್ಯಾಯವೇ?
✍ಶ್ರೀಮತಿ ಪಿ.ಎನ್.ಮುಕ್ರಿ.ರಾಣೇಬೆನ್ನೂರು.ಹಾವೇರಿ.
ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ ಎಫ್.ಡಿ.13 ಎಸ್.ಆರ್.ಪಿ.2002 ರ ಕಂಡಿಕೆ 6 ರಲ್ಲಿ ಈಗಾಗಲೇ ಕನಿಷ್ಟ 1 ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿ ನೀಡಲಾಗುವುದಿಲ್ಲ.ಅಂತೆಯೇ ದಿನಾಂಕ:14.06.2012ರ ಆದೇಶ ಸಂಖ್ಯೆ:ಎಫ್.ಡಿ.12.ಎಸ್.ಆರ್.ಪಿ.2012 ರ ಕಂಡಿಕೆ 6 ರಂತೆ ಈಗಾಗಲೇ ಪದೋನ್ನತಿ ಪಡೆದಿರುವ ನೌಕರರಿಗೆ ಈ 25 & 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ನೀಡಲಾಗುವುದಿಲ್ಲ. ಆದರೆ 2005ರ ಸರ್ಕಾರಿ ಆದೇಶದಂತೆ ವೇತನ ತಾರತಮ್ಯದ ಬಗ್ಗೆ ಸಕ್ರಮ ಪ್ರಾಧಿಕಾರಕ್ಕೆ ಸಮಾನ ಹುದ್ದೆಯಲ್ಲಿ ಸೇವಾ ಜೇಷ್ಠತೆಯಲ್ಲಿ ಕಿರಿಯರಾದ ನೌಕರರಿಗೆ ವೇತನ ಉನ್ನತಿಗೊಳಿಸಲು ನೀವು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು.
***
13-7-16
ನಾನು ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ 19 ವರ್ಷ 6 ತಿಂಗಳಾಗಿವೆ. ಪ್ರಸ್ತುತ ಇಲಾಖೆಯಲ್ಲಿ ಪದೋನ್ನತಿ ನೀಡುತ್ತಿದ್ದು, ನಾನೀಗ 20 ವರ್ಷದ ಹೆಚ್ಚುವರಿ ವೇತನ ಬಡ್ತಿ ಸನಿಹದಲ್ಲಿರುತ್ತೇನೆ. ಕೇವಲ 6 ತಿಂಗಳ ಹತ್ತಿರದಲ್ಲೇ ಹೆಚ್ಚುವರಿ ವೇತನ ಬಡ್ತಿ ದೊರೆಯದಂತಾಗುತ್ತದೆ. 20 ವರ್ಷದ ಹೆಚ್ಚುವರಿ ವೇತನ ಪಡೆದು ತದನಂತರ ಪದೋನ್ನತಿ ಹುದ್ದೆಯ ವೇತನ ಶ್ರೇಣಿ ಹೊಂದಬಹುದೇ?
✍ ಪ್ರಸಾದ್ ಕೆ. ಚೆನ್ನಪಟ್ಟಣ, ರಾಮನಗರ
ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 13, ಎಸ್ಆರ್ಪಿ 2002ರ ದಿನಾಂಕ 9.5.200ರ ಪ್ರಕಾರ 20 ವರ್ಷಗಳ ಸೇವಾವಧಿಯಲ್ಲಿ ಒಂದೂ ಪದೋನ್ನತಿ ಇಲ್ಲದೆ ಮುಂದುವರಿದಿರುವ ಸರ್ಕಾರಿ ನೌಕರನಿಗೆ ಅವನು ಹೊಂದಿರುವ ವೇತನ ಶ್ರೇಣಿಯಲ್ಲಿ ಒಂದು ಹೆಚ್ಚುವರಿ ಬಡ್ತಿ ನೀಡಬೇಕೆಂದು ಸೂಚಿಸಿದೆ. ಈ ಆದೇಶದಂತೆ 6 ತಿಂಗಳ ಕಾಲ ಹೆಚ್ಚುವರಿ ವೇತನ ಬಡ್ತಿ ಪಡೆದು ನಂತರ ಪದೋನ್ನತಿಯ ವೇತನ ಬಡ್ತಿ ಪಡೆಯಲು ಅವಕಾಶವಿಲ್ಲ. ಆದುದರಿಂದ ನೀವು ಮೊದಲು 20 ವರ್ಷಗಳ ಹೆಚ್ಚುವರಿ ವೇತನ ಪಡೆದು ತದನಂತರ ಪದೋನ್ನತಿ ಪಡೆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 42-ಬಿರಂತೆ ವೇತನ ನಿಗದಿ ಪಡಿಸಿಕೊಳ್ಳಬಹುದು. ಆಗ ನಿಮಗೆ ಹೆಚ್ಚಿನ ಆರ್ಥಿಕ ಸೌಲಭ್ಯ ಲಭ್ಯವಾಗುತ್ತದೆ.
***
14-7-16
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷ ಸಹ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದೆ. ಕಳೆದ ತಿಂಗಳು ನನಗೆ ಒಂದು ಮಗುವಾಗಿದ್ದು ಪ್ರಸೂತಿ ರಜೆ ಮಂಜೂರಾಗಿದ್ದು ನನ್ನ ಮಗು ಕೇವಲ 15 ದಿನ ಮಾತ್ರ ಬದುಕಿ ನಿಧನಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಶಾಲಾ ಮುಖ್ಯೋಪಾಧ್ಯಾಯರು ಮಗು ನಿಧನ ಹೊಂದಿರುವುದರಿಂದ ಹಾಗೂ ನಾನು ಪ್ರೊಬೇಷನರಿ ಅವಧಿಯಲ್ಲಿ ಇರುವುದರಿಂದ ಕರ್ತವ್ಯಕ್ಕೆ ಹಾಜರಾಗಲು ಮೌಖಿಕವಾಗಿ ಸೂಚಿಸಿದ್ದಾರೆ. ಆದರೆ ಮಾನಸಿಕ ಹಾಗೂ ದೈಹಿಕ ಅನಾರೋಗ್ಯದ ನಿಮಿತ್ತ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ನಾನು 180 ದಿನಗಳ ಪ್ರಸೂತಿ ರಜೆಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಬಹುದೇ?
✍ ವಿಜಯ ಎಂ. ಕುಲಕರ್ಣಿ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ ನಿಯಮವಳಿಯ ನಿಯಮ 135ರಡಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ಕಾಲ ಹೆರಿಗೆ ರಜೆಯನ್ನು ಮಂಜೂರು ಮಾಡಲು ಸೂಚಿಸಲಾಗಿದೆ. ನಿಮಗೆ ಈ 180 ದಿನಗಳ ಹೆರಿಗೆ ರಜೆ ಮಂಜೂರಾಗಿರುವುದರಿಂದ ಹಾಗೂ ನಿಮ್ಮ ದೈಹಿಕ ಮತ್ತು ಮಾನಸಿಕ ದೃಷ್ಟಿಯಿಂದ ವಿಶ್ರಾಂತಿ ಪಡೆಯುವುದು ಅಗತ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಮುಖ್ಯೋಪಾಧ್ಯಾಯರು ಸೂಚಿಸಿದಂತೆ ಕರ್ತವ್ಯಕ್ಕೆ ಹಾಜರಾಗದೆ ನಿಮಗೆ ಮಂಜೂರಾಗಿರುವ 180 ದಿನಗಳ ಹೆರಿಗೆ ರಜೆಯನ್ನು ಬಳಸಿಕೊಳ್ಳಲು ನಿಯಮಾವಳಿಯಲ್ಲಿ ಯಾವುದೇ ಅಡ್ಡಿ ಇಲ್ಲ. ಪ್ರೊಬೇಷನ್ ಅವಧಿಗೂ ಈ ರಜೆ ಬಳಕೆಗೂ ಯಾವುದೇ ಸಂಬಂಧವಿಲ್ಲ. ಆದ ಕಾರಣ ನಿಮ್ಮ ಮೇಲಧಿಕಾರಿಗೆ ಈ ಬಗ್ಗೆ ಮನವರಿಕೆ ಮಾಡಿ ಮನವಿಯನ್ನು ಸಲ್ಲಿಸಬಹುದು.
***
15-7-16
ಮೀಸಲಾತಿಯನ್ನು ಅಭ್ಯರ್ಥಿ ಎಷ್ಟು ಬಾರಿಯಾದರೂ ಬಳಸಿಕೊಳ್ಳಬಹುದು.
ನಾನು ಇತ್ತೀಚೆಗೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಯೋಜನಾ ನಿರಾಶ್ರಿತ ವ್ಯಕ್ತಿಯ ಮೀಸಲಾತಿಯಲ್ಲಿ(ಪಿಡಿಪಿ) ಆಯ್ಕೆಯಾಗಿರುತ್ತೇನೆ. ನಾನು ಮತ್ತೆ ಈ ಪಿಡಿಪಿ ಮೀಸಲಾತಿ ಸೌಲಭ್ಯದಡಿ ಬೇರೆ ಹುದ್ದೆಗಳಿಗೆ ಮತ್ತೆ ಆಯ್ಕೆಯಾಗಬಹುದೇ? ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
| ಶ್ರೀಶೈಲ, ಹುಬ್ಬಳ್ಳಿ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಾವಳಿಯ ನಿಯಮ 1977ರ ನಿಯಮ 9(1 ಎಎ) ಅಡಿಯಲ್ಲಿ ಶೇ.5ರಷ್ಟು ಹುದ್ದೆಗಳನ್ನು ಯೋಜನೆ ನಿರಾಶ್ರಿತರ ವ್ಯಕ್ತಿಗಳಿಗೆ(ಪಿಡಿಪಿ) ಅವರ ನೇರ ಮೀಸಲಾತಿ ಅಡಿ ನೀಡಲಾಗುತ್ತದೆ. ಈ ಮೀಸಲಾತಿಯು ‘ಎ’ ಮತ್ತು ‘ಬಿ’ ಗುಂಪಿನ ಗೆಜೆಟೆಡ್ ಹುದ್ದೆಗಳಿಗೆ ಅನ್ವಯಿಸುವುದಿಲ್ಲ. ಆದರೆ ಈ ಮೀಸಲಾತಿಯನ್ನು ಅಭ್ಯರ್ಥಿಯು ಎಷ್ಟು ಬಾರಿಯಾದರೂ ಬಳಸಿಕೊಳ್ಳಬಹುದು. ಈ ಮೀಸಲಾತಿ ಸೌಲಭ್ಯದ ಬಗ್ಗೆ ತಹಸೀಲ್ದಾರರಿಂದ ಪ್ರಮಾಣಪತ್ರ ಪಡೆದು ಆಯ್ಕೆ ಪೂರ್ವ ಸಂದರ್ಭದಲ್ಲಿ ಸಲ್ಲಿಸಬೇಕು. ನೀವು ಮತ್ತೊಮ್ಮೆ ಇದೇ ಮೀಸಲಾತಿಯಲ್ಲಿ ಬೇರೆ ಹುದ್ದೆಗಳಿಗೂ ಅರ್ಜಿ ಸಲ್ಲಿಸುವಾಗ ನಮೂದಿಸಬಹುದು.
***
16-7-16
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನನಗೀಗ ಆರೂವರೆ ತಿಂಗಳ ಮಗುವಿದೆ. ನಾನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 135ರಂತೆ ಹೆರಿಗೆ ರಜೆ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ಆದರೆ ಮಗುವಿಗೆ ಆರೈಕೆ ಮಾಡಲು ಶಾಲೆಯಿಂದ ಮನೆಗೆ ಬೇಗ ಹೋಗಲು ಸರ್ಕಾರಿ ಆದೇಶವಿದೆಯೇ? ಅಥವಾ ನಿಯಮಾವಳಿ ಇದೆಯೇ ?
| ವರಲಕ್ಷ್ಮಿ, ಮೈಸೂರು
1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಸೆಕ್ಷನ್ 11ರಡಿಯಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಮಗುವಿಗೆ 15 ತಿಂಗಳು ಆಗುವವರೆಗೆ ಪ್ರತಿದಿನ ಶಾಲಾ ಕರ್ತವ್ಯದ ಅವಧಿಯಲ್ಲಿ ಎರಡು ಬಿಡುವುಗಳನ್ನು ಪಡೆಯಲು ಅವಕಾಶವಿರುತ್ತದೆ. ಆದುದರಿಂದ ನೀವು ಈ ಬಿಡುವನ್ನು ಪಡೆಯಲು ನಿಮ್ಮ ಮುಖ್ಯೋಪಾಧ್ಯಾಯರ ಮೂಲಕ ನಿಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಈ ಸಂಬಂಧವಾಗಿ ಮನವಿ ಸಲ್ಲಿಸಿ ಅನುಮತಿ ಪಡೆಯಬಹುದು. ಈ ಅನುಮತಿಯ ಹಿನ್ನೆಲೆಯಲ್ಲಿ ನೀವು ಮಗುವಿನ ಆರೈಕೆಗಾಗಿ ಮೇಲಿನ ಅಧಿನಿಯಮದಡಿಯಲ್ಲಿ ಸೂಚಿಸಿದಂತೆ ಬಿಡುವುಗಳನ್ನು ಪಡೆಯಬಹುದು.
***
17-7-16
ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಿಂದ ವಿನಾಯಿತಿ ಇದೆಯೇ?
ನಾನು ಸರ್ಕಾರಿ ನೌಕರನಾಗಿದ್ದು ನನಗೀಗ 57 ವರ್ಷ. ನಮ್ಮ ಮೇಲಾಧಿಕಾರಿಗಳು ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಸೂಚಿಸಿ ಮುಂದಿನ ವರ್ಷದಿಂದ ವಾರ್ಷಿಕ ವೇತನ ಬಡ್ತಿ, ಪದೋನ್ನತಿ ಇತ್ಯಾದಿಗಳನ್ನು ತಡೆಹಿಡಿಯಲಾಗುತ್ತದೆಂದು ಸೂಚಿಸುತ್ತಿದ್ದಾರೆ. ನಾನೀಗ ಇಷ್ಟರಲ್ಲೇ ಸ್ವಯಂ ನಿವೃತ್ತಿ ಹೊಂದಲು ಇಚ್ಛಿಸಿದ್ದು 50 ವರ್ಷಗಳು ದಾಟಿದ ಸರ್ಕಾರಿ ನೌಕರರಿಗೆ ಈ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಿಂದ ವಿನಾಯಿತಿ ಇದೆಯೇ?
| ಎಂ. ಎಸ್.ರಾಮಚಂದ್ರರಾವ್ ದಾವಣಗೆರೆ
ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಾವಳಿ 2012ರ ನಿಯಮ 3ರ ಪರಂತುಕದಲ್ಲಿ ಈ ನಿಯಮ ಜಾರಿಗೆ ಬಂದ ದಿನಾಂಕ 7.3.2012ಕ್ಕೆ 50 ವರ್ಷ ಪೂರೈಸಿದ ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಈಗಾಗಲೇ 57 ವರ್ಷಗಳಾಗುತ್ತಿರುವುದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದರಿಂದ ವಿನಾಯಿತಿ ದೊರಕುತ್ತದೆ. ಆದಕಾರಣ ನಿಮಗೆ ಎಲ್ಲಾ ವೇತನ ಬಡ್ತಿ , ಪದೋನ್ನತಿಗಳನ್ನು ನಿಯಮಾವಳಿ ರೀತ್ಯ ನೀಡಬೇಕಾಗುತ್ತದೆ.
***
18-7-16
ನಾನು ಡಿ ಗುಂಪಿನ ಸರ್ಕಾರಿ ನೌಕರನಾಗಿ 25 ವರ್ಷ ಸೇವೆ ಸಲ್ಲಿಸಿರುತ್ತೇನೆ. ಆದರೆ ಇತ್ತೀಚೆಗೆ ನಮ್ಮ ಮೇಲಧಿಕಾರಿಗಳು 2015 -16ನೇ ಸಾಲಿನ ಆಸ್ತಿದಾಯಿತ್ವದ ವಿವರ ಪಟ್ಟಿಕೆ ಸಲ್ಲಿಸಬೇಕೆಂದು ಸೂಚಿಸಿರುತ್ತಾರೆ. ಡಿ ಗುಂಪಿನ ನೌಕರರಿಗೆ ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 23 (1)ರಡಿಯಲ್ಲಿ ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ. ಹೀಗಿರುವಲ್ಲಿ ನಾನು ಆಸ್ತಿದಾಯಿತ್ವದ ವಿವರ ಪಟ್ಟಿಕೆಯನ್ನು ಯಾವ ನಿಯಮದಡಿಯಲ್ಲಿ ಸಲ್ಲಿಸಬೇಕು?
| ಬಿ.ಎನ್. ಮಂಜುನಾಥ ಚಿಕ್ಕಮಗಳೂರು.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 23 (1)ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಯಾವುದೇ ಸೇವೆಗೆ ಅಥವಾ ಹುದ್ದೆಗೆ ಅವನ ಮೊದಲು ನೇಮಕವಾದಾಗಮತ್ತು ತದನಂತರ ಪ್ರತಿ ವರ್ಷ ಮಾರ್ಚ್ 31ರ ಅಂತ್ಯಕ್ಕೆ ತನ್ನ ಮತ್ತು ತನ್ನ ಕುಟುಂಬದ ಎಲ್ಲಾ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಕೆಯನ್ನು ನಿಗದಿ ಪಡಿಸಿದ ನಮೂನೆಯಲ್ಲಿ ಸಲ್ಲಿಸತಕ್ಕದೆಂದು ಸೂಚಿಸಲಾಗಿದೆ. ಇದೇ ನಿಯಮಾವಳಿಯ ನಿಯಮ 23 (1) (ಡಿ) ಟಿಪ್ಪಣಿ 1ರಲ್ಲಿ ಡಿ ಗುಂಪಿನ ನೌಕರರು ಸಾಮಾನ್ಯವಾಗಿ ಈ ಆಸ್ತಿ ಋಣ ವಿವರ ಪಟ್ಟಿಕೆಯನ್ನು ಸಲ್ಲಿಸುವುದು ಅಗತ್ಯವಿಲ್ಲವೆಂದು ಸೂಚಿಸಲಾಗಿದೆ. ಆದರೆ ದಿನಾಂಕ 1.8.2015ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 90, ಸೆನಿಸಿ 2014ರಂತೆ ಡಿ ಗಂಪಿನ ನೌಕರರೂ ಸಹ ಆಸ್ತಿದಾಯಿತ್ವದ ವಿವರ ಪಟ್ಟಿಕೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಆದ ಕಾರಣ ನೀವು 2015-16ನೇ ಸಾಲಿನ ನಿಮ್ಮ ಮತ್ತು ನಿಮ್ಮ ಕುಟುಂಬದ ಆಸ್ತಿ ಉತ್ತರದಾಯಿತ್ವ ವಿವರ ಪಟ್ಟಿಕೆಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
***
19-7-16
ನಾನು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು 6 ತಿಂಗಳು ಸೇವೆ ಸಲ್ಲಿಸಿರುತ್ತೇನೆ. ಇದೀಗ ಸರ್ಕಾರದಿಂದ ಕರೆಯುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ (ಪಿಡಿಓ) ಅರ್ಜಿ ಸಲ್ಲಿಸಲು ಬಯಸಿದ್ದು, ನಮ್ಮ ಮೇಲಧಿಕಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ಕೋರಿದಾಗ ಅವರು ನಿಮ್ಮ ಪರೀಕ್ಷಾರ್ಥ ಅವಧಿ ಮುಗಿಯುವವರೆಗೂ ನೀಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ. ಇದಕ್ಕೆ ಸೇವಾ ಕಾನೂನು ರೀತ್ಯ ಪರಿಹಾರ ಇದೆಯೇ?
| ಪವಿತ್ರಾ ಎಂ. ತಿಪಟೂರು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು1977ರ ನಿಯಮ 11ರಡಿಯಲ್ಲಿ ಯಾವುದೇ ಸೇವೆ ಅಥವಾ ಹುದ್ದೆಗೆ ಅರ್ಜಿ ಸಲ್ಲಿಸುವ ಸರ್ಕಾರಿ ನೌಕರನು ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸುವಾಗ ಅನುಮತಿಯನ್ನು ನೇಮಕಾತಿ ಪ್ರಾಧಿಕಾರವು ನೀಡಬೇಕಾಗುತ್ತದೆ. 1977ರ ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಾವಳಿ ರೀತ್ಯ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿರಾಕರಿಸುವುದು ಕ್ರಮಬದ್ಧವಾಗಿರುವುದಿಲ್ಲ. ಸೇವೆಗೆ ಸೇರಿದ ದಿನದಿಂದ ಪ್ರತಿಯೊಬ್ಬ ವ್ಯಕ್ತಿ ಎಲ್ಲಾ ಸೇವಾ ನಿಯಮಗಳಿಗೆ ಬದ್ಧನಾಗಿರುತ್ತಾನೆ. ಪರೀಕ್ಷಾರ್ಥ ಅವಧಿ ಕೇವಲ ಅವನ ಕಾರ್ಯಕ್ಷಮತೆ ಮತ್ತು ನಡವಳಿಕೆಯನ್ನು ಅವಲೋಕಿಸುವುದಕ್ಕೋಸ್ಕರ ನಿಗದಿಪಡಿಸಲಾಗಿರುತ್ತದೆ. ಹೀಗಿರುವುದರಿಂದ ನಿಮ್ಮ ಮೇಲಧಿಕಾರಿಯವರು ನಿರಾಕ್ಷೇಪಣಾಪತ್ರ (ಎನ್ಓಸಿ) ನೀಡಲು ನಿರಾಕರಿಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ.
***
20-7-16
ದೈಹಿಕ ತೊಂದರೆಗಳು ಹೆಚ್ಚಾಗಿವೆ ನಾನು ಏನು ಮಾಡಬೇಕು?
ನಾನು ಒಬ್ಬ ಅಂಗವಿಕಲ ಸರ್ಕಾರಿ ನೌಕರ(ಶೇ.80 ಕೇಳಿಸುವುದಿಲ್ಲ). ನನ್ನ ಅಧಿಕಾರಿಗಳು ಅನವಶ್ಯಕವಾಗಿ ನನಗೆ ತೊಂದರೆ ಕೊಡುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚೇರಿ ಕೆಲಸ, ಅಲ್ಲದೆ ಬೇರೆ ಪ್ರಭಾರಿ ಕೆಲಸ ಅಂದರೆ ಸಂಘದ ಸಮಾಪನಾಧಿಕಾರಿ ಹುದ್ದೆ ನಿರ್ವಹಣೆಗೆ ಆದೇಶಿಸಿರುತ್ತಾರೆ. ಕೆಲಸದ ಒತ್ತಡದಿಂದ ಹಾಗೂ ನನ್ನ ಕಿವಿಯ ಅಂಗವಿಕಲತೆಯಿಂದ ನನಗೆ ತುಂಬಾ ಮಾನಸಿಕ ತೊಂದರೆ ಕೊಡುವ ಉದ್ದೇಶದಿಂದ ನನ್ನ ಮೇಲೆ ಶಿಸ್ತು ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಲಾಗಿದೆ. ಇದು ಅಲ್ಲದೆ ನನಗೆ 285 ನಿಯಮದಡಿಯಲ್ಲಿ ಸೇವೆಯಿಂದ ತೆಗೆದುಹಾಕಲು ಪ್ರಸ್ತಾವನೆ ಸಹ ತಯಾರಿ ನಡೆಸಲಾಗಿದೆ. ಇದರಿಂದ ನಾನು ತುಂಬಾ ಮಾನಸಿಕ ತೊಂದರೆಯಲ್ಲಿದ್ದು, ನನ್ನ ದೈಹಿಕ ತೊಂದರೆಗಳು ಸಹ ಹೆಚ್ಚಾಗಿವೆ. ನನಗೀಗ 58 ವರ್ಷ ಕಳೆದಿದೆ. ದಯವಿಟ್ಟು ಈ ಬಗ್ಗೆ ನಾನು ಏನು ಮಾಡಬೇಕು ತಿಳಿಸಿ.
ಶಿವಶಂಕರ ಶಾಬಾದಿ, ಯಾದಗಿರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 277ರಂತೆ ಸರ್ಕಾರಿ ನೌಕರ ತನ್ನ ಹುದ್ದೆಗೆ ಅಸಮರ್ಥನಾಗಿದ್ದಾನೆಂದು ವೈದ್ಯಾಧಿಕಾರಿಗಳು ಶಿಫಾರಸ್ಸು ಮಾಡಿದರೆ ಹಾಗೂ ಈ ರೀತಿಯಾಗಿ ಕಡ್ಡಾಯವಾಗಿ ನಿವೃತ್ತಿಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸುವ ಉನ್ನತಾಧಿಕಾರಿಗಳ ಸಭೆಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಈ ಪ್ರಸ್ತಾವನೆ ಹಿನ್ನೆಲೆಯಲ್ಲಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಚಿವ ಸಂಪುಟವು ತೀರ್ವನ ಕೈಗೊಳ್ಳಬೇಕಾಗುತ್ತದೆ. ಹೀಗಾಗಿರುವುದರಿಂದ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆನೀವು ಈಗಾಗಲೇ 58 ವರ್ಷ ದಾಟಿರುವುದರಿಂದ ನೀವು ಸ್ವಯಂ ನಿವೃತ್ತಿ ಪಡೆದರೂ ಸೇವಾ ಅಧಿಕ್ಯವು ಲಭ್ಯ.
***
21-7-16
***
22-7-16
ನಮ್ಮ ತಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡುತ್ತಿದ್ದೇನೆ. ಈ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದು ಇದನ್ನು ಯಾವ ರೀತಿ ಮರುಪಾವತಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆ?
ಐ ಬಿ.ಎನ್. ಬಿರಾದಾರ್ ವಿಜಯಪುರ
ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಜ್ಯೋತಿ ಸಂಜೀವಿನಿ ಎಂಬ ನೂತನ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 7 ಮಾರಣಾಂತಿಕ ಕಾಯಿಲೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಅಥವಾ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಕೊಡಿಸಿದರೆ ಸುವರ್ಣ ಆರೋಗ್ಯ ಟ್ರಸ್ಟ್ ಮುಖಾಂತರ ವೆಚ್ಚವಾಗಿರುವ ಮೊಬಲಗನ್ನು ಆಯಾ ಆಸ್ಪತ್ರೆಗೆ ನೇರವಾಗಿ ಸಂದಾಯ ಮಾಡಲು ಸೂಚಿಸಲಾಗಿದೆ. ಹೀಗಾಗಿ ಜ್ಯೋತಿ ಸಂಜೀವಿನಿ ಯೋಜನೆಯಡಿ ನೀವು ಸರ್ಕಾರವು ಮಾನ್ಯ ಮಾಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಆ ಆಸ್ಪತ್ರೆ ಮೂಲಕ ಮರು ಸಂದಾಯಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ ನಿಮಗೆ ಈ ವೈದ್ಯಕೀಯ ವೆಚ್ಚದ ಮೊಬಲಗು ನಗದು ರಹಿತವಾಗಿ ಲಭ್ಯವಾಗುತ್ತದೆ.
***
25-7-16
ಮರಣ ಉಪದಾನ ಮಾತ್ರ ನೀಡಿದ್ದಾರೆ ಕಮ್ಯುಟೇಷನ್ ನೀಡಿರುವುದಿಲ್ಲ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ನನ್ನ ಪತಿ ದಿನಾಂಕ: 31.01.2016ರಂದು ನಿವೃತ್ತಿ ಹೊಂದಿ ದಿನಾಂಕ: 04.02.2016ರಂದು ನಿಧನರಾಗಿರುತ್ತಾರೆ. ನನ್ನ ಪತಿಯವರು ಲಿಖಿತವಾಗಿ ನಿವೃತ್ತಿ ಹೊಂದಲು ಅನುಮತಿ ಕೋರಿದಾಗ ಅದಕ್ಕೆ ಸ್ಪಂದಿಸದೇ ಇದ್ದುದರಿಂದ ಪಿಂಚಣಿ ದಾಖಲೆಗಳಿಗೆ ನಾನೇ ಸಹಿ ಮಾಡಿದ್ದು ನನಗೆ ಮರಣ ಉಪದಾನ ಮಾತ್ರ ನೀಡಿದ್ದಾರೆ ಕಮ್ಯುಟೇಷನ್ ನೀಡಿರುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
|ವಿಜಯಲಕ್ಷ್ಮಿ, ಕಲಬುರಗಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292 (ಬಿ) ರೀತ್ಯಾ ನಿವೃತ್ತಿ ವೇತನದ ಸೌಲಭ್ಯಗಳನ್ನು ಪಡೆಯುವ ಮೊದಲೇ ಸರ್ಕಾರಿ ನೌಕರ ನಿಧನರಾದರೆ ಅವನ ಕುಟುಂಬಕ್ಕೆ ಮರಣ ಉಪದಾನ ನೀಡಬೇಕೆಂದು ನಿಯಮಾವಳಿಯು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 376ರಂತೆ ಕಮ್ಯುಟೇಷನ್ ಮೊಬಲಗನ್ನು ನೀಡಲು ಬರುವುದಿಲ್ಲ. ಆದ್ದರಿಂದ ನಿಮಗೆ ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನ ನೀಡಿರುವುದು ನಿಯಮಾವಳಿ ರೀತ್ಯಾ ಕ್ರಮಬದ್ಧವಾಗಿದೆ.
***
26-7-16
ನಾನು ಅನುದಾನಿತ ಪ್ರೌಢಶಾಲೆಯಲ್ಲಿ ದಿನಾಂಕ: 23.11.1983ರಿಂದ ಶಿಕ್ಷಕಿಯಾಗಿ ಸೇರಿ ದಿನಾಂಕ: 23.11.2013ಕ್ಕೆ 30 ವರ್ಷಗಳ ಸೇವೆ ಪೂರ್ಣಗೊಳಿಸಿದ್ದೇನೆ. ಏತನ್ಮಧ್ಯೆ 24.04.2014ಕ್ಕೆ ನನಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ದೊರಕಿದೆ. ದಿನಾಂಕ: 31.05.2016ರಂದು ನಾನು ಸೇವೆಯಿಂದ ನಿವೃತ್ತಿ ಹೊಂದಿದ್ದು ಮಹಾಲೇಖಪಾಲರು ನನ್ನ ನಿವೃತ್ತಿ ವೇತನ ನಿಗದಿಪಡಿಸುವಾಗ 30 ವರ್ಷದ ವಿಶೇಷ ವೇತನ ಬಡ್ತಿಯನ್ನು ಕಡಿತಗೊಳಿಸಿರುವರು. ನಾನು 30 ವರ್ಷದ ವಿಶೇಷ ಬಡ್ತಿಗೆ ಅರ್ಹಳೇ, ಇಲ್ಲವೋ ದಯವಿಟ್ಟು ತಿಳಿಸಿ.
ದಿನಾಂಕ: 14.06.2012ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ12ಎಸ್ಆರ್ಪಿ2012 ರಂತೆ ರಾಜ್ಯ ವೇತನ ಶ್ರೇಣಿಗಳಲ್ಲಿನ ಮೊದಲ 15 ಶ್ರೇಣಿಗಳಲ್ಲಿರುವ ಯಾವುದೇ ಒಂದು ಹುದ್ದೆಯಲ್ಲಿ 30 ವರ್ಷಗಳ ಕಾಲ ಒಂದೂ ಪದೋನ್ನತಿಯನ್ನು ಪಡೆಯದೆ ಮುಂದುವರೆದಿರುವ ನೌಕರರಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೆಂದು ಸೂಚಿಸಲಾಗಿದೆ. ಈ ಹೆಚ್ಚುವರಿ ವೇತನ ಬಡ್ತಿಯನ್ನು ನೇಮಕಾತಿ ಪ್ರಾಧಿಕಾರವೇ ಷರತ್ತುಗಳು ಪೂರ್ಣಗೊಂಡಿದ್ದಲ್ಲಿ ಮಂಜೂರು ಮಾಡಬಹುದೆಂದು ಸೂಚಿಸಿದೆ. ಆದರೆ ಆರನೇ ಕಂಡಿಕೆಯಲ್ಲಿ ಈಗಾಗಲೇ ಕನಿಷ್ಟ 1 ಪದೋನ್ನತಿಯನ್ನು ಪಡೆದಿರುವ ನೌಕರರಿಗೆ ಈ ಆದೇಶವು ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ 30 ವರ್ಷಗಳ ಒಂದೇ ಹುದ್ದೆಯಲ್ಲಿನ ಸೇವಾ ಹುದ್ದೆ ಮುಗಿದ ನಂತರ ಮುಖ್ಯೋಪಾಧ್ಯಾಯರ ಪದೋನ್ನತಿ ಲಭ್ಯವಾಗಿರುವುದರಿಂದ ಈ ವಿಶೇಷ ವೇತನ ಬಡ್ತಿಯನ್ನು ಮಹಾಲೇಖಪಾಲರು ಕಡಿತಗೊಳಿಸಿರುವುದು ಕ್ರಮಬದ್ಧವಾಗಿಲ್ಲ.
***
27-7-16
***
28-7-16
ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಬಹುದೇ?
2005ರಲ್ಲಿ ನನ್ನ ಪತಿ ಸರ್ಕಾರಿ ನೌಕರರಾಗಿ ಸೇವೆಗೆ ಸೇರಿರುತ್ತಾರೆ. 2008ರಲ್ಲಿ ನಮ್ಮ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕ್ಷುಲ್ಲಕ ಕಾರಣಗಳಿಂದ ಪತಿ ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗ, ದಿನಾಂಕ 10.06.2016ರಂದು ಹೃದಯಾಘಾತದಿಂದ ಪತಿ ನಿಧನರಾಗಿದ್ದಾರೆ. ಇದರಿಂದ ನನಗೆ ಪಿಂಚಣಿ ಕುಟುಂಬ ಸೌಲಭ್ಯ ಸಿಗಲಿದೆಯೇ? ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಬಹುದೇ?
ಐ ಜ್ಯೋತಿ ಎಸ್.ಪಾಟೀಲ್ ಬೆಳಗಾವಿ.
ವಿವಾಹ ವಿಚ್ಛೇದನ ಆಗದಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292ಬಿಯಂತೆ ನಿಮಗೆ ಮರಣ ಉಪದಾನ ಹಾಗೂ ಕರ್ನಾಟಕ ಸರ್ಕಾರಿ ಸೇವಾ(ಕುಟುಂಬ ಪಿಂಚಣಿ) ನಿಯಮಗಳು 2002ರಂತೆ ಕುಟುಂಬ ನಿವೃತ್ತಿ ವೇತನ ಲಭ್ಯ. ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996 ನಿಯಮ 3ರಂತೆ ನಿಮಗೆ ಅನುಕಂಪದ ಮೇರೆಗೆ ಉದ್ಯೋಗಾವಕಾಶ ಲಭ್ಯ. ಈ ದೃಷ್ಟಿಯಿಂದ ಒಂದು ವರ್ಷದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.
***
29-7-16
ತಂದೆಯವರ ನೌಕರಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ನಾನು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದು, ತಂದೆ ಅನಾರೋಗ್ಯದ ನಿಮಿತ್ತ 8 ತಿಂಗಳು ಕರ್ತವ್ಯಕ್ಕೆ ಗೈರಾಗಿದ್ದೇನೆ. ಏತನ್ಮಧ್ಯೆ ಇಲಾಖೆಯಿಂದ ನನ್ನನ್ನು ಡಿಚಾರ್ಜ್ ಮಾಡಿದ್ದಾರೆ. ತಂದೆ ನಿಧನರಾಗಿದ್ದು, ಅವರು ಆರೋಗ್ಯ ಇಲಾಖೆಯಲ್ಲಿ ನೌಕರರಾಗಿದ್ದರು. ಅನುಕಂಪದ ಮೇರೆಗೆ ತಂದೆಯವರ ನೌಕರಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ಐ ಬಸವರಾಜ್, ಮೈಸೂರು.
ಕರ್ನಾಟಕ ಸಿವಿಲ್ ಸೇವೆ(ಪ್ರೊಬೆಷನ್ ನಿಯಮಾವಳಿ ನಿಯಮ 2(1)ರ ಪ್ರಕಾರ ಪ್ರೊಬೆಷನ್ ಮೇರೆಗೆ ನೇಮಿಸಲಾದ ಎಂದರೆ ಪರೀಕ್ಷಾರ್ಥವಾಗಿ ನೇಮಿಸಿದ್ದು ಎಂದರ್ಥ. ನೇಮಕವಾದ ಹುದ್ದೆಗೆ ಸೂಕ್ತವೋ ಅಥವಾ ಅಲ್ಲವೋ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ನೇಮಕವಾಗಿರುವ ವ್ಯಕ್ತಿಗೆ(ಪ್ರೊಬೇಷನರ್) ಸರದಿ ನಿಯಮ 3ರ ಪ್ರಕಾರ ವಿಶೇಷ ನಿಯಮಯದ ಹೊರತು ಕರ್ನಾಟಕ ಸರ್ಕಾರಿ ಸೇವೆಗೆ ನೇಮಕವಾಗುವ ಪ್ರತಿಯೊಬ್ಬ ನೌಕರ 2 ವರ್ಷಗಳ ಪ್ರೊಬೆಷನ್ ಅವಧಿಯಲ್ಲಿರುತ್ತಾನೆ. ಪ್ರೊಬೆಷನ್ ಅವಧಿಯಲ್ಲಿ ನೌಕರ ಅನಧಿಕೃತವಾಗಿ ಗೈರು ಹಾಜರಾದರೆ ಅಥವಾ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದದಿದ್ದರೆ ತನ್ನ ಹುದ್ದೆಯನ್ನು ಹೊಂದುವುದಕ್ಕೆ ಸೂಕ್ತವಲ್ಲವೆಂದು ನಿರ್ಧಾರಕ್ಕೆ ನೇಮಕಾತಿ ಪ್ರಧಿಕಾರ ಬಂದಲ್ಲಿ ಅವನನ್ನು ಸಿಸಿಎ ನಿಯಮಾವಳಿಯಲ್ಲಿ ಕ್ರಮ ಕೈಗೊಳ್ಳದೆ ಪ್ರೊಬೆಷನ್ ಅವಧಿಯ ಯಾವುದೇ ಹಂತದಲ್ಲಿ ಸೇವೆಯಿಂದ ಬಿಡುಗಡೆ ಮಾಡಬಹುದು. ಆದರೆ ಈ ರೀತಿ ಸೇವೆಯಿಂದ ತೆಗೆದುಹಾಕಲ್ಪಟ್ಟ ಸರ್ಕಾರಿ ನೌಕರನು ಕರ್ನಾಟಕ ಸಿವಿಲ್ ಸೇವೆ(ಅನುಕಂಪದ ಮೇರೆಗೆ) ನೇಮಕ ನಿಯಮಗಳು 1996ರ ಮೇರೆಗೆ ನೌಕರಿ ಪಡೆಯಲು ಅರ್ಹ. ಆದಕಾರಣ ನಿಮ್ಮ ತಂದೆಯವರ ನೌಕರಿಯನ್ನು ಈ ನಿಯಮಾವಳಿ ರೀತ್ಯ ಪಡೆಯಬಹುದು.
***
31-7-16
ಕಳೆದ ವರ್ಷ ಡಿಸೆಂಬರ್ನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ. ಇತ್ತೀಚೆಗೆ ನನ್ನ ಪತ್ನಿ ಅನಾರೋಗ್ಯ ಪೀಡಿತಳಾಗಿದ್ದು, ಆಕೆಗೆ ಚಿಕಿತ್ಸೆ ಕೊಡಿಸಲು ಪಿಂಚಣಿ ಹಣ ಸಾಲದಂತಾಗಿದೆ. ಹೀಗಿರುವಾಗ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ಪಡೆಯಲು ನಿಯಮಗಳಲ್ಲಿ ಅವಕಾಶಗಳಿವೆಯೇ?
ಐ ಬಸವಾರಾಧ್ಯ, ದಾವಣಗೆರೆ
ಕರ್ನಾಟಕ ಸರ್ಕಾರಿ ನೌಕರರ ಸರ್ಕಾರಿ ನಿವೃತ್ತಿ ವೇತನಗಳ ವೈದ್ಯಕೀಯ ಚಿಕಿತ್ಸಾ ನಿಯಮಗಳು 1969ರಂತೆ ನಿವೃತ್ತ ಸರ್ಕಾರಿ ನೌಕರರಿಗೆ ಈ ನಿಯಮಾವಳಿ ನಿಯಮ 5ರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೌಕರನ ಪತ್ನಿಗೆ ಚಿಕಿತ್ಸೆ ಕೊಡಿಸಬಹುದು. ಅಲ್ಲದೆ ನಿವೃತ್ತಿ ಸರ್ಕಾರಿ ನೌಕರನು ಅಥವಾ ಅವನ ಪತ್ನಿ ಅನಾರೋಗ್ಯ ಪೀಡಿತವಾಗಿ ಆಸ್ಪತ್ರೆಗೆ ಸೇರಿದರೆ ವಾರ್ಡ್ ವೆಚ್ಚ ಇತ್ಯಾದಿಗಳನ್ನು ವಿನಾಯಿತಿ ನೀಡಲು ಸೂಚಿಸಿದೆ. ಆದ್ದರಿಂದ ನೀವು ಈ ನಿಯಮಾವಳಿಯಂತೆ ನಿವೃತ್ತ ಸರ್ಕಾರಿ ನೌಕರನಿಗೆ ದೊರಕುವ ಎಲ್ಲ ಸೌಲಭ್ಯಗಳನ್ನು ಪಡೆಯಬಹುದು.
****