Category Archives: ಸೇವೆಗೆ ಸಂಬಂಧಿಸಿದ ವಿವರಗಳು

ನೌಕರರ ಪಿಂಚಣಿ ಹೆಚ್ಚಳ ಗೊಂದಲಕ್ಕೆ ತೆರೆ.

ಸರಕಾರಿ ನೌಕರರ ಪಿಂಚಣಿ ಹೆಚ್ಚಳ ಗೊಂದಲಕ್ಕೆ ತೆರೆ

-80 ವರ್ಷ ಪೂರೈಸಿದ ನಂತರವಷ್ಟೇ ಶೇ.20ರಷ್ಟು ಏರಿಕೆಗೆ ಅರ್ಹ-

ಬೆಂಗಳೂರು : ನಿವೃತ್ತ ಸರಕಾರಿ ನೌಕರರ ಪಿಂಚಣಿ ಹೆಚ್ಚಳ ಕುರಿತಂತೆ ಇದ್ದ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ.

ನಿವೃತ್ತ ನೌಕರರು 80ನೇ ವರ್ಷಕ್ಕೆ ಪದಾರ್ಪಣೆ ಮಾಡಿದರೆ ಸಾಲದು, 80 ವರ್ಷ ಪೂರೈಸಿ 81ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಅವರು ಪಿಂಚಣಿ ಹೆಚ್ಚಳಕ್ಕೆ ಅರ್ಹರು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ಸರಕಾರದ ಅಧಿಸೂಚನೆಯನ್ನು ಗ್ರಹಿಸುವುದರಲ್ಲಿ ಉಂಟಾಗಿದ್ದ ಗೊಂದಲವನ್ನು ನಿವಾರಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(ಎಚ್ಡಿಎಂಸಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಮತ್ತು ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

”ಸರಕಾರದ ಅಧಿಸೂಚನೆ ಹಾಗೂ ನಿಯಮಗಳನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವುದು ಸರಿ. ಸರಕಾರದ ಅಧಿಸೂಚನೆಯಂತೆ, 80 ವರ್ಷ ಪೂರೈಸಿದ ನಿವೃತ್ತ ನೌಕರರು ಪಿಂಚಣಿ ಪಡೆಯಲು ಅರ್ಹರಲ್ಲ. 80 ವರ್ಷ ಎಂದರೆ, 80 ವರ್ಷವನ್ನು ಯಶಸ್ವಿಯಾಗಿ ಪೂರೈಸಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಮೊದಲ ದಿನದಿಂದಲೇ ಅವರು ಶೇ.20ರಷ್ಟು ಪಿಂಚಣಿ ಹೆಚ್ಚಳ ಅರ್ಹರಾಗುತ್ತಾರೆ,”ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ ರಾಜ್ಯ ಸರಕಾರ 2010ರ ಅಕ್ಟೋಬರ್ನಲ್ಲಿ ಹೊರಡಿಸಿದ ಅಧಿಸೂಚನೆಯಂತೆ, 1993 ಜು.1ರ ನಂತರ ನಿವೃತ್ತರಾದ ಸಿಬ್ಬಂದಿಗೆ 80 ವರ್ಷ ಪೂರೈಸಿದವರಿಗೆ ನಾನಾ ಹಂತದಲ್ಲಿ ಪಿಂಚಣಿ ಹೆಚ್ಚಳ ಮಾಡಿತ್ತು. ಆದು 2006ರ ಏ.1ರಿಂದ ನಿವೃತ್ತ ಸಿಬ್ಬಂದಿಗೆ ಅನ್ವಯವಾಗಲಿತ್ತು.

ಅದರಂತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ನಿವೃತ್ತರಾಗಿದ್ದ ಎಸ್.ವಿ.ಬುಡಪನಹಳ್ಳಿ 2014ರ ಅ.10ರಂದು ಅರ್ಜಿ ಸಲ್ಲಿಸಿ, ತನಗೆ 80 ವರ್ಷವಾಗಿದೆ, ಹಾಗಾಗಿ ಶೇ.20ರಷ್ಟು ಹೆಚ್ಚಿನ ಪಿಂಚಣಿ ನೀಡಬೇಕು ಎಂದು ಕೋರಿದ್ದರು. ಆದರೆ ಅಧಿಕಾರಿಗಳು ಅ.28ರಂದು ಅವರ ಅರ್ಜಿಯನ್ನು ತಿರಸ್ಕರಿಸಿ,”ಬುಡಪನಹಳ್ಳಿ ಅವರೇ ಹೇಳಿರುವಂತೆ ಅವರು ಹುಟ್ಟಿದ್ದ 1935ರ ಮೇ 1ರಂದು, ಹಾಗಾಗಿ ಅವರು ಈಗಷ್ಟೇ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 80 ವರ್ಷ ಪೂರೈಸಿಲ್ಲ . ಹಾಗಾಗಿ ಹೆಚ್ಚಿನ ಪಿಂಚಣಿ ಮಂಜೂರು ಮಾಡಲು ಸಾಧ್ಯವಿಲ್ಲ ,”ಎಂದು ಹೇಳಿದ್ದರು.

ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಏಕಸದಸ್ಯಪೀಠ, ಅವರ ಅರ್ಜಿಯನ್ನು ಮಾನ್ಯ ಮಾಡಿ, ಶೇ.20ರಷ್ಟು ಪಿಂಚಣಿ ಹೆಚ್ಚಳ ಮಾಡುವಂತೆ ನಿರ್ದೇಶನ ನೀಡಿತ್ತು. ಆ ತೀರ್ಪು ಪ್ರಶ್ನಿಸಿ ಎಚ್ಡಿಎಂಸಿ ವಿಭಾಗೀಯ ಪೀಠದ ಮೊರೆ ಹೋಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ ಈ ತೀರ್ಪು ನೀಡಿದೆ.